ಕಾಮಗಾರಿಗೂ ಮುನ್ನ 1462 ಕೋಟಿ ಕಮಿಷನ್: ಬಿಎಸ್ವೈ
Team Udayavani, Apr 5, 2019, 6:00 AM IST
ಹಾವೇರಿ: ರಾಜ್ಯ ಸರ್ಕಾರ ಐದು ಕಾಮಗಾರಿಗಳಿಗೆ ಸಂಬಂ ಧಿಸಿ 1462 ಕೋಟಿ ರೂ.ಗಳನ್ನು ಕಾಮಗಾರಿ ಆಗುವ ಮುನ್ನವೇ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಗುರುವಾರ ನಾಮಪತ್ರ ಸಲ್ಲಿಸಿದ ಬಳಿಕ ನಗರದ ಮುನ್ಸಿಪಲ್ ಮೈದಾನದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿ ಆಗದೆ ಮುಂಗಡ ಹಣ ಹೇಗೆ ಕೊಟ್ಟಿದ್ದಿರಿ? ಇದು ಜನರ ಹಣ ದರೋಡೆ ಅಲ್ಲದೇ ಇನ್ನೇನು? ಮೋದಿ ಕಳೆದ ಚುನಾವಣೆಯಲ್ಲಿ ಆಶ್ವಾಸನೆ ಕೊಟ್ಟಂತೆ ಐದು ವರ್ಷ ಭ್ರಷ್ಟಾಚಾರ ರಹಿತ ಆಡಳಿತ ದೇಶಕ್ಕೆ ಕೊಟ್ಟಿದ್ದಾರೆ. ದೇಶ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ್ದರು. ಅದೇ ರೀತಿ ಕೆಲಸ ಮಾಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಮಾಡಿದ್ದಾರೆ ಎಂದರು.
ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ದೇವೇಗೌಡ, ಕೋಲಾರದಲ್ಲಿ ಮುನಿಯಪ್ಪ ಮನೆಗೆ ಹೋಗುವುದು ನಿಶ್ಚಿತ. ಕಾಂಗ್ರೆಸ್ ಎಲ್ಲಿ ಗೆಲ್ಲುತ್ತೆ ಎಂದು ಹೇಳುವುದೇ ಕಷ್ಟವಾಗಿದೆ. ಬಿಜೆಪಿ ಈ ಬಾರಿ ರಾಜ್ಯದಲ್ಲಿ ಕನಿಷ್ಠ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಈಗಲೇ ಕಚ್ಚಾಡಿಕೊಳ್ಳುತ್ತಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸ್ಥಿತಿ, ಅವರ ಸಂಬಂಧ ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಹೇಗಿರುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಒಂದು ಮಾತಂತೂ ನಿಜ. ಹೇಗೆ, ಏನು ಎಂದು ಕೇಳಬೇಡಿ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಮೊತ್ತೂಮ್ಮೆ ಬಿಜೆಪಿ ಆಡಳಿತಕ್ಕೆ ಬರುವುದು ನಿಶ್ಚಿತ ಎಂದರು.