ಶೀಘ್ರ ಔರಾದ್ಕರ್ ವರದಿ ಅನುಷ್ಠಾನಕ್ಕೆ ಕ್ರಮ: ಬವಸರಾಜ ಬೊಮ್ಮಾಯಿ
Team Udayavani, Sep 5, 2019, 3:28 PM IST
ಹಾವೇರಿ: ಪೊಲೀಸರಿಗೆ ಅನುಕೂಲವಾಗುವ ಔರಾದ್ಕರ್ ವರದಿ ಅನುಷ್ಠಾನಕ್ಕೆ ಪೂರಕ ಚರ್ಚೆ ನಡೆದಿದೆ. ಶೀಘ್ರ ವರದಿ ಅನುಷ್ಠಾನಕ್ಕೆ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಬವಸರಾಜ ಬೊಮ್ಮಾಯಿ ತಿಳಿಸಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇಡಿ ಅಧಿಕಾರಿಗಳ ವಿಚಾರಣೆಗೆ ಡಿ ಕೆ ಶಿವಕುಮಾರ್ ಸರಿಯಾಗಿ ಉತ್ತರಿಸಿದ್ದರೆ ಅವರನ್ನು ಬಂಧಿಸುತ್ತಿರಲಿಲ್ಲ. ಹೆಚ್ಚಿನ ಮಾಹಿತಿ ಕಲೆ ಹಾಕಲು ಡಿಕೆಶಿ ಅವರನ್ನು ಬಂಧಿಸಲಾಗಿದೆ. ಈ ವಿಚಾರ ಕೋರ್ಟಿನಲ್ಲಿದೆ. ಅಧಿಕಾರಿಗಳು ಕಾನೂನಿನ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೂ ಡಿಕೆಶಿ ಬಂಧನಕ್ಕೂ ಸಂಬಂಧ ಇಲ್ಲ ಎಂದರು.
ಡಿ.ಕೆ.ಶಿವಕುಮಾರ ಬಂಧನದ ಬಳಿಕ ರಾಮನಗರ ಹಾಗೂ ಕನಕಪುರದಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿನ ಕೆಲ ಪ್ರತಿಭಟನಾಕಾರರು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಾಮನಗರ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕನಕಪುರ ಮತ್ತು ರಾಮನಗರಗಳಲ್ಲಿ ಶಾಂತಿ ಸಭೆ ಮಾಡಲಾಗುತ್ತಿದೆ. ಜೊತೆಗೆ ಈಗಾಗಲೇ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಂದರು.