ಕ್ವಾರಂಟೈನ್ಲ್ಲಿದ್ದ ವ್ಯಕ್ತಿಗಳು ನಿಯಮ ಮೀರಿದರೆ ಕ್ರಮ: ಎಡಿಸಿ ಎಚ್ಚರಿಕೆ
Team Udayavani, Jun 20, 2020, 4:53 PM IST
ಹಾವೇರಿ: ಜಿಲ್ಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಬೇಕಾದ ಕೆಲ ವ್ಯಕ್ತಿಗಳು ನಿಯಮ ಮೀರಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಯಮ ಮೀರಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಜೂ. 18ರಂದು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕುರಿತು ಜಿಲ್ಲಾ ಕೋವಿಡ್ ವಾರ್ ರೂಂನಿಂದ ಮಾಹಿತಿ ಬಂದಿದೆ. ಇಂಥ ವ್ಯಕ್ತಿಗಳ ಮೇಲೆ ಕೋವಿಡ್-19 ಆಕ್ಟ್ 2020, ಎಪಿಡಮಿಟಿಕ್ ಡಿಸಿಸ್ ಆಕ್ಟ್ 1897ರ ಅಡಿ ನಿಯಮಾನುಸಾರ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ದಾಖಲಿಸಲು ಕೋರಲಾಗಿದೆ.
ಹೋಂ-ಕ್ವಾರಂಟೈನ್ ಹಾಗೂ ಇನ್ಸಿಟ್ಯೂಷನ್ ಕ್ವಾರಂಟೈನ್ಗೆ ಒಳಪಡಿಸಲಾದ ವ್ಯಕ್ತಿಗಳು ಕಡ್ಡಾಯವಾಗಿ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.