ಉಪ ಚುನಾವಣೆ ಬಳಿಕ ಬಿಜೆಪಿ ಸರಕಾರ ಇರುವುದಿಲ್ಲ: ದಿನೇಶ್ ಗುಂಡೂರಾವ್
Team Udayavani, Nov 29, 2019, 8:55 PM IST
ರಾಣೆಬೆನ್ನೂರು: ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುವುದಿಲ್ಲ. ಹಾಗಾಗಿ ಆರ್. ಶಂಕರ್ ಸಚಿವರಾಗುವುದು ಕನಸಿನ ಮಾತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕ ಆರ್. ಶಂಕರ್ಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಸುಳ್ಳು ಹೇಳುತ್ತ ಬಿಜೆಪಿಯವರು ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ. ಬಿಜೆಪಿ ಸುಳ್ಳುಗಾರರ ಸಂತೆಯಂತಾಗಿದೆ ಎಂದರು.
ಅನರ್ಹ ಶಾಸಕ ಆರ್. ಶಂಕರ್ ಸೋಲುವ ಭಯದಿಂದ ಅವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ, ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗೆ ಟಿಕೆಟ್ ಕೊಟ್ಟು ಪ್ರಚಾರದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ. ಕ್ಷೇತ್ರದ ಜನರು ತಮಗೆ ಕ್ರಿಮಿನಲ್ ಬೇಕೋ, ಸದಾಚಾರಿ ಬೇಕೋ ಎಂದು ನೀವೇ ತೀರ್ಮಾನಿಸಿ. ಸಿಎಂ ಕುರ್ಚಿ ಆಸೆಗಾಗಿ ಯಡಿಯೂರಪ್ಪ 17 ಶಾಸಕರನ್ನು ತಲಾ 20 ಕೋ.ರೂ. ಗಳಂತೆ ಖರೀದಿಸಿದ್ದಾರೆ. ರಾಜ್ಯ ಪ್ರವಾಹಕ್ಕೆ ಸಿಲುಕಿ ಬಹಳಷ್ಟು ಕುಟುಂಬಗಳು ಬೀದಿ ಪಾಲಾದರೂ ಅವರಿಗೆ ಪರಿಹಾರ ನೀಡದ ಯಡಿಯೂರಪ್ಪ ಚಿತ್ತ ಮುಂಬಯಿನಲ್ಲಿರುವ ಶಾಸಕರತ್ತಲೇ ಇತ್ತು. ರೈತರ ಸಂಕಷ್ಟಕ್ಕೆ ತಿರುಗಿಯೂ ನೋಡಲಿಲ್ಲ. ಮುಂದಿನ ಮೂರೂವರೆ ವರ್ಷಗಳ ಕಾಲ ತಾವೇ ಸಿಎಂ ಆಗಿ ಮುಂದುವರಿಯುವ ಉದ್ದೇಶದಿಂದ ಅತಿ ಹೆಚ್ಚು ಸುತ್ತಾಡಿ ಚುನಾವಣ ಪ್ರಚಾರ ಮಾಡುತ್ತಿದ್ದಾರೆ. ಅವರ ಕನಸು ನನಸಾಗದು ಎಂದರು.