ನನ್ನ ತವರು ಎಂದಿಗೂ ಮರೆಯಲ್ಲ : ಸಿಎಂ ಬಸವರಾಜ ಬೊಮ್ಮಾಯಿ
ನಾಡಿಗೆ ದೊರೆಯಾದರೂ ಕ್ಷೇತ್ರದ ಜನತೆಗೆ ಯಾವತ್ತಿಗೂ ಬಸವರಾಜ ಬೊಮ್ಮಾಯಿ|ಪ್ರತಿ ತಿಂಗಳು ತವರಿನ ಜನರ ಭೇಟಿಗೆ ವ್ಯವಸ್ಥೆ
Team Udayavani, Sep 2, 2021, 3:04 PM IST
ಹಾವೇರಿ: ನಾನು ಇವತ್ತೇನಾದರೂ ಈ ಸ್ಥಾನ ಪಡೆದುಕೊಂಡಿದ್ದೇನೆ ಅಂದರೆ ಅದರಲ್ಲಿ ನಿಮ್ಮದು ಪ್ರಮುಖ ಪಾತ್ರವಿದೆ. ಈಗ ಇಡೀ ರಾಜ್ಯದ ಜವಾಬ್ದಾರಿ ನನಗಿದೆ. ಆದರೆ ನನ್ನ ತವರು ಮನೆಯನ್ನು ನಾನು ಎಂದಿಗೂ ಮರೆಯಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನುಕಂಕಣಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ತಾಲೂಕು ತಡಸ ಗ್ರಾಮದಲ್ಲಿ ಬುಧವಾರ ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣ, ಕುಮಟಾ-ತಡಸ ರಸ್ತೆ ಸುಧಾರಣೆ, ಪಡುಬಿದ್ರಿ-ಚಿಕ್ಕಾಲಗುಡ್ಡ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಬಗೆಗಿನ ನನ್ನ ಕನಸುಗಳು ನನಸಾಗಿಸುವ ಕಾಲ ಕೂಡಿ ಬಂದಿದೆ. ಇದನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಇದು ಅತಿ ದೊಡ್ಡ ಗ್ರಾಪಂ ಇದೆ. ಇದಕ್ಕೆ ವಿಶೇಷ ಅನುದಾನಕೊಟ್ಟು ಸಮಗ್ರ ಅಭಿವೃದ್ಧಿ ಮಾಡುತ್ತೇನೆ.
ದೊಡ್ಡ ಗ್ರಾಮವಾಗಿರುವ ತಡಸನ್ನು ಬರುವ ದಿನಗಳಲ್ಲಿ ನಗರವನ್ನಾಗಿ ಪರಿವರ್ತನೆ ಮಾಡಲಾಗುವುದು. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮಾರ್ಚ್ ನಂತರ ಸರ್ಕಾರಿ ಪದವಿ ಕಾಲೇಜು, ಹೆಣ್ಣು ಮಕ್ಕಳಿಗಾಗಿ ಪ್ರೌಢಶಾಲೆ ಆರಂಭಿಸಲಾಗುವುದು. ಔದ್ಯೋಗಿಕರಣಕ್ಕೆ ಬೇಕಾಗಿರುವ ವಿಶೇಷ ಟೆಕ್ನಿಕಲ್ ತರಬೇತಿ ಸಂಸ್ಥೆ ಸ್ಥಾಪಿಸಲು ತೀರ್ಮಾನಿಸಿದ್ದೇನೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಇದ್ದರು.