ನಾಳೆ ಶಿಗ್ಗಾವಿ-ಸವಣೂರಿಗೆ ಸಿಎಂ
ಅಭಿವೃದ್ಧಿಕಾರ್ಯಕ್ರಮಉದ್ಘಾಟನೆ-ಶಂಕುಸ್ಥಾಪನೆ |ಶಿಷ್ಟಾಚಾರದಂತೆ ಕಾರ್ಯಕ್ರಮ ಸಿದ್ಧತೆ ಮಾಡಿಕೊಳ್ಳಲು ಡಿಸಿ ಸೂಚನೆ
Team Udayavani, Aug 31, 2021, 3:11 PM IST
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.1ರಂದು ಶಿಗ್ಗಾವಿ ಹಾಗೂ ಸವಣೂರು ಕ್ಷೇತ್ರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೋವಿಡ್ ಮಾನದಂಡನೆ ಪಾಲಿಸಿ ಶಿಷ್ಟಾಚಾರದಂತೆ ಕಾರ್ಯಕ್ರಮ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಸೋಮವಾರ ಪೂರ್ವ ಸಿದ್ಧತೆಗಾಗಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಹತ್ತು ಇಲಾಖೆಗಳ ವ್ಯಾಪ್ತಿಯ ಶಿಗ್ಗಾವಿ-ಸವಣೂರು ತಾಲೂಕು ವ್ಯಾಪ್ತಿಯ ಒಂಭತ್ತು ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಏಳುಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಸೆ.1ರಂದು ಶಿಗ್ಗಾವಿ ತಾಲೂಕು ತಡಸ, ಕಲಕಟ್ಟಿ-ರಾಜೀವ ಗ್ರಾಮ, ಬಾಡ, ಬಂಕಾಪುರ, ಮಣ್ಣೂರ, ಸವಣೂರ ಪಟ್ಟಣ, ಶಿಗ್ಗಾವಿ ಪಟ್ಟಣದಲ್ಲಿ ಆಯೋಜಿತವಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸರಳವಾಗಿ ಕೋವಿಡ್ ಮಾರ್ಗಸೂಚಿಯಂತೆ ಆಯೋಜಿಸಬೇಕು. ಸಾರ್ವಜನಿಕ ಸಮಾರಂಭಕ್ಕೆ ಹಾಗೂ ನಿಗದಿಗಿಂತ ಹೆಚ್ಚು ಜನರು ಗುಂಪುಗೂಡಲು ಅವಕಾಶವಿಲ್ಲ. ಬೃಹತ್ ವೇದಿಕೆ, ಆಸನ ವ್ಯವಸ್ಥೆ ಮಾಡಬಾರದು. ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಶಿಗ್ಗಾವಿ ಹಾಗೂ ಸವಣೂರು ಕ್ಷೇತ್ರದಲ್ಲಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೊಳ್ಳಲಿರುವ ಕಾಮಗಾರಿಗಳ ಮಾಹಿತಿ ಹಾಗೂ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ, ಶಿಲಾನ್ಯಾಸ ಹಾಗೂ ಉದ್ಘಾಟನಾ ಫಲಕಗಳ ತಯಾರಿ, ಕಾರ್ಯಕ್ರಮದ ಸ್ಥಳದಲ್ಲಿ ಚಿಕ್ಕದಾಗಿ ಶ್ಯಾಮಿಯಾನ ಹಾಕುವುದು ಹಾಗೂ ಆಯಾ ಇಲಾಖೆ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಆಮಂತ್ರಣ, ಆತಿಥ್ಯ ಸೇರಿದಂತೆ ಯಾವುದೇ ವ್ಯತ್ಯಯ ಹಾಗೂ ಲೋಪವಾಗದಂತೆ ಜವಾಬ್ದಾರಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಮಗಾರಿ ವಿವರ: ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಕುಮಟಾ-ತಡಸ ಹಾಗೂ ಪಡುಬಿದ್ರಿ-ಚಿಕ್ಕಾಲಗುಡ್ಡ ರಸ್ತೆ ಸುಧಾರಣೆ ಕಾಮಗಾರಿ ಮತ್ತು ಪ್ರವಾಸಿ ಮಂದಿರದ ನೂತನ ಕಟ್ಟಡ ಕಾಮಗಾರಿಗೆ ಶಂಕು ಕುಸ್ಥಾಪನೆ ನೆರವೆರಲಿದೆ. ಶಿಗ್ಗಾವಿ ತಾಲೂಕು ರಾಜೀವ, ಕಲಕಟ್ಟೆ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆಯ ಶಿಗ್ಗಾವಿ ಏತ ನೀರಾವರಿ ಯೋಜನೆಯ 39 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳ ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ ಬಾಡ ಗ್ರಾಮಕ್ಕೆ ಆಗಮಿಸಿ ಸಮಾಜ ಕಲ್ಯಾಣ ಇಲಾಖೆಯ ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.
ಬಂಕಾಪುರಕ್ಕೆ ಆಗಮಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾದಿಮಹಲ್ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ, ಕಾರವಾರ-ಇಳಕಲ್ಲ ರಸ್ತೆ ಸುಧಾರಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ಸವಣೂರಿನ ಎಪಿಎಂಸಿ ಹತ್ತಿರ ಲೋಕೋಪಯೋಗಿ ಇಲಾಖೆಯ ಕಾರವಾರ-ಇಳಕಲ್ಲ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ದೊಡ್ಡಹುಣಸೆ ಕಲ್ಮಠದ ಶ್ರೀ ಚನ್ನಬಸವೇಶ್ವರ ಮಂಗಲ ಭವನ ಹಾಗೂ ಕೆಸಿಸಿ ಬ್ಯಾಂಕ್ ಉದ್ಘಾಟಿಸಲಿದ್ದಾರೆ ಎಂದರು.
ನಂತರ ಶಿಗ್ಗಾವಿಗೆ ಆಗಮಿಸಿ ನೂತನಪ್ರವಾಸಿಮಂದಿರ ಕಟ್ಟಡ, ಪೊಲೀಸ್ ಇನ್ಸ್ಪೆಕrರ್ , ಡಿವೈಎಸ್ಪಿ ಕಟ್ಟಡ, ಹಳೇ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶಿಗ್ಗಾವಿ ನೂತನ ಪುರಸಭೆ ಕಟ್ಟಡ, ಎಪಿಎಂಸಿ ಆವರಣದಲ್ಲಿ ಒಂದು ಸಾವಿರ ಮೆಟ್ರಿಕ್ ಟನ್ ನೂತನ ಗೋದಾಮು ಉದ್ಘಾಟನೆ ಮಾಡಲಿದ್ದಾರೆ ಹಾಗೂ ಕೆಸಿಸಿ ಬ್ಯಾಂಕ್ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಶಿಗ್ಗಾವಿ ಎಪಿಎಂಸಿ ಆವರಣದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮ ಕುರಿತಂತೆ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ಅಪರ ಜಿಲ್ಲಾಧಿಕಾರಿ ಡಾ| ಎನ್. ತಿಪ್ಪೇಸ್ವಾಮಿ ವಿವರಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪ ವಿಭಾಗಾಧಿಕಾರಿ ಅನ °ಪೂರ್ಣ ಮುದಕಮ್ಮನವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.