ಅಪವಿತ್ರ ಮೈತ್ರಿಯಿಂದಾಗಿ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್
Team Udayavani, May 25, 2019, 12:49 PM IST
ಶಿಗ್ಗಾವಿ: ಅಪವಿತ್ರ ಮೈತ್ರಿಯೊಂದಿಗೆ ರಾಜ್ಯದ ಜನತೆಯನ್ನು ಕತ್ತಲೆಗೆ ನೂಕಿ ಅಭಿವೃದ್ಧಿ ಮರೀಚಿಕೆಯಾಗಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ವಿರುದ್ಧ ಜನಾಭಿಪ್ರಾಯ ಲೋಕಸಭೆಯ ಚುನಾವಣಾ ಫಲಿತಾಂಶದಿಂದ ವ್ಯಕ್ತವಾಗಿದೆ. ಪ್ರಭುದ್ಧ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ರಾಷ್ಟ್ರವ್ಯಾಪಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಗೆಲುವಿಗೆ ಕಾರಣವಾದ ಮತದಾರರಿಗೆ ಅಭಿನಂದನೆ ಸಲ್ಲಿಸಿ ಸಂತಸ ಹಂಚಿಕೊಂಡರು.
ದೇಶದಲ್ಲಿ ಕಾಂಗ್ರೆಸ್ ಸೇರಿದಂತೆ ಲೋಕಸಭೆ ಚುನಾವಣಾ ಪ್ರಚಾರ ನಿರತ ಇತರೇ ಪಕ್ಷಗಳೂ ಪ್ರಧಾನಿ ಮೋದಿ ಅವರ ಬಗ್ಗೆ ಎಷ್ಟೇ ಅಪಪ್ರಚಾರ, ಟೀಕೆ ಕೈಗೊಂಡರೂ ಬುದ್ದಿವಂತ ಹಾಗೂ ಸುಕ್ಷಿತ ಮತದಾರರು ಬಿಜೆಪಿ ಬೆಂಬಲಿಸಿ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ ಎಂದರು.
ಭವಿಷ್ಯದಲ್ಲೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿದ್ದು, ಇನ್ನೂ ಹೆಚ್ಚು ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರ ಅಭಿವೃದ್ಧಿ ಮಾಡಲಿದ್ದಾರೆ ಎಂದರು. ದೇವಣ್ಣ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಶಿವಾನಂದ ಲಕ್ಕಣ್ಣವರ, ಬೂಪಾಲ ಪಾಯಣ್ಣವರ, ಸುಭಾಸ್ ಚೌಹಾಣ, ದಯಾನಂದ ಅಕ್ಕಿ, ಸಿದ್ದಾರ್ಥಗೌಡ ಪಾಟೀಲ, ಸಂಜನಾ ರಾಯಕರ, ರೂಪಾಬನ್ನಿಕೊಪ್ಪ ಇದ್ದರು.