220 ವಾರಿಯರ್ಸ್ಗೆ ಸೋಂಕು
¬ಆರೋಗ್ಯ-ಪೊಲೀಸ್-ಕಂದಾಯ ಇಲಾಖೆ ನೌಕರರು-ಆಶಾ ಕಾರ್ಯಕರ್ತೆಯರಿಗೆ ಪಾಸಿಟಿವ್
Team Udayavani, Oct 17, 2020, 1:41 PM IST
ಹಾವೇರಿ: ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಹಗಲಿರುಳು ನಿರಂತರವಾಗಿ ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಕಂದಾಯ ಇಲಾಖೆನೌಕರರು, ಆಶಾ ಕಾರ್ಯಕರ್ತೆಯರುಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ 220 ವಾರಿಯರ್ಸ್ಗಳಿಗೆ ಕೋವಿಡ್ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಇದುವರೆಗೆಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 9958 ಕ್ಕೆ ತಲುಪಿದ್ದು, 180 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಆರಂಭವಾದಾಗಿನಿಂದಲೂ ಫ್ರಂಟ್ಲೈನ್ ವಾರಿಯರ್ಸ್ಎನಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೋಂಕು ಹರಡುವುದನ್ನು ತಡೆಯಲು, ಸೋಂಕಿತರಿಗೆ ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದಾರೆ. ಆದರೆ, ಅಂತಹ ವಾರಿಯರ್ಸ್ಗೂ ಕೋವಿಡ್ ಮಹಾಮಾರಿ ಬಿಟ್ಟಿಲ್ಲ. ಇದುವರೆಗೆ 220 ವಾರಿಯರ್ಸ್ಗಳಿಗೆ ಕೋವಿಡ್ ಸೋಂಕು ತಗುಲಿದೆ. ಪ್ರಮುಖ ಹುದ್ದೆಯೊಂದಿಗೆ ಜವಾಬ್ದಾರಿ ನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬ್ಬಂದಿಯೇ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರಿಂದ ಆಡಳಿತದ ಮೇಲೂ ಪರಿಣಾಮ ಬೀಳುವಂತಾಗಿದೆ.
220 ವಾರಿಯರ್ಸ್ಗೆ ಸೋಂಕು: ಸಾರ್ವಜನಿಕರು ಮಾಸ್ಕ್ ಧರಿಸುವಂತೆ, ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಹಗಲಿರುಳೆನ್ನದೇಕರ್ತವ್ಯ ನಿರ್ವಹಿಸಿದಪೊಲೀಸ್ ಸಿಬ್ಬಂದಿಯೇ ವಾರಿಯರ್ಸ್ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಇದುವರೆಗೆ 86 ಪೊಲೀಸರಿಗೆ ಕೋವಿಡ್ ಪಾಸಿಟಿವ್ ತಗುಲಿದೆ. ಗ್ರಾಮೀಣ ಭಾಗದಲ್ಲಿ ಕೋವಿಡ್ ಜಾಗೃತಿಗೆ ಶ್ರಮಿಸಿದ ಹಾಗೂ ಮನೆ ಮನೆ ಸರ್ವೇ ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ 23 ಆಶಾ ಕಾರ್ಯಕರ್ತೆಯರಿಗೆ ಸೋಂಕು ತಗುಲಿದೆ.
ಸೋಂಕಿತರಿಗೆ ಚಿಕಿತ್ಸೆ ನೀಡುವ 20 ಸ್ಟಾಫ್ ನರ್ಸ್ಗಳು, 17 ಡಾಕ್ಟರ್ಗಳು, 11 ಲ್ಯಾಬ್ ಟೆಕ್ನೀಶಿಯನ್, ಇಬ್ಬರು ಕಿರಿಯ ಆರೋಗ್ಯ ಸಹಾಯಕರು, 5 ಪಿಡಿಒಗಳು, ಮೂವರು ತಹಶೀಲ್ದಾರ್, 25 ಗ್ರೂಪ್ ಡಿ ಸಿಬ್ಬಂದಿ, 8 ಜನ ಗ್ರಾಮ ಲೆಕ್ಕಾಧಿಕಾರಿಗಳು, ಅಬಕಾರಿ ಇಲಾಖೆಯ ಮೂವರು ಹಾಗೂ ಕೆಎಸ್ಆರ್ಟಿಸಿಯ 17 ನೌಕರರಿಗೆ ಇದುವರೆಗೆ ಸೋಂಕು ತಗುಲಿದೆ.
8 ಮಂದಿ ವಾರಿಯರ್ಸ್ ಸಾವು: ಇದುವರೆಗೆ ಜಿಲ್ಲೆಯಲ್ಲಿ 8 ಜನ ಕೋವಿಡ್ ವಾರಿಯರ್ಸ್ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ 3, ಪೊಲೀಸ್ 1, ಲೋಕೋಪಯೋಗಿ ಇಲಾಖೆಯ 1, ಕಂದಾಯ ಇಲಾಖೆಯ 2, ಕೆಎಸ್ಆರ್ ಟಿಸಿಯ 1 ಸೇರಿದಂತೆ 8 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಅಲ್ಲದೇ, 18 ಶಿಕ್ಷಕರು ಮೃತಪಟ್ಟಿದ್ದು, 204 ಶಿಕ್ಷಕರಿಗೂ ಸೋಂಕು ತಗುಲಿದೆ. ಅಧಿಕಾರಿಗಳು, ಸಿಬ್ಬಂದಿ ಸೇರಿ ನಾಲ್ಕು ನೂರಕ್ಕೂ ಹೆಚ್ಚು ನೌಕರರಿಗೆ ಸೋಂಕು ತಗುಲಿದೆ. ಜಿಲ್ಲೆಯ ಮೂರು ತಹಶೀಲ್ದಾರ್ ಕಚೇರಿ ಸೀಲ್ ಡೌನ್ ಮಾಡಲಾಗಿತ್ತು.
10 ಸಾವಿರದತ್ತ ಪ್ರಕರಣ: ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿ ಪ್ರಥಮ ಕೋವಿಡ್ ಸೋಂಕಿನ ಪ್ರಕರಣ ಸವಣೂರಿನಲ್ಲಿ ವರದಿಯಾಗಿತ್ತು. ಆ ಬಳಿಕ ನಿರಂತರವಾಗಿಏರುಗತಿಯಲ್ಲಿ ಸಾಗಿ ನಿತ್ಯವೂ ನೂರಿನ್ನೂರು ಕೇಸ್ಗಳು ಬರುತ್ತಿವೆ. ಕಳೆದ ನಾಲ್ಕು ದಿನಗಳಿಂದ ನೂರರ ಒಳಗೆ ಪಾಸಿಟಿವ್ ಪ್ರಕರಣ ಬರುತ್ತಿರುವುದು ಸ್ವಲ್ಪ ಆಶಾದಾಯಕ ಬೆಳವಣಿಗೆಯಾಗಿದೆ. ಶುಕ್ರವಾರದವರೆಗೆ ಜಿಲ್ಲೆಯಲ್ಲಿ 9958 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 10 ಸಾವಿರದ ಗಡಿಯತ್ತ ಬಂದಿದೆ. ಇದುವರೆಗೆ 180 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚು ಜನರ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದ್ದರೂ ಕಳೆದ ಕೆಲವು ದಿನಗಳಿಂದ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದ್ದರೂ ಅಗತ್ಯ ಸಿದ್ಧತಾ ಕ್ರಮ ಹೆಚ್ಚಿಸಲಾಗುತ್ತಿದೆ. ಕೋವಿಡ್ ನಿಂದ ಮೃತಪಟ್ಟ ವಾರಿಯರ್ಸ್ ಗಳಲ್ಲಿ ಒಬ್ಬರಿಗೆ ಪರಿಹಾರ ಸಿಕ್ಕಿದ್ದು, ಉಳಿದ ಪ್ರಕರಣಗಳಲ್ಲೂ ಶೀಘ್ರದಲ್ಲಿ ಕುಟುಂಬದವರಿಗೆ ಪರಿಹಾರ ದೊರೆಯಲಿದೆ. – ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ
-ವೀರೇಶ ಮಡ್ಲೂರ