ಅನಧಿಕೃತ ಮರಳು-ಗಣಿಗಾರಿಕೆಗೆ ಕಡಿವಾಣ ಹಾಕಿ
•ಮರಳುಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ• ನಿರ್ದಿಷ್ಟ ದರದಲ್ಲಿ ವ್ಯವಸ್ಥಿತವಾಗಿ ವಿತರಿಸಲು ಕ್ರಮ ಕೈಗೊಳ್ಳಿ
Team Udayavani, Jul 3, 2019, 10:16 AM IST
ಹಾವೇರಿ: ಸಚಿವ ರಾಜಶೇಖರ ಪಾಟೀಲ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಹಾವೇರಿ: ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ಅಧಿಕಾರಿಗಳಿಗೆ ಆದೇಶ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ಸಂಬಂಧಿಸಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗಣಿ ಇಲಾಖೆಯಿಂದ ಗುರುತಿಸಲಾದ ಅಧಿಕೃತ ಮರಳು ಬ್ಲಾಕ್ಗಳ ಹೊರತಾಗಿಯೂ ಜಿಲ್ಲೆಯ ಕೆಲವೆಡೆ ಸಣ್ಣ ಸಣ್ಣ ಮರಳು ಬ್ಲಾಕ್ಗಳಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂಥ ಬ್ಲಾಕ್ಗಳಿಗೆ ಭೇಟಿ ನೀಡಿ ಆ ಮರಳು ಕಟ್ಟಡ ನಿರ್ಮಾಣಕ್ಕೆ ಯೋಗ್ಯವೇ ಎಂದು ಪರಿಶೀಲಿಸಿ ಯೋಗ್ಯವೆನಿಸಿದರೆ ನಿರ್ದಿಷ್ಟ ದರದಲ್ಲಿ ವ್ಯವಸ್ಥಿತವಾಗಿ ಮರಳು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ದಾಸ್ತಾನಿರುವ ಮರಳನ್ನು ಸರ್ಕಾರಿ ದರದಂತೆ ಜನತಾ ಮನೆಗಳಿಗೆ ವಿತರಿಸಲು ಕ್ರಮವಹಿಸಬೇಕು. ಬಡವರು ಮನೆ ಕಟ್ಟಿಕೊಳ್ಳಲು ಹಾಗೂ ಗುಡಿ ಗೋಪುರಗಳಿಗೆ ಸುಲಭದಲ್ಲಿ ಕಡಿಮೆ ದರದಲ್ಲಿ ಮರಳು ದೊರಕುವಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ, ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಜನತಾ ಮನೆಗಳು, ಸಣ್ಣ ಸಣ್ಣ ಗುಡಿ ನಿರ್ಮಾಣ ಕೆಲಸಕ್ಕೆ ಮರಳು ಸಿಗದೆ ತೊಂದರೆಯಾಗಿದೆ. ಕೆಲ ಹಳ್ಳ ಹಾಗೂ ನದಿ ಪಾತ್ರದಲ್ಲಿ ಟ್ರ್ಯಾಕ್ಟರ್ ಮೂಲಕ ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ದೂರುಗಳು ಬರುತ್ತಿವೆ. ಕೆಲ ಅಧಿಕಾರಿಗಳೇ ಇದಕ್ಕೆ ಸಹಕರಿಸುತ್ತಿರುವ ದೂರುಗಳಿವೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲೆಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುರುತಿಸಿದ ಮರಳು ಬ್ಲಾಕ್ಗಳನ್ನು ಹೊರತುಪಡಿಸಿ ಇತರೆಡೆ ಸಿಗುವ ಮರಳನ್ನು ಗುರುತಿಸಿ ವ್ಯವಸ್ಥಿತವಾಗಿ ವಿತರಣೆಗೆ ಕ್ರಮವಹಿಸಬೇಕು ಎಂದರು.
1.50ಲಕ್ಷ ಟನ್ ದಾಸ್ತಾನು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟು 18 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಂದು ಬ್ಲಾಕಿನ ಗುತ್ತಿಗೆ ಮಂಜೂರಾಗಿಲ್ಲ. ಉಳಿದಂತೆ 17 ಬ್ಲಾಕಿನಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಕೆಲ ದೂರಗಳ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮರಳು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. 17 ಮರಳು ಬ್ಲಾಕಿನ ಸ್ಟಾಕ್ ಯಾರ್ಡ್ಗಳಲ್ಲಿ 1.50 ಲಕ್ಷ ಟನ್ ಮರಳು ದಾಸ್ತಾನಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 39 ಕಲ್ಲುಗಣಿ ಗುತ್ತಿಗೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 32 ಕಲ್ಲುಗಣಿಗಳ ಗುತ್ತಿಗೆ ಅವಧಿ ಮುಗಿದಿದೆ. ಕಲ್ಲು ಪುಡಿ ಘಟಕಗಳ ಆರಂಭಿಸುವ ಕುರಿತಂತೆ ಜಿಲ್ಲಾ ಸಮಿತಿ 92 ಅರ್ಜಿಗಳನ್ನು ಸ್ವೀಕರಿಸಿದೆ. 2018 ರಿಂದ ಈ ವರೆಗೆ 41 ಮೊಕದ್ದಮೆಯನ್ನು ದಾಖಲಿಸಿ 77.31 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ವಾರ್ಷಿಕವಾಗಿ 2016ರಿಂದ ಈ ವರೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಸಂಗ್ರಹಿಸಿದ ಮೊತ್ತ 3.33 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ, ಸವಣೂರ ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣ ಭೋಯಾರ್, ವಿವಿಧ ತಾಲೂಕಿನ ತಹಶೀಲ್ದಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಸ್ಟಾರ್ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ
ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ
Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ