ಜಾನುವಾರು ಹತ್ಯೆ ತಡೆಗೆ ಮುಂದಾಗಿ
ಪ್ರಾಣಿ ದಯಾ ಸಂಘದ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನಿರ್ದೇಶನ
Team Udayavani, Feb 18, 2021, 7:15 PM IST
ಹಾವೇರಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ ಕುರಿತಂತೆ ಅ ಧಿಕಾರಿಗಳು ಸಂಪೂರ್ಣ ಮಾಹಿತಿ ಹೊಂದಬೇಕು. ಪ್ರಾಣಿ ಹಿಂಸೆ, ಸಾಗಾಟ ಕುರಿತಂತೆ ನಿಯಮಾವಳಿಗಳ ಅನುಸಾರ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಂಬಂಧಿಸಿದ ಅ ಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅದ್ಯಾದೇಶ 2020ರ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗೋಶಾಲೆ, ಗೋಕಟ್ಟೆಗಳನ್ನು ನಿರ್ಮಿಸಲು ಕ್ರಮ ವಹಿಸಬೇಕು. ಪ್ರತಿ ತಾಲೂಕಿನಲ್ಲಿ ಗೋಶಾಲೆಗಳಿಗಾಗಿ ಕನಿಷ್ಠ ಎರಡು ಎಕರೆ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್ಗಳಿಗೆ ಸೂಚನೆ ನೀಡಿದರು.
ಪ್ರಾಣಿ ವಧೆ, ಪ್ರಾಣಿ ಕಲ್ಯಾಣ, ಪ್ರಾಣಿ ಹಿಂಸೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ 2020ರ ಕುರಿತಂತೆ ಸಾರ್ವಜನಿಕಲ್ಲಿ ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಕಾರ್ಯಾಗಾರಗಳನ್ನು ನಡೆಸುವುದು, ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಿ ವಿತರಿಸಲು ಕ್ರಮ ವಹಿಸುವುದು, ಕೋವಿಡ್ ಪ್ರಮಾಣೀಕೃತ ಮಾರ್ಗಸೂಚಿಯ ಮಾನದಂಡದಡಿ ಪ್ರಚಾರ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಖಾಸಗಿ ಗೋಶಾಲೆಗಳು, ಪಿಂಜರಾಪೋಲ್ ಹಾಗೂ ಇತರ ಗೋಶಾಲೆಗಳು, ಸಹಾಯಧನ ಮಂಜೂರಾತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಕ್ರಮಬದ್ಧತೆ ಕುರಿತಂತೆ ಪರಿಶೀಲನೆ ನಡೆಸಿ, ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಸಹಾಯಧನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಂಡುವಂತೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೂಲೇರ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ ಕೂಲೇರ ಪ್ರಾಣಿ ಕಲ್ಯಾಣ, ಪ್ರಾಣಿ ಹಿಂಸೆ, ಪ್ರಾಣಿ ವಧೆ ಹಾಗೂ ಪ್ರಾಣಿಗಳ ಸಾಗಾಣಿಕೆಗಾಗಿ ಜಾರಿಯಲ್ಲಿರುವ ಹಳೆಯ ಮತ್ತು ಹೊಸ ಕಾನೂನುಗಳ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.
ನೂತನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಅದ್ಯಾದೇಶದ ಅನ್ವಯ ಹತ್ಯೆಗಾಗಿ ಪ್ರಾಣಿಗಳ ಸಾಗಾಟ, ಮಾರಾಟ ಹಾಗೂ ಖರೀದಿ ನಿಷೇಧವಿದೆ. ಕೃಷಿ ಕಾರ್ಯಕ್ಕಾಗಿ ಜಾನುವಾರುಗಳ ಸಾಗಾಣಿಕೆಗೆ ರಿಯಾಯಿತಿ ನೀಡಲಾಗಿದೆ. ಸಕ್ಷಮ ಪ್ರಾಧಿ ಕಾರದಿಂದ ಸಾಗಾಣಿಕೆಗೆ ಅನುಮತಿ ಪಡೆಯಬೇಕಾಗಿದೆ ಎಂದು ವಿವರಿಸಿದರು.
ಸ್ಥಳೀಯವಾಗಿ 15 ಕಿ.ಮೀ. ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು ಮತ್ತು ಎರಡು ಕರುಗಳನ್ನು ಮಾತ್ರ ಕೊಂಡೊಯ್ಯಬಹುದು. ರಾತ್ರಿ ವೇಳೆ ಗೋವುಗಳ ಸಾಗಣೆಗೆ ಸಂಪೂರ್ಣ ನಿಷೇಧವಿದೆ. ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಗೋವುಗಳ ಸಾಗಣೆಗೆ ಅವಕಾಶವಿಲ್ಲ. ಬೇಸಿಗೆ ಕಾಲದಲ್ಲಿ ಮಾರ್ಚ್ನಿಂದ ಮೇ ತಿಂಗಳವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ಅವ ಧಿಯಲ್ಲೂ ಗೋವುಗಳ ಸಾಗಣೆಗೆ ನಿಷೇ ಧಿಸಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಜಾನುವಾರು ಹತ್ಯೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದು ವಿವರಿಸಿದರು.
ಪ್ರಾಣಿಬಲಿ ಕೊಡುವುದನ್ನು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ-1959ರನ್ವಯ ನಿಷೇಧಿಸಲಾಗಿದೆ. ಟಿಕೆಟ್ ಮೂಲಕ ಪ್ರವೇಶ ನೀಡಿ ಮನೋರಂಜನೆಗಾಗಿ ಪ್ರಾಣಿಗಳ ಪ್ರದರ್ಶನ ಮಾಡುವುದನ್ನು ನಿಯಮ 1973ರ ಅನ್ವಯ ನಿಷೇಧ ಕಾಯ್ದೆ ಜಾರಿಯಲ್ಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪ್ರಾಣಿ ದಯಾ ಸಂಘದ ಸರ್ಕಾರೇತರ ಸದಸ್ಯರಾದ ನಿಜಲಿಂಗಪ್ಪ ಬಸಗೇಣ್ಣಿ, ಪರಿಮಳ ಜೈನ್, ಶಾಂತಪ್ಪ ಅಟವಳಿಗಿ, ರವಿ ಹಿಂಚಗೇರಿ ಮತ್ತು ಬಸವೇಶ್ವರ ಗೋಶಾಲೆ ಕಾರ್ಯದರ್ಶಿಗಳು, ಪೌರಾಯುಕ್ತ ಚಲವಾದಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ಜಿಲ್ಲಾ ಪಶು ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಸಣ್ಣಕ್ಕಿ ಹಾಗೂ ಜಿಲ್ಲೆಯ ಪಶು ವೈದ್ಯಾಧಿ ಕಾರಿಗಳು ಸೇರಿದಂತೆ ವೀಡಿಯೋ ಸಂವಾದದ ಮೂಲಕ ಎಲ್ಲ ತಾಲೂಕು ತಹಶೀಲ್ದಾರ್ ಗಳು ಪಾಲ್ಗೊಂಡಿದ್ದರು.