ಶಿಕ್ಷಣ ಇಲಾಖೆ ನಿಯಮ ಖಂಡಿಸಿ ಪ್ರತಿಭಟನೆ
Team Udayavani, Jul 3, 2019, 2:28 PM IST
ರಾಣಿಬೆನ್ನೂರ: ಶಿಕ್ಷಣ ಇಲಾಖೆ ಕ್ರಮ ಖಂಡಿಸಿ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಶಿಕ್ಷಕರು ಬಹಿಷ್ಕರಿಸಿ ಪ್ರತಿಭಟಿಸಿದರು.
ರಾಣಿಬೆನ್ನೂರ: ಶಿಕ್ಷಣ ಇಲಾಖೆ ನಿಯಮದ ಪ್ರಕಾರ 2014ಕ್ಕಿಂತ ಮುಂಚೆ ನೇಮಕವಾದ ಎಲ್ಲ ಪದವೀಧರ ಶಿಕ್ಷಕರನ್ನು 5ನೇ ತರಗತಿಗೆ ಹಿಂಬಡ್ತಿ ನೀಡಿ ಅನ್ಯಾಯವೆಸಗಿರುವ ಸರಕಾರದ ಕ್ರಮ ಖಂಡಿಸಿ ಸ್ಥಳೀಯ ಶಿವ ಪ್ರೌಢಶಾಲೆಯಲ್ಲಿ ಮಂಗಳವಾರದಿಂದ ಶಿಕ್ಷಕರಿಗಾಗಿ ನಡೆಯಬೇಕಾಗಿದ್ದ 6,7,8 ನೇ ತರಗತಿಯ ಗಣಿತ ತರಬೇತಿ ಕಾರ್ಯಾಗಾರವನ್ನು ಶಿಕ್ಷಕರು ಬಹಿಷ್ಕರಿಸಿ ಹೊರ ನಡೆದರು.
ಈ ವೇಳೆ ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಡಿ ದ್ಯಾಮಣ್ಣನವರ ಮಾತನಾಡಿ, ಈಗಾಗಲೇ ಶಿಕ್ಷಕರನ್ನು 1-5ನೇ ತರಗತಿಗೆ ಹಿಂಬಡ್ತಿ ನೀಡಿದ್ದರಿಂದ ಈ ತರಬೇತಿ ನಮಗೆ ಅವಶ್ಯಕತೆಯಿಲ್ಲ. ಹೀಗಾಗಿ ಇದನ್ನು ಶಿಕ್ಷಕರು ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎ. ಖಾಜಿ, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಸಾಲಿಮಠ, ಜಿಲ್ಲಾ ಸಂಚಾಲಕ ಎಚ್.ಎಚ್. ಬಣಕಾರ, ಎಸ್.ಜಿ ಮಾಕಾಳ, ಸಿ.ಎಫ್ ಕಡೇಮನಿ, ಆರ್.ಡಿ ಹೊಂಬರಡಿ, ಸಂಕಣ್ಣ ಎಂ, ಎಸ್.ಟಿ ಕೋಟಿಹಾಳ, ಸುರೇಶ ಕರೂರ, ಬಿ.ಎಚ್.ಅನ್ನಪೂರ್ಣ, ಪಿ.ವಿ. ಛತ್ರದ ಸೇರಿದಂತೆ 100ಕ್ಕೂ ಅಧಿಕ ಶಿಕ್ಷಕರು ಇದ್ದರು.