ದೇವರಗುಡ್ಡ ಗ್ರಾಪಂ ಅಧ್ಯಕ್ಷರ ಪದಚ್ಯುತಿಗೆ ವಿಮಾನ ಏರಿದರು!
Team Udayavani, Dec 6, 2022, 8:51 PM IST
ರಾಣಿಬೆನ್ನೂರ: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಪಂ ಅಧ್ಯಕ್ಷ ಮಾಲತೇಶ ದುರ್ಗಪ್ಪ ನಾಯರ್ ವಿರುದ್ಧ ಮಂಗಳವಾರ ಸದಸ್ಯರು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಗೆಲುವಾಗಿದೆ.
ಒಟ್ಟು 13 ಸದಸ್ಯರ ಸಂಖ್ಯಾಬಲದ ಗ್ರಾಪಂನಲ್ಲಿ ಸಂತೋಷ್ ಭಟ್ ಗುರೂಜಿ ಬಣದ 9 ಸದಸ್ಯರು ಕೇರಳ, ತಮಿಳುನಾಡು, ಬೆಂಗಳೂರು ಮತ್ತಿತರ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು. ಅವಿಶ್ವಾಸ ಗೊತ್ತುವಳಿ ದಿನ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ದೇವರಗುಡ್ಡಕ್ಕೆ ತೆರಳಿ ಅವಿಶ್ವಾಸದ ಪರ ಮತ ಚಲಾಯಿಸುವ ಮೂಲಕ ಗಮನ ಸೆಳೆದರು.
ಅವಿಶ್ವಾಸದ ವಿರುದ್ಧ ನಾಲ್ಕು ಮತಗಳು ಚಲಾವಣೆಗೊಂಡವು. ಉಪ ವಿಭಾಗಾಧಿಕಾರಿ ಶಿವಾನಂದ ಉಳಾಗಡ್ಡಿ, ತಾಪಂ ಇಒ ಟಿ.ಆರ್. ಮಲ್ಲಾಡದ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಳೆದ ಎರಡು ತಿಂಗಳಿನಿಂದ ಅತೀವ ಕುತೂಹಲ ಮೂಡಿಸಿದ್ದ ಅವಿಶ್ವಾಸ ಮಂಡನೆ ಕೊನೆಗೂ ಯಶಸ್ವಿಯಾಗಿದ್ದು, ಇದೀಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದೆ.