ರೈತರ ಬೇಡಿಕೆಗಾಗಿ ಬೀದಿಗಿಳಿದ ರೈತರು
ಭೂ ದಾಖಲೆ ಸರಿಪಡಿಸಿಕೊಳ್ಳಲು ಅನ್ನದಾತನ ನಿತ್ಯ ಅಲೆದಾಟ! ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ
Team Udayavani, Mar 4, 2021, 6:25 PM IST
ಸವಣೂರ: ರೈತರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಪಟ್ಟಣದ ಉಪ ವಿಭಾಗದ ಕಚೇರಿ ಎದುದು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ರೈತ ಇಂದು ತನ್ನ ಭೂಮಿಯ ದಾಖಲೆ ಸರಿಪಡಿಸಿಕೊಳ್ಳಲು ನಿತ್ಯ ಕಂದಾಯ ಇಲಾಖೆ ಕಚೇರಿಗೆ ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕೊರೊನಾ ಮಹಾಮಾರಿಯ ಲಾಕ್ಡೌನ್ ಸಂದರ್ಭದಲ್ಲಿ ಭಯಭೀತರಾಗಿ ರೈತರು ಮನೆಯಲ್ಲಿ ಕುಳಿತಾಗ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕಾನೂನು ಜಾರಿಗೊಳಿಸಿ ಕೃಷಿ ವಲಯವನ್ನು ಬಹುರಾಷ್ಟ್ರೀಯ ಹಾಗೂ ಕಾಪೊìರೇಟ್ ಕಂಪನಿಗಳಿಗೆ ಮಾರಿಕೊಳ್ಳುವ ಹುನ್ನಾರವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕೃಷಿ ವಲಯವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವಂತ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂಬುದನ್ನು ರೈತರು ತಮ್ಮ ಹಳ್ಳಿಗಳ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಕರೆ ನೀಡಿದರು. ರಾಜ್ಯದ ಜವಾಬ್ದಾರಿ ಹೊತ್ತಿರುವ ಸ್ಥಳೀಯ ಶಾಸಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಳೆದ 20 ವರ್ಷಗಳಿಂದ ಕ್ಷೇತ್ರದ ರೈತರ ಸಮಸ್ಯೆ ಆಲಿಸಿ ಶಾಶ್ವತ ಪರಿಹಾರ ನೀಡದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
2000ರಲ್ಲಿ ನೀರಿಗಾಗಿ ನಡೆದ ಪ್ರತಿಭಟನೆಯಲ್ಲಿ ಕಂದಾಯ ಕಚೇರಿಗೆ ಬಿದ್ದಿದ್ದ ಬೆಂಕಿಯಿಂದಾಗಿ ದಾಖಲಾತಿಗಳು ಸುಟ್ಟಿವೆ ಎಂದು ಹಿಂಬರವನ್ನು ನೀಡುತ್ತಿದ್ದಾರೆ. ಇನ್ನು ಮುಂದೆ ಹಾರಿಕೆ ಉತ್ತರ ನೀಡುವುದು ಮುಂದುವರೆಯದಂತೆ ಜಿಲ್ಲಾಧಿಕಾರಿಗಳು ವಹಿಸಬೇಕು. ಈ ಕುರಿತು ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳ ಗಮನಕ್ಕೆ ತಾವೂ ತರುವುದಾಗಿ ಹೇಳಿದರು.
ರೈತರ ಜಮೀನನ್ನು ಮರು ಸರ್ವೇ ಮಾಡುವಂತೆ ರಾಜ್ಯಮಟ್ಟದಲ್ಲಿ ಚರ್ಚೆಯಾಗಿದೆ. ಆ ಸಂದರ್ಭದಲ್ಲಿ ಸವಣೂರ ತಾಲೂಕಿನ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರದೆ ಇರುವುದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಭೂ ದಾಖಲೆಗಳೆ ಇಲ್ಲದ ಇಂತಹ ತಾಲೂಕನ್ನು ವಿಶೇಷ ಕಾರ್ಯಕ್ರಮದಡಿ ತರುವ ಮೂಲಕ ಸರ್ಕಾರ ತುರ್ತಾಗಿ ಸರ್ವೇ ಕಾರ್ಯ ಮುಗಿಸಿ ರೈತರಿಗೆ ಅನುಕೂಲ ಕಲ್ಪಿಸಲು ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ವಿಶೇಷ ಯೋಜನೆ ರೂಪಿಸಿ ದಾಖಲಾತಿಗಳನ್ನು ಮರು ಸೃಷ್ಟಿಸಲು ಮುಂದಾಗಬೇಕು. ಬೆಳೆ ವಿಮೆ ವಿತರಣೆ, ಕೆರೆ ಹೂಳು ಎತ್ತುವುದು ಸೇರಿದಂತೆ ರೈತರ ಬೇಡಿಕೆಗಳ ಚರ್ಚೆಗೆ ಸಭೆ ಏರ್ಪಡಿಸಿ ಪರಿಹಾರ ಸೂಚಿಸಬೇಕು. ತಪ್ಪಿದಲ್ಲಿ ಕ್ಷೇತ್ರದ ರೈತರೊಂದಿಗೆ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪಟ್ಟಣದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ| ವಿ.ಕೃ. ಗೋಕಾಕ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಶುಕ್ರವಾರ ಪೇಟೆ, ಭರಮಲಿಂಗೇಶ್ವರ ಸರ್ಕಲ್, ಮುಖ್ಯ ಮಾರುಕಟ್ಟೆ ಮೂಲಕ ಸಂಚರಿಸಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಎದುರುಗಡೆ ಆಗಮಿಸಿತು. ನಂತರ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸೂಚನೆ ಮೇರೆಗೆ ನಿರಂತರ ಧರಣಿ ಸತ್ಯಾಗ್ರಹ ಹಿಂಪಡೆಯಲಾಯಿತು.
ರಾಜ್ಯ ಕಾರ್ಯದರ್ಶಿ ಮಾಲತೇಶ ಪೂಜಾರ, ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ, ರಾಜ್ಯ ಪದಾಧಿಕಾರಿಗಳಾದ ರಾಘವೇಂದ್ರ ನಾಯಕ್, ಹಾಸೀಂ ಜಿಗಳೂರ, ಶೇಖರ ಅಂಗಡಿ, ಜಿಲ್ಲಾ ಉಪಾದ್ಯಕ್ಷ ನೂರಅಹ್ಮದ್ ಮುಲ್ಲಾ, ತಾಲೂಕು ಘಟಕ ಅಧ್ಯಕ್ಷ ಚನ್ನಪ್ಪ ಮರಡೂರ, ಪದಾಧಿಕಾರಿಗಳಾದ ಜಾಕೀರ್ ಹುಸೇನ್, ಬಸವರಾಜ ತಳವಾರ, ಜಗದೀಶ ಬಳ್ಳಾರಿ, ಎಂ.ಎನ್.ನಾಯಕ್, ರಾಜೂ ತರ್ಲಘಟ್ಟ, ಮುತ್ತು ಗುಡಗೇರಿ, ಮಹಾದೇವಪ್ಪ ಮಾಳಮ್ಮನವರ, ಬಸಲಿಂಗ ನರಗುಂದ, ಶಿವಾನಂದ ಕರಿಗಾರ, ಶಿವಪುತ್ರಪ್ಪ ಸಪ್ಪಗಾಯಿ, ಪಕ್ಕೀರಪ್ಪ ಜೋಗೇರ, ನಾಗಪ್ಪ ಹಡಪದ, ರವಿ ದೊಡ್ಡಮನಿ, ಖುತಬಸಾಬ್ ಕುಂದೂರ, ಬಸವನಗೌಡ ಅರಳಿಹಳ್ಳಿ, ಅರಳಿಮರದ, ಶಿವಾನಂದ ವಾಲೇಕಾರ, ರಾಘವೇಂದ್ರ ಕುರಬರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?