ಖಾಸಗಿ ವೈದ್ಯರ ಮನವೊಲಿಸುವೆ
Team Udayavani, Apr 25, 2020, 5:00 PM IST
ರಾಣಿಬೆನ್ನೂರ: ಕೋವಿಡ್ 19 ಹತೋಟಿಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಕೋವಿಡ್ 19 ತಡೆಗಟ್ಟುವ ದಿಶೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶದ ಖಾಸಗಿ ವೈದ್ಯರು ಜನರ ಆರೋಗ್ಯ ರಕ್ಷಣೆಯ ಸೇವೆ ಸಲ್ಲಿಸುವಂತೆ ಅವರ ಮನವೊಲಿಸುವುದಾಗಿ ಭರವಸೆ ನೀಡಿದರು.
ತಾಲೂಕಿನಲ್ಲಿ ಒಟ್ಟು 75,566 ಕುಟುಂಬಗಳಿದ್ದು, 3.60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು ಇವರಲ್ಲಿ 1.76 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಈ ಕಾರ್ಯದಲ್ಲಿ ಸೇವೆ ಸಲ್ಲಿಸುವ ಆರೋಗ್ಯ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಅಂದಾಗ ಮಾತ್ರ ಕೋವಿಡ್ 19 ವೈರಸ್ ತಡೆಗಟ್ಟಲು ಸಾಧ್ಯ ಎಂದರು.
ನಗರದ ಎಪಿಎಂಸಿ ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರ ಮತ್ತು ವಾಹನ ಚಾಲಕರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವರು ಹೊರರಾಜ್ಯಗಳಿಂದ ಆಗಮಿಸುವುದರಿಂದ ಮಾನವೀಯತೆಯ ಆಧಾರದಲ್ಲಿ ಅವರಿಗೆ ಸ್ಥಳೀಯ ವ್ಯಾಪಾರಸ್ಥರು ಊಟದ ಪ್ಯಾಕೇಟ್ ನೀಡಲು ಮುಂದಾಗಬೇಕು. ಚಾಲಕರು ನಗರದಲ್ಲಿ ತಿರುಗಾಡದಂತೆ ಪೋಲೀಸರು ನಿಗಾ ವಹಿಸಬೇಕು ಎಂದು ಸೂಚಿಸಿದರು.