ಕೋರಿಗೌಡ್ರ ಕೈ ಹಿಡಿದ ಕೃಷಿ
Team Udayavani, Jul 31, 2019, 12:22 PM IST
ಹಿರೇಕೆರೂರ: ಕುರಿ ದೊಡ್ಡಿಯಲ್ಲಿ ಕೋರಿಗೌಡ್ರ ಸಹೋದರರು.
ಹಿರೇಕೆರೂರ: ಕೃಷಿಯಿಂದ ವಿಮುಖರಾಗಿ ಪಟ್ಟಣ ಪ್ರದೇಶಗಳತ್ತ ವಲಸೆ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಪಟ್ಟಣ ಪ್ರದೇಶದಲ್ಲೇ ಇದ್ದು, ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿ ಸಾಧನೆ ಮಾಡಿದ್ದಾರೆ ಹಿರೇಕೆರೂರಿನ ದುರ್ಗಾದೇವಿ ನಗರದ ಕೋರಿಗೌಡ್ರ ಅವಿಭಕ್ತ ಕುಟುಂಬ.
ಇವರು ಒಟ್ಟು 22 ಎಕರೆ ಜಮೀನು ಹೊಂದಿದ್ದಾರೆ. ಇವರ ಮನೆಯಲ್ಲಿ 32 ದೇಸಿ ಹಸುಗಳು, 8 ಕರುಗಳಿವೆ. ಕೃಷಿ ಚಟುವಟಿಕೆಗಳಿಗೆ 3ಜತೆ ಎತ್ತುಗಳಿವೆ. 5 ಜರ್ಸಿ ತಳಿಯ ಹಸುಗಳು, 3ಕರುಗಳು, 52 ಕುರಿಗಳು, 50 ನಾಟಿ ಕೋಳಿಗಳು, 15 ಪಾರಿವಾಳಗಳು ಹಾಗೂ ನಾಲ್ಕೈದು ನಾಯಿಗಳಿವೆ. ದನಗಳಿರುವುದರಿಂದ ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚು ಬಳಸುತ್ತಾರೆ. ಎರೆಹುಳು ಗೊಬ್ಬರವನ್ನು ಸಹ ಸ್ವತಃ ತಯಾರಿಸಿ ಬಳಸುತ್ತಾರೆ. ಆದರೆ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ.
ಸ್ವಂತ ಜಮೀನಿನೊಂದಿಗೆ 10 ಎಕರೆ ಲಾವಣಿ ರೂಪದಲ್ಲಿ ಪಡೆದು ಕೃಷಿ ಮಾಡುತ್ತಿರುವ ಕೋರಿಗೌಡ್ರ ಕುಟುಂಬ 1 ಟ್ರಾಕ್ಟರ್ ಹೊಂದಿದ್ದು, ಕಳೆ ಕೀಳುವ, ಬಿತ್ತನೆ ಮಾಡುವ ವೇಳೆಯಲ್ಲಿ ಮಾತ್ರ ಕೂಲಿಕಾರರನ್ನು ಬಳಸಿಕೊಂಡು ಮಳೆಗಾಲದಲ್ಲಿ ಗೋವಿನ ಜೋಳ, ಹತ್ತಿ, ಭತ್ತ ಮತ್ತು ತೊಗರಿ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಟೊಮೆಟೋ, ಮೆಣಸಿನಕಾಯಿ, ಶೇಂಗಾ, ರಾಗಿ ನವಣೆ ಬೆಳೆಯುತ್ತಾರೆ.
ನಾಲ್ವರು ಸಹೋದರರಿರುವ ಈ ಅವಿಭಕ್ತ ಕುಟುಂಬದಲ್ಲಿ ಕೊನೆಯವರಾದ ಸತೀಶ ಕೋರಿಗೌಡ್ರ ಅವರ ಪತ್ನಿ ಉಮಾ ಕೋರಿಗೌಡ್ರ ಕೃಷಿಯಲ್ಲಿ ಸಾಧನೆ ಮಾಡುವುದರ ಮೂಲಕ ಕುಟುಂಬದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಎಸ್ಸೆಸ್ಸೆಲ್ಸಿವರೆಗೆ ಓದಿರುವ ಅವರು ಕುಟುಂಬ ಸದಸ್ಯರೊಂದಿಗೆ ಸೇರಿ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಉಮಾ ಸತೀಶ ಕೋರಿಗೌಡ್ರ ಅವರು 2018ರ ಕೃಷಿ ಮೇಳದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ‘ಶ್ರೇಷ್ಠ ಯುವ ಕೃಷಿಕ ಮಹಿಳೆ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶ್ರೇಷ್ಠ ಯುವ ಕೃಷಿಕ ಮತ್ತು ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪುರಸ್ಕೃತರಿಗೆ ಫೆಬ್ರುವರಿ ತಿಂಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ‘ಕೃಷಿಯಲ್ಲಿ ನೂತನ ತಾಂತ್ರಿಕತೆಗಳು’ ವಿಷಯ ಬಗ್ಗೆ 5 ದಿನಗಳ ಕಾಲ ತರಬೇತಿ ನೀಡಲಾಯಿತು. ಕೃಷಿಯಲ್ಲಿ ಹೊಸ ತಾಂತ್ರಿಕತೆ ಬಳಸಿಕೊಳ್ಳಲು ಈ ತರಬೇತಿ ತುಂಬಾ ಸಹಕಾರಿಯಾಯ್ತು ಎನ್ನುತ್ತಾರೆ ಉಮಾ ಕೋರಿಗೌಡ್ರ ತಿಳಿಸಿದರು.
ನಾವು ನಾಲ್ವರು ಅಣ್ಣ-ತಮ್ಮಂದಿರು ಹಾಗೂ ಪತ್ನಿಯರು ಸಂಪೂರ್ಣ ಕೃಷಿಯಲ್ಲಿಯೇ ತೊಡಗಿದ್ದೇವೆ. ಕೃಷಿ, ಹೈನುಗಾರಿಕೆ, ಕುರಿ ಸಾಕಾಣಿಕೆಯೇ ನಮ್ಮ ಮನೆಯ ದೇವರಿದ್ದಂತೆ. ಇದರಿಂದ ನಮ್ಮ ಬದುಕು ಎತ್ತರಕ್ಕೇರಿದೆ. ಎಲ್ಲರೂ ಕೃಷಿಯಲ್ಲಿ ತೊಡಗಿರುವುದರಿಂದ ಕೂಲಿ ಕಾರ್ಮಿಕರ ಬಳಕೆ ಕಡಿಮೆ. ಹಾಗಾಗಿ ಕೃಷಿಯಲ್ಲಿ ಲಾಭ ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ ಸತೀಶ ಕೋರಿಗೌಡ್ರ.
•ನಾಲ್ವರು ಅಣ್ಣ-ತಮ್ಮಂದಿರು ಎಲ್ಲರೂ ಅಪ್ಪಟ ಕೃಷಿಕರೇ
•22ಎಕರೆ ಸ್ವಂತ ಜಮೀನಿದೆ, 10ಎಕರೆ ಲಾವಣಿಯೂ ಮಾಡುತ್ತಾರೆ
•ದನ-ಕರುಗಳಿವೆ, ಹೊಲಕ್ಕೆ ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಾರೆ
•ಎರೆಹುಳು ಗೊಬ್ಬರ ಸ್ವತಃ ತಯಾರಿಸಿ, ಹೊಲಗಳಿಗೆ ಹಾಕುತ್ತಾರೆ
•ಸಿದ್ಧಲಿಂಗಯ್ಯ ಗೌಡರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ
ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ
LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ
Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ