ಲಾಕ್ಡೌನ್ ಕಟ್ಟುನಿಟ್ಟು ಜಾರಿ-ಜಿಲ್ಲೆ ಸ್ತಬ್ಧ
ಜಿಲ್ಲಾದ್ಯಂತ ಪೊಲೀಸರ ಕಟ್ಟೆಚ್ಚರ ! ಕೊರೊನಾ ಹೊಡೆದೋಡಿಸುವ ಬಿಗಿ ಕ್ರಮಕ್ಕೆ ಜನರಿಂದ ಉತ್ತಮ ಬೆಂಬಲ
Team Udayavani, May 22, 2021, 10:56 PM IST
ಹಾವೇರಿ: ಕೊರೊನಾ ನಿಯಂತ್ರಣಕ್ಕಾಗಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆ ಜನ ಹಾಗೂ ವಾಹನ ಸಂಚಾರವಿಲ್ಲದೇ ಸಂಪೂರ್ಣ ಸ್ತಬ್ಧಗೊಂಡಿತ್ತು.
ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಇಷ್ಟು ದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ನೀಡಿದ್ದ ದಿನಸಿ ಮತ್ತು ತರಕಾರಿ ವ್ಯಾಪಾರಕ್ಕೆ ಬ್ರೇಕ್ ಬಿದ್ದಿದೆ. ಪೊಲೀಸರು ಪ್ರಮುಖ ರಸ್ತೆ, ಓಣಿಗಳಲ್ಲೂ ಬ್ಯಾರಿಕೇಡ್ ಅಳವಡಿಸಿ ಜನರ ಓಡಾಟಕ್ಕೆ ನಿರ್ಬಂಧ ಹಾಕಿದ್ದರು. ಇದರಿಂದ ವಾಹನ ಸಂಚಾರವೂ ನಿಯಂತ್ರಣಕ್ಕೆ ಬಂದಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಲಾಕ್ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. ಎಪಿಎಂಸಿಗಳಲ್ಲೂ ಎಲ್ಲ ರೀತಿಯ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿತ್ತು. ತರಕಾರಿ ಹರಾಜು, ಕಾಳುಕಡಿ ವ್ಯಾಪಾರವೂ ಸ್ಥಗಿತಗೊಂಡಿದ್ದವು. ಬೆಳಗ್ಗೆ ದಿನಸಿ ಮತ್ತು ತರಕಾರಿ ವ್ಯಾಪಾರವೂ ಬಂದ್ ಆಗಿತ್ತು. ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಜನರ ಓಡಾಟವೂ ಕಡಿಮೆಯಾಗಿತ್ತು.
ಆಸ್ಪತ್ರೆ, ಔಷಧ, ಪೆಟ್ರೋಲ್ ಬಂಕ್ ಹೊರತುಪಡಿಸಿ ಬಾಕಿ ಎಲ್ಲ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ವಿನಾಕಾರಣ ರಸ್ತೆಗಿಳಿದವರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡರೆ, ಕೆಲವೆಡೆ ಲಾಠಿ ರುಚಿ ತೋರಿಸಿದರು. ಜಿಲ್ಲೆಯಲ್ಲಿ ಮೇ 25ವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಯಾಗಿದ್ದು, ರವಿವಾರ ಮಾತ್ರ ಬೆಳಗ್ಗೆ 6ರಿಂದ 10ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.