13ರಂದು ಎಲ್ಲ ನ್ಯಾಯಾಲಯದಲ್ಲೂ ಲೋಕ ಅದಾಲತ್
ಅನಕ್ಷರಸ್ಥರ ಅನುಕೂಲಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರ ಜಾರಿ: ನ್ಯಾ| ಪಾಟೀಲ
Team Udayavani, Jul 8, 2019, 10:40 AM IST
ಹಾವೇರಿ: ಕಾರ್ಯಾಗಾರದಲ್ಲಿ ಹಿರಿಯ ನ್ಯಾಯಾಧೀಶ ಎ.ವಿ. ಪಾಟೀಲ್ ಮಾತನಾಡಿದರು.
ಹಾವೇರಿ: ಕೃಷಿ ಪ್ರಧಾನ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಅನುಕೂಲವಾಗಲು ಕಾನೂನು ಸೇವೆಗಳ ಪ್ರಾಧಿಕಾರ ಜಾರಿಗೆ ತರಲಾಗಿದೆ ಎಂದು ಹಿರಿಯ ನ್ಯಾಯಾಧೀಶ ಎ.ವಿ. ಪಾಟೀಲ ಹೇಳಿದರು.
ವಿಪತ್ತುಗಳಿಗೆ ಒಳಗಾದ ಸಂತ್ರಸ್ತರಿಗೆ ಕಾನೂನು ಸೇವೆಗಳು, ಪೊಲೀಸ್ ದೂರು ಪ್ರಾಧಿಕಾರ, ಮೂಲಭೂತ ಕಾನೂನು ಹಾಗೂ ಸಂತ್ರಸ್ತ ಪರಿಹಾರ ಯೋಜನೆ ಕುರಿತು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಪ್ರಾಧಿಕಾರದ ಮೂಲಕ ಜನರಿಗೆ ಉಚಿತ ಕಾನೂನಿನ ಅರಿವು ಹಾಗೂ ನೆರವು ಒದಗಿಸಲಾಗುತ್ತಿದೆ ಮತ್ತು ಜನತಾ ನ್ಯಾಯಾಲಯಗಳಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಜು. 13 ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಎಲ್ಲ ನ್ಯಾಯಾಲಯಗಳಲ್ಲಿ ನಡೆಸಲಾಗುತ್ತಿದೆ. ಈ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ರಾಜೀ ಮಾಡಿಕೊಂಡರೆ ಸಮಯ, ಹಣ ಹಾಗೂ ಸಂಬಂಧಗಳು ಉಳಿಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಮಳೆಗಾಲದಲ್ಲಿ ಸಿಡಿಲು ಮತ್ತು ಇನ್ನಿತರ ಪ್ರಾಕೃತಿಕ ವಿಕೋಪಗಳಿಂದ ಪ್ರಾಣಹಾನಿ ಸಂಭವಿಸಿದ ಕುಟುಂಬಗಳಿಗೆ ಪರಿಹಾರವಾಗಿ 4 ಲಕ್ಷ ರೂಪಾಯಿ ನೀಡಲಾಗುವುದು. ಶಾಲೆ, ಮನೆ ಮತ್ತು ಇತರೆ ಕಟ್ಟಡಗಳು ನಾಶವಾದರೆ, ಪ್ರಾಕೃತಿಕ ವಿಕೋಪ ನಿಧಿಯಿಂದ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ವಿಪತ್ತುಗಳಿಗೆ ಒಳಗಾದ ಸಂತ್ರಸ್ತರಿಗೆ ಕಾನೂನು ಸೇವೆಗಳು ಹಾಗೂ ಪರಿಹಾರ ಯೋಜನೆ ಕುರಿತು ವಕೀಲರಾದ ಕೆ.ವಿ. ನಡುವಿನಮಠ, ಮೂಲಭೂತ ಕಾನೂನುಗಳ ಅರಿವು ಕುರಿತು ವಕೀಲರಾದ ಪ್ರಶಾಂತ ಯಲಿಗಾರ ಹಾಗೂ ಪೊಲೀಸ್ ದೂರು ಪ್ರಾಧಿಕಾರದ ರಚನೆ ಮಹತ್ವ ಹಾಗೂ ಕಾರ್ಯ ವೈಖರಿ ಕುರಿತು ಶಹರ ಪೊಲೀಸ್ ಠಾಣೆಯ ಉದಯ ಕುಲಕರ್ಣಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲೀಲಾವತಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಶ್ರೀವಿದ್ಯಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಜಿಲ್ಲಾ ನ್ಯಾಯವಾದಿಗಳ ಸಂಘ ಕಾರ್ಯದರ್ಶಿ ಪಿ.ಎಂ. ಬೆನ್ನೂರು, ಸರ್ಕಾರಿ ಅಭಿಯೋಜಕ ಎಸ್.ಎಂ. ಗೆಜ್ಜಿಹಳ್ಳಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನವರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ತಹಶೀಲ್ದಾರ್ ಶಿವಕುಮಾರ, ಆರೋಗ್ಯ ಇಲಾಖೆಯ ಜಗದೀಶ ಪಾಟೀಲ್ ಹಾಗೂ ಇತರರು ಇದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಅಭಿಯೋಜನೆ ಇಲಾಖೆ, ಜಿಲ್ಲಾ ಆಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.