ಮೊಬೈಲ್ ಟವರ್ ಸಾಮಗ್ರಿ ಜಪ್ತಿಗೆ ಆದೇಶ
Team Udayavani, Nov 13, 2019, 1:52 PM IST
ಬಂಕಾಪುರ: ಪಟ್ಟಣದ ತಹಶೀಲ್ದಾರ್ ಪ್ಲಾಟ್ನಲ್ಲಿ ಪುರಸಭೆಯಿಂದ ಅನುಮತಿ ಪಡೆಯದೇ ನಿರ್ಮಿಸುತ್ತಿದ್ದ ಮೊಬೈಲ್ ಟವರ್ ಸ್ಥಳಕ್ಕೆ ಶಿಗ್ಗಾವಿ ತಹಶೀಲ್ದಾರ್ ಚಂದ್ರಶೇಖರ ಗಾಳಿ ಭೇಟಿ ನೀಡಿ ಪರಿಶೀಲಿಸಿ, ಮೊಬೈಲ್ ಟವರ್ ಸಾಮಗ್ರಿಗಳನ್ನು ಕೂಡಲೆ ಜಪ್ತ ಮಾಡುವಂತೆ ಪುರಸಭೆ ಅಧಿಕಾರಿಗಳಗೆ ಆದೇಶಿಸಿದರು.
ಟವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಲ್ಲಿ ವಾಸಿಸುವ ಸಾರ್ವಜನಿಕರು ಜನವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣದಿಂದ ಶಾಲಾ ವಿದ್ಯಾರ್ಥಿಗಳ ಮೇಲೆ ಹಾಗೂ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಟವರ್ ನಿರ್ಮಾಣ ಮಾಡದಂತೆ ಪುರಸಭೆಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಉದಯವಾಣಿ ಪತ್ರಿಕೆ “ನಿಯಮ ಗಾಳಿಗೆ ತೂರಿ ಟವರ್ ನಿರ್ಮಾಣ’ ಶಿರ್ಷಿಕೆಯಡಿ ವಿಶೇಷ ವರದಿಮಾಡಿತ್ತು.
ವರದಿಯಿಂದ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಜಾಗೆ ಮಾಲೀಕರಿಗೆ ನೋಟಿಸ್ ನೀಡಿದ್ದರೂ, ಪುರಸಭೆ ನೋಟಿಸ್ಗೂ ಕ್ಯಾರೆ ಎನ್ನದ ಮಾಲೀಕರು ಮೊಬೈಲ್ ಟವರ್ ನಿರ್ಮಾಣ ಕಾರ್ಯವನ್ನು ಮುಂದುವರಿಸಿದ್ದರು. ಇದರಿಂದ ರೋಸಿ ಹೋದ ಸಾರ್ವಜನಿಕರು ಪುರಸಭೆ ಎದುರು ಮೌನ ಹೋರಾಟ ನಡೆಸಲು ತೀರ್ಮಾನಿಸಿ ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರ ಗಮನ ಸೆಳೆದಿದ್ದರು.
ತಹಶೀಲ್ದಾರ್ ಚಂದ್ರಶೇಖರ ಗಾಳಿ ಮಂಗಳವಾರ ಸ್ಥಳಕ್ಕಾಗಮಿಸಿ ಕಂದಾಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಜಪ್ತಿಗೆ ಆದೇಶಿಸಿದರು. ಪುರಸಭೆ ಮುಖ್ಯಾ ಧಿಕಾರಿ ರೇಣುಕಾ ದೇಸಾಯಿ, ಇಂಜಿನಿಯರ್ ನಾಗರಾಜ ಮಿರ್ಜಿ, ನೈರ್ಮಲ್ಯ ಅಧಿಕಾರಿ ರೂಪಾ ನಾಯ್ಕ, ಉಪತಹಶೀಲ್ದಾರ್ ಎಂ.ಎಸ್. ಪಾಟೀಲ, ಕಂದಾಯ ಅಧಿಕಾರಿ ಆರ್. ಎಂ.ನಾಯಕ, ಎಸ್.ಎಚ್. ಮುನವಳ್ಳಿ, ಶಿವಾನಂದ ಮುನವಳ್ಳಿ ಪೊಲೀಸ್ ಸಿಬ್ಬಂದಿ ಮಂಜುನಾಥ ಲಮಾಣಿ, ಎಂ.ಎಂ. ತಹಶೀಲ್ದಾರ, ಎಂ.ಎಸ್. ಕುರಿಯವರ, ಎಂ.ಎನ್.ಜಾಧವ ಸೇರಿದಂತೆ ನಿವಾಸಿಗಳು ಇದ್ದರು.