ವೃಷಭ ರೂಪಿಯಾಗಿ ಪುನರ್ಜನ್ಮ ಪಡೆದ ಮೂಕಪ್ಪ ಶಿವಯೋಗಿಗಳು
ಕಬ್ಬೂರದ ನಾಗರಾಜಪ್ಪ ಮತ್ತಿಹಳ್ಳಿ ಎಂಬುವರ ಮನೆಯಲ್ಲಿ ಜನ್ಮ ತಾಳಿದ ಶ್ರೀ: ಧರ್ಮಾಧಿಕಾರಿ
Team Udayavani, Mar 19, 2021, 9:10 PM IST
ಬ್ಯಾಡಗಿ: ತಾಲೂಕಿನ ಗುಡ್ಡದಮಲ್ಲಾಪುರದ ಷ.ಬ್ರ. ಮೂಕಪ್ಪ ಶ್ರೀಗಳು (ವೃಷಭ ರೂಪಿ) ಹಾವೇರಿ ತಾಲೂಕು ಕಬ್ಬೂರ ಗ್ರಾಮದ ನಾಗರಾಜಪ್ಪ ಮತ್ತಿಹಳ್ಳಿ ಎಂಬುವರ ಮನೆಯಲ್ಲಿ ಪುನರ್ಜನ್ಮ ತಾಳಿದ್ದಾಗಿ ಶ್ರೀಮಠದ ಧರ್ಮಾಧಿಕಾರಿ ಗುರುಹುಚ್ಚಯ್ಯ ಸ್ವಾಮಿಗಳು ತಿಳಿಸಿದ್ದಾರೆ.
ಇದರಿಂದ ಶ್ರೀಮಠದ ಸದ್ಭಕ್ತರಲ್ಲಿ ಸಂತಸ ಮೂಡಿದ್ದು, ಮರಿಕಲ್ಯಾಣ ಭಾಗದ ಗುರು ಪರಂಪರೆ ಮುಂದುವರಿದಂತಾಗಿದೆ. ಶ್ರೀ ಮಠದಲ್ಲಿ ಪುನರ್ಜನ್ಮ ಪಡೆಯುವ ಶ್ರೀಗಳು ಪಟ್ಟಕ್ಕೆ ಏರುವುದು ಕಳೆದ ಶತಮಾನದಿಂದ ನಡೆದುಕೊಂಡು ಬಂದ ಪರಂಪರೆ. ಸದಾಕಾಲ ಇಬ್ಬರು ಶ್ರೀಗಳು ಇಲ್ಲಿ ಆಡಳಿತ ನಡೆಸಿಕೊಂಡು ಬರುತ್ತಾರೆ. ಆದರೆ ಕಳೆದ 2020ರ ಮಾ.18 ರಂದು ಶ್ರೀಮಠದ ಆವರಣದಲ್ಲಿ ಶ್ರೀಗಳು ಲಿಂಗೈಕ್ಯರಾಗಿದ್ದು, ಇದೀಗ ಅವರ ಪುನರ್ಜನ್ಮವಾಗಿದೆ. ತಮ್ಮಲ್ಲಿದ್ದ ಎರಡು ಎತ್ತುಗಳನ್ನೇರಿ ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಮುಂದೆ ಹುಚ್ಚೇಶ್ವರ ಶಿವಯೋಗಿಗಳಾಗಿ ಜೀವಂತ ಸಮಾಧಿ ಯಾಗುವ ಪೂರ್ವದಲ್ಲಿ ತಮ್ಮ ಜತೆಯಲ್ಲಿದ್ದ ಕಂಟಲೆ ಬಸವಣ್ಣನಿಗೆ ಕರ್ಣದಲ್ಲಿ ಷಟಸ್ಥಲ ಬ್ರಹ್ಮೋಪದೇಶ ಹಾಗೂ ದೀಕ್ಷಾ ಸಂಸ್ಕಾರ ನೀಡುವ ಮೂಲಕ ತಮ್ಮ ಉತ್ತರಾಧಿಕಾರದ ಧರ್ಮದಂಡ ನೀಡಿದರು ಎನ್ನುವುದು ಪ್ರತೀತಿ.
ಭಕ್ತರ ನಂಬಿಕೆ ಅಚಲ:
ವೃಷಭ ರೂಪಿ ಶ್ರೀಗಳು ಸಮಾಜದಲ್ಲಿ ಧಾರ್ಮಿಕ ಕಾರ್ಯ ನಡೆಸುತ್ತಿದ್ದಾರೆ ಎನ್ನುವುದು ನೋಡುಗರ ಕಣ್ಣಿಗೆ ಸೋಜಿಗವೆನಿಸಿದರೂ ಕ್ಷೇತ್ರದಲ್ಲಿರುವ ವೃಷಭರೂಪಿ ಶ್ರೀಗಳ ಪಾದಸ್ಪರ್ಶ ಮಾಡಿದಲ್ಲಿ ತಮ್ಮೆಲ್ಲ ಸಂಕಷ್ಟಗಳಿಗೆ ಪರಿಹಾರ ಸಿಗಲಿದೆ ಎಂಬುದು ಇಂದಿಗೂ ಭಕ್ತರಲ್ಲಿರುವ ಅಚಲ ನಂಬಿಕೆ.
ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಶ್ರೀ ಗುರು ಹುಚ್ಚೇಶ್ವರ ಮೂಕಪ್ಪ ಶಿವಯೋಗಿಗಳಲ್ಲಿ ಪರಕಾಯ ಪ್ರವೇಶ ಮಾಡಿ ಮಹಾಸಂಸ್ಥಾನ ದಾಸೋಹಮಠ ಸ್ಥಾಪಿಸುವ ಮೂಲಕ ಈ ಭಾಗದಲ್ಲಿ ಇಂದಿಗೂ ಧಾರ್ಮಿಕ ಪರಂಪರೆ ಉಳಿಸಿಕೊಂಡು ಬಂದಿರುವುದು ಪವಾಡ ಸದೃಶವೇ ಸರಿ!
ಏನಿದು ಪುನರ್ಜನ್ಮ: ಮೂಕಪ್ಪ ಶ್ರೀಗಳು ಲಿಂಗೈಕ್ಯರಾದ ಬಳಿಕ ಶ್ರೀಮಠದ ಸುತ್ತಲಿನ ಯಾವುದಾದರೊಂದು ಊರಿನ ಗೋಗರ್ಭದಲ್ಲಿ ಮತ್ತೆ ಭೂಮಿಗೆ ಅವತರಿಸುತ್ತಾರೆ. ಈ ರೀತಿ ಹುಟ್ಟಿದ ಆಕಳ ಕರುವಾಗಿ ಜನಿಸುವ ಶ್ರೀಗಳು ಮೊಲೆ ಹಾಲನ್ನು ಕುಡಿಯದೇ ಶ್ರೀಮಠದ (ಗುಡ್ಡದ ಮಲ್ಲಾಪುರದ) ಕಡೆಗೆ ಮುಖ ಮಾಡಿ ಮಲಗುತ್ತಾರೆ. ಹಾವೇರಿ ತಾಲೂಕು ಕಬ್ಬೂರ ಗ್ರಾಮದ ನಾಗರಾಜಪ್ಪ ಮತ್ತಿಹಳ್ಳಿ ನಿವಾಸದಲ್ಲಿ ನವಜಾತ ಆಕಳ ಕರುವೊಂದು ಕಳೆದ 5 ದಿನಗಳಿಂದ ಹಾಲು ಸೇವಿಸದೇ ಶ್ರೀಮಠದ ಕಡೆಗೆ ಮಲಗಿದೆ. ಸದರಿ ಸುದ್ದಿ ಶ್ರೀಮಠಕ್ಕೆ ತಲುಪುತ್ತಿದ್ದಂತೆ ಧರ್ಮಾ ಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಜನಿಸಿದ ಕರುವು ಮೂಕಪ್ಪ ಶ್ರೀಗಳೇ ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗುತ್ತಾರೆ.
ಷ.ಬ್ರ.ಹುಚ್ಚೇಶ್ವರ ಮಠದ ಕತೃ ಗದ್ದುಗೆಯಲ್ಲಿನ ಶಿವಾಚಾರ್ಯರ ತೀರ್ಥಪ್ರಸಾದ (ಗುರುದೀಕ್ಷೆ) ನೀಡಿದ ಬಳಿಕವೇ ಎಲ್ಲರ ಸಮ್ಮುಖದಲ್ಲಿ ನವಜಾತ ಕರುವು ಹಾಲು ಸೇವಿಸಲಾರಂಭಿಸಿತು. ಲಿಂಗೈಕ್ಯ ಶ್ರೀಗಳು ಧರಿಸಿದ ಲಿಂಗಮುಖ ಮುದ್ರೆ ಸೇರಿದಂತೆ ಹಿರಿಯ ಶ್ರೀಗಳ ರುದ್ರಾಕ್ಷಿ ಮಾಲೆ ಹಿಡಿದು ಕುಳಿತಿದ್ದ ಧರ್ಮಾ ಧಿಕಾರಿಗಳ ಬಳಿ ನವಜಾತ ಕರು ತೆರಳಿದೆ. ಬಳಿಕ ನೆರೆದಿದ್ದ ಭಕ್ತರು ಹರ್ಷೋದ್ಘಾರ ವ್ಯಕ್ತಪಡಿಸಿದರು.