ಮುಖ್ಯಾಧಿಕಾರಿ ವಿರುದ್ಧ ಪುರಸಭೆ ಸದಸ್ಯರ ಪ್ರತಿಭಟನೆ
Team Udayavani, Oct 23, 2019, 10:03 AM IST
ಶಿಗ್ಗಾವಿ: ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆ ಸರ್ವ ಸದಸ್ಯರು ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪುರಸಭೆ ಸದಸ್ಯ ಸುಭಾಸ್ ಚೌವ್ಹಾಣ ಮಾತನಾಡಿ, ಶಿಗ್ಗಾವಿ ಪುರಸಭೆ ವ್ಯಾಪ್ತಿಯ ಕಂದಾಯ ವಿಭಾಗದ ಕಟ್ಟಡ ಪರವಾನಿಗೆ ಲೈಸನ್ಸ್ ಎನ್ಒಸಿ, ಸಿಸಿ ಹಾಗೂ ಇತರೆ ಕರಗಳು ಮೊದಲಿಗಿಂತ ಹತ್ತು ಪಟ್ಟು ಹೆಚ್ಚಿಸಲಾಗಿದೆ. ಆದರೂ ಪಟ್ಟಣದ ನೈರ್ಮಲ್ಯ, ಬೀದಿ ದೀಪದ ನಿರ್ವಹಣೆ, ನೀರು ಸರಬರಾಜು ಸೇರಿದಂತೆ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ವಿಫಲವಾಗಿದ್ದಾರೆ ಎಂದು ದೂರಿದರು.
ಪುರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗೆ ಪುರಸಭೆ ಸದಸ್ಯರು ಮುಖ್ಯಾಧಿಕಾರಿಗೆ ಮೌಖೀಕ ಹಾಗೂ ಲಿಖೀತವಾಗಿ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿದರು. ತಪ್ಪಿತಸ್ತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಮುಂದುವರೆಸಿದರು.
ಜಿಲ್ಲಾಧಿ ಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ತಿಳಿದು ಸಂಜೆ 7ಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಪುರಸಭೆ ಸದಸ್ಯರನ್ನು ಸಮಾಧಾನ ಪಡೆಸಿ; ಭ್ರಷ್ಟಾಚಾರಕುರಿತು ತನಿಖೆ ನಡೆಸಿ ಶೀಘ್ರದಲ್ಲಿಯೇ ತಪ್ಪಿತಸ್ತರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಮುಖ್ಯಾಧಿ ಕಾರಿ ಪಿ.ಕೆ. ಗುಡದಾರಿ ಅವರನ್ನು ಬೇರೆಡೆ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು