ಆನ್ಲೈನ್ ಪರೀಕ್ಷೆಗೆ ವಿರೋಧ
Team Udayavani, Jan 24, 2020, 4:10 PM IST
ಬ್ಯಾಡಗಿ: ಐಟಿಐ ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ಪರೀಕ್ಷೆ ರದ್ದುಗೊಳಿಸಿ ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ ಜಾರಿಗೆ ತಂದಿರುವ ಕೇಂದ್ರ ಸರಕಾರದ ನಡೆ ಖಂಡಿಸಿ, ಪಟ್ಟಣದಲ್ಲಿ ನೂರಾರು ಐಟಿಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಹಳೆಯ ಪದ್ಧತಿಯಲ್ಲಿಯೆ ಪರೀಕ್ಷೆ ನಡೆಸುವಂತೆ ತಹಶೀಲ್ದಾರ್ ಶರಣಮ್ಮ ಕಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಗುರುವಾರ ಪಟ್ಟಣದ ತಾಲೂಕು ಕ್ರೀಡಾಂಗಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಹಳೇ ಪುರಸಭೆ ಮುಖ್ಯ ರಸ್ತೆ ಸುಭಾಷ್ ಸರ್ಕಲ ಮೂಲಕ ಹಾದು ತಹಶೀಲ್ದಾರ್ ಕಚೇರಿ ತಲುಪಿತು. ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ಸಂಜೀವ ಅಂಗಡಿ, ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರಕಾರ ತಂದಿರುವ ಈ ಪರೀಕ್ಷಾ ನೀತಿ ಗ್ರಾಮೀಣ ಭಾಗದ ಐಟಿಐ ವಿದ್ಯಾರ್ಥಿಗಳ ಭವಿಷ್ಯದ ಪಾಲಿಗೆ ಕಂಟಕಪ್ರಾಯವಾವಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದ ಯುವಕರಿಗೆ ಕಂಪ್ಯೂಟರ್ ಜ್ಞಾನವಿಲ್ಲದೇ ಇರುವುದು ಕೂಡಾ ಪರೀಕ್ಷಾ ಫಲಿತಾಂಶಕ್ಕೆ ಹಿನ್ನಡೆ ತರುವ ಸಾಧ್ಯತೆ ಇದ್ದು, ಆದ್ದರಿಂದ ಮೊದಲಿನ ರೀತಿಯಲ್ಲಿ ಪರೀಕ್ಷೆ ನಡೆಸುವಂತೆ ಆಗ್ರಹಿಸಿದರು.
ರಾಜಶೇಖರ ಭರಾಪುರ ಮಾತನಾಡಿ, ದೇಶದಲ್ಲಿನ ಕೈಗಾರಿಕೆ ಜೀವಂತವಾಗಿಡಲು ತಾಂತ್ರಿಕ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳ ಕೊಡುಗೆ ಸಾಕಷ್ಟಿದೆ. ದೇಶದ ಅಭ್ಯುದಯಕ್ಕೆ ತನ್ನದೇ ಆದ ಕೊಡುಗೆ ಐಟಿಐ ಸೇರಿದಂತೆ ತಾಂತ್ರಿಕ ಶಿಕ್ಷಣ ಕ್ಷೇತ್ರ ನೀಡುತ್ತ ಬಂದಿದೆ. ಆದರೆ, ಇದನ್ನು ಮರೆತಂತೆ ವರ್ತಿಸುತ್ತಿರುವ ಕೇಂದ್ರ ಸರಕಾರ ಹಳೆಯ ಪದ್ಧತಿ ರದ್ದುಪಡಿಸಿ ಆನ್ಲೈನ್ ಪರೀಕ್ಷೆ ಜಾರಿಗೆ ತಂದಿರುವುದು ವಿದ್ಯಾರ್ಥಿಗಳನ್ನು ರಾತ್ರಿ ಕಂಡ ಬಾವಿಗೆ ಹಗಲು ತಳ್ಳಿದಂತಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಪದ್ಧತಿಯನ್ನು ನಾವು ಒಪ್ಪುವುದಿಲ್ಲ ಎಂದರು.
ಪುರಸಭೆ ಸದಸ್ಯ ಶಿವರಾಜ ಅಂಗಡಿ, ಅಭಿಷೇಕ ವಡ್ಡರ, ನವೀನ ಶಿರಗೂರ, ರುದ್ರೇಶ ನೂರೊಂದ ನವರ, ಶ್ರೀನಾಥ ಬಡಿಗೇರ, ಅಭಿಷೇಕ ನಿಂಗಮ್ಮನವರ, ಗುಡ್ಡಪ್ಪ ದೇವಗಿರಿ, ನಾಗರಾಜ ದೊಡ್ಡೇಶ ದುರಗೇಶ ಸೇರಿದಂತೆ ಬ್ಯಾಡಗಿ ತಾಲೂಕಿನ ವಿವಿಧ ಐಟಿಐ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು