ಕೆಲವರ ಸ್ವಾಗತ-ಬಹುತೇಕರ ವಿರೋಧ
Team Udayavani, Dec 19, 2018, 4:34 PM IST
ಹಾವೇರಿ: ಮುಜರಾಯಿ ಇಲಾಖೆ ದೇವಸ್ಥಾನ, ಮಠ-ಮಂದಿರಗಳಲ್ಲಿ ಹಾಗೂ ಸ್ವಯಂಪ್ರೇರಿತವಾಗಿ ಮಾಡುವ ದಾಸೋಹ, ಪ್ರಸಾದ ವಿತರಣೆಗೆ ಸರ್ಕಾರ ವಿಧಿಸಿರುವ ಷರತ್ತುಗಳ ಬಗ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಠ, ಮಂದಿರಗಳಲ್ಲಿ ವಿತರಿಸುವ ಪ್ರಸಾದ, ದಾಸೋಹ ತಯಾರಿಕೆಗೆ ವಿಧಿಸಿರುವ ಕಟ್ಟಲೆ ಹಾಗೂ ಸ್ವಯಂ ಪ್ರೇರಿತವಾಗಿ ಕೈಗೊಳ್ಳುವ ಪ್ರಸಾದ, ದಾಸೋಹಕ್ಕೆ ಪೂರ್ವಾನುಮತಿ ಕಡ್ಡಾಯಗೊಳಿಸಿರುವುದನ್ನು ಕೆಲವರು ಸ್ವಾಗತಿಸಿದರೆ, ಬಹುತೇಕರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಜನರು ತಿನ್ನುವ ಆಹಾರವನ್ನು ಸಿಸಿ ಟಿವಿ ಕಣ್ಗಾವಲಿನಲ್ಲಿಯೇ ತಯಾರಿಸಬೇಕು. ಯಾವ ಪ್ರಸಾದ, ಎಷ್ಟು ಜನರಿಗೆ ಎಂಬ ಮಾಹಿತಿ ಕೊಡಬೇಕು. ಇದಕ್ಕಾಗಿ ಸಂಬಂಧಿತ ಅಧಿಕಾರಿಯಿಂದ ಪೂರ್ವಾನುಮತಿ ಪಡೆದು, ಆಹಾರ ನಿರೀಕ್ಷಕರಿಂದ ಆಹಾರ ಪರೀಕ್ಷಿಸಿಯೇ ಜನರಿಗೆ ಕೊಡುವುದರಿಂದ ಪ್ರಸಾದ, ದಾಸೋಹ ಇನ್ನಷ್ಟು ಹೆಚ್ಚು ಸುರಕ್ಷಿತಗೊಳ್ಳಲಿದೆ. ಇತ್ತೀಚೆಗೆ ನಡೆದ ಸುಳ್ವಾಡಿಯ ಕಿಚ್ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ದುರ್ಘಟನೆ ಮರುಕಳಿಸುವುದಿಲ್ಲ. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಪ್ರಸಾದ, ದಾಸೋಹಕ್ಕೆ ಸರ್ಕಾರ 20 ಅಂಶಗಳ ನಿಯಮಗಳ ಪಾಲನೆ ಹೇರಿರುವುದು ಸರಿಯಲ್ಲ. ದೇವಸ್ಥಾನ, ಮಠಗಳಲ್ಲಿ ಪುರಾತನ ಕಾಲದಿಂದಲೂ ಪ್ರಸಾದ, ದಾಸೋಹ ನಡೆಯುತ್ತಲೇ ಬಂದಿದೆ. ಆಯಾ ದೇವಸ್ಥಾನದವರು ಶುಚಿತ್ವ ಕಾಯ್ದುಕೊಂಡು, ಅಡುಗೆ ಜವಾಬ್ದಾರಿ ಹೊತ್ತವರ ನೇರ ಕಣ್ಗಾವಲಿನಲ್ಲಿಯೇ ಅಡುಗೆ ಸಿದ್ಧವಾಗಿ ವಿತರಣೆಯಾಗುತ್ತಿದೆ. ಈಗ ಇದಕ್ಕಾಗಿ ಪರವಾನಗಿ, ಪರೀಕ್ಷೆ ಎಂದೆಲ್ಲ ನಿಯಮಗಳನ್ನು ಹೇರಿದರೆ ಅದು ಭಕ್ತರ ಭಾವನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ವ್ಯಾಪ್ತಿಯಲ್ಲಿರಲಿ: ಸರ್ಕಾರ ಈ ನಿಯಮಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಿಗೆ ಸೀಮಿತಗೊಳಿಸಿ, ಅದನ್ನು ಕಡ್ಡಾಯವಾಗಿ ಪಾಲಿಸಲಿ. ಅಲ್ಲಿ ಸರ್ಕಾರದ ಸಿಬ್ಬಂದಿ, ಅಧಿಕಾರಿ ಎಲ್ಲರೂ ಇರುತ್ತಾರೆ. ಆದರೆ, ಖಾಸಗಿ ಮಠ, ಮಂದಿರ, ಸ್ವಯಂ ಪ್ರೇರಿತರಾಗಿ ಪ್ರಸಾದ, ದಾಸೋಹ ಮಾಡಿಸುವವರಿಗೆ ಈ ನಿಯಮ ಹೇರುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಹಲವರಿಂದ ವ್ಯಕ್ತವಾಗಿದೆ.
ಒಟ್ಟಾರೆ ಸರ್ಕಾರ ಪ್ರಸಾದ, ದಾಸೋಹಕ್ಕೆ ಸಂಬಂಧಿಸಿ ಹೊರಡಿಸಿರುವ ಆದೇಶಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಆದೇಶ ಅನುಷ್ಠಾನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ದಾಸೋಹ, ಪ್ರಸಾದ ತಯಾರಿಕೆಗೆ ಸಂಬಂಧಿಸಿ ಸರ್ಕಾರ ವಿಧಿ ಸಿರುವ ಮುಂಜಾಗ್ರತಾ ಸುರಕ್ಷಾ ಕ್ರಮಗಳು ಸರಿಯಾಗಿವೆ. ಎಲ್ಲರೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಆಗ ಸಾವಿರಾರು ಜನರು ತಿನ್ನುವ ಆಹಾರದ ಗುಣಮಟ್ಟ, ಸುರಕ್ಷತೆ ಹಾಗೂ ಶುಚಿತ್ವದ ಪಾಲನೆಯಾಗುತ್ತದೆ. ಗಣ್ಯ ವ್ಯಕ್ತಿಗಳು ಊಟ ಮಾಡುವ ಆಹಾರ ಪರೀಕ್ಷಿಸಲಾಗುತ್ತದೆ. ಸಾಮಾನ್ಯರು ಭಕ್ತಿಯ ಹೆಸರಲ್ಲಿ ತಿನ್ನುವ ಪ್ರಸಾದ ಅಧಿಕೃತವಾಗಿ ಪರೀಕ್ಷಿಸಿ ಕೊಡುವುದರಲ್ಲಿ ತಪ್ಪೇನಿಲ್ಲ.
·ಮೃತ್ಯುಂಜಯ ಹಿರೇಮಠ ಶಾಸ್ತ್ರಿಗಳು,
ಪುರೋಹಿತರು
ಪ್ರಸಾದ, ದಾಸೋಹ ತಯಾರಿಕೆ, ವಿತರಣೆಗೆ ನಿಯಮಗಳನ್ನು ಹೇರಿರುವ ಸರ್ಕಾರದ ಕ್ರಮ ಖಂಡನೀಯ. ಮಠಗಳಲ್ಲಿ ಹಲವು ಶತಮಾನಗಳ ದಾಸೋಹ ಪರಂಪರೆ ಇದೆ. ಮಠಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿಯೇ ಅಡುಗೆ ಮಾಡಲಾಗುತ್ತದೆ. ಹೀಗಾಗಿ ಪ್ರಸಾದ, ದಾಸೋಹ ಬಗ್ಗೆ ಜನರಲ್ಲಿರುವ ಭಾವನೆಯೇ ಬೇರೆ. ಸರ್ಕಾರ ನಿಯಮಗಳನ್ನು ಹೇರುವುದರಿಂದ ಭಕ್ತರ ಭಾವನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರ ತನ್ನ ಅಧೀನದಲ್ಲಿರುವ ದೇವಸ್ಥಾನಗಳ2ಲ್ಲಿ ಈ ನಿಯಮ ಅನುಷ್ಠಾನಕ್ಕೆ ತರಬಹುದು. ಖಾಸಗಿ ಮಠ, ಮಂದಿರ ಹಾಗೂ ವ್ಯಕ್ತಿಗಳಿಗೆ ಇದನ್ನು ಹೇರುವುದು ಸರಿಯಲ್ಲ.
·ಬಸವಶಾಂತಲಿಂಗ ಸ್ವಾಮೀಜಿ,
ಹೊಸಮಠ, ಹಾವೇರಿ
ಮಠ, ಮಂದಿರಗಳು ಶ್ರದ್ಧಾ ಕೇಂದ್ರಗಳು. ಅಲ್ಲಿ ಭಕ್ತರು ಮತ್ತು ಮಠ, ಮಂದಿರ ನಡುವೆ ಭಾವನಾತ್ಮಕ ಸಂಬಂಧ ಇರುತ್ತದೆ. ಯಾವುದೋ ಒಂದು ದೇವಸ್ಥಾನದಲ್ಲಿ ನಡೆದ ದುರ್ಘಟನೆಯಿಂದ ಇಡೀ ವ್ಯವಸ್ಥೆಯನ್ನು ಅದೇ ದೃಷ್ಟಿಕೋನದಲ್ಲಿ ನೋಡುವುದು ತಪ್ಪು. ಸಾಧ್ಯವಾದರೆ ದಾಸೋಹ, ಪ್ರಸಾದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಿ. ನಿಯಮ ಪಾಲಿಸಲು ಒತ್ತಡ ಹೇರುವುದು ಸರಿಯಲ್ಲ.
·ಸದಾಶಿವ ಸ್ವಾಮೀಜಿ, ಹುಕ್ಕೇರಿಮಠ,
ಹಾವೇರಿ
20 ಅಂಶಗಳ ನಿಯಮ ಹೇರಿರುವುದು ಸೂಕ್ತವಲ್ಲ. ಪ್ರಸಾದ, ದಾಸೋಹದಲ್ಲಿ ವ್ಯತ್ಯಾಸವಾದರೆ ಅದಕ್ಕೆ ಪ್ರಸಾದ, ದಾಸೋಹ ವ್ಯವಸ್ಥೆ ನಿರ್ವಹಣೆ ಮಾಡುವವರನ್ನೇ ಹೊಣೆಗಾರರನ್ನಾಗಿಸುವ ನಿಯಮ ತಂದರೆ ಸಾಕು. ಪ್ರಸಾದ, ದಾಸೋಹ ಮಾಡುವ ಭಕ್ತಗಣಕ್ಕೆ ಪರವಾನಗಿ, ಪರೀಕ್ಷೆ ಎಂಬ ನಿಯಮ ಪಾಲನೆಯೇ ಹೊರೆಯಾಗುವ ಜತೆಗೆ ಈ ವಿಚಾರದಲ್ಲಿ ಭ್ರಷ್ಟಾಚಾರಕ್ಕೂ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.
·ಸತೀಶ ಕುಲಕರ್ಣಿ, ಹಿರಿಯ ಸಾಹಿತಿ,
ಹಾವೇರಿ
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ
Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
MUST WATCH
ಹೊಸ ಸೇರ್ಪಡೆ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ