ವೈಶಿಷ್ಟ್ಯಪೂರ್ಣ ಕರ್ಜಗಿಯ ಕಾರಹುಣ್ಣಿಮೆ
•ಮೂರು ದಿನಗಳ ಸಂಭ್ರಮಾಚರಣೆ •ಬ್ರಹ್ಮಲಿಂಗೇಶ್ವರ ಮಹೋತ್ಸವದ ಜಾತ್ರಾ ವೈಭವ
Team Udayavani, Jun 14, 2019, 11:46 AM IST
ಹಾವೇರಿ: ಅತ್ಯಾಕರ್ಷಕ ಅಲಂಕಾರಗೊಂಡ ಬಂಡಿಗಳು. ಸ್ಪರ್ಧೆಯೊಡ್ಡುವ ರೀತಿ ಭರದಿಂದ ಓಡುವ ಬಂಡಿಯ ಎತ್ತುಗಳು-ಇದು ತಾಲೂಕಿನ ಕರ್ಜಗಿ ಗ್ರಾಮದ ಕಾರಹುಣ್ಣಿಮೆಯ ವಿಶೇಷ.
ಕಾರಹುಣ್ಣಿಮೆ ವೈಭವ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಬ್ರಹ್ಮಲಿಂಗೇಶ್ವರ ಕಾರಹುಣ್ಣಿಮೆ ಮಹೋತ್ಸವವು ಜೂ. 18ರಿಂದ 20ರ ವರೆಗೆ ಮೂರು ದಿನಗಳ ಕಾಲ ವಿಜೃಂಭಣೆ ಹಾಗೂ ಹಲವು ವಿಶಿಷ್ಟ ಸಂಪ್ರದಾಯಗಳ ಪ್ರಕಾರ ನಡೆಯಲಿದೆ.
ವರದಾ ನದಿ ದಂಡೆಯಲ್ಲಿರುವ ಕರ್ಜಗಿ ಗ್ರಾಮದಲ್ಲಿ ಮೂರು ದಿನ ನಡೆಯುವ ಶ್ರೀಬ್ರಹ್ಮ ಲಿಂಗೇಶ್ವರ ಜಾತ್ರೆ ಕಾರಹುಣ್ಣಿಮೆ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಈ ಹಬ್ಬದಲ್ಲಿ ಗ್ರಾಮದ ಎಲ್ಲ ಜಾತಿ ಜನಾಂಗದವರೂ ಏಕತೆಯಿಂದ ಭಾಗವಹಿಸುವುದು ಇಲ್ಲಿನ ವಿಶೇಷತೆಗಳಲ್ಲೊಂದಾಗಿದೆ.
ಕರ್ಜಗಿಯ ಕಾರಹುಣ್ಣಿಮೆ ಮಹೋತ್ಸವ ಜಿಲ್ಲೆಯಲ್ಲಿ ಅತ್ಯಂತ ಖ್ಯಾತಿ ಪಡೆದ ಮಹೋತ್ಸವವಾಗಿದೆ. ಮೂರು ದಿನಗಳ ಈ ಉತ್ಸವದಲ್ಲಿ ಜೂ. 18ರಂದು ಹೊನ್ನುಗ್ಗಿ, ಜೂ. 19ರಂದು ದೊಡ್ಡಬಂಡಿ ಉತ್ಸವ, ಜೂ. 20ರಂದು ಕರಕ್ಕಿ ಬಂಡಿ ಉತ್ಸವ ವಿಶಿಷ್ಟವಾಗಿ ನಡೆಯುತ್ತದೆ.
ಪ್ರತಿ ವರ್ಷ ಕಾರಹುಣ್ಣಿಮೆಯ ನಂತರ ಬರುವ ಮಂಗಳವಾರದಿಂದ ಹೊನ್ನುಗ್ಗಿಯೊಂದಿಗೆ ಕಾರಹುಣ್ಣಿಮೆ ವೈಭವ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಹೊಸ ಮಳೆ ಪ್ರಾರಂಭವಾಗಿರುವುದರಿಂದ ಬಿತ್ತನೆಗೆ ಸಕಾಲವಾಗಿರುತ್ತದೆ. ಅಂದು ನೇಗಿಲು ಮತ್ತು ವ್ಯವಸಾಯಕ್ಕೆ ಬಳಸುವ ಎಲ್ಲ ಸಾಮಗ್ರಿಗಳನ್ನು ಶೃಂಗರಿಸಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಕರಿ ಕಂಬಳಿಯ ಗದ್ದುಗೆ ಮಾಡಿ ಎತ್ತನ್ನು ಪೂರ್ವಕ್ಕೆ ಮುಖ ಮಾಡಿ ನಿಲ್ಲಿಸಿ ಅದರ ಪಾದಕ್ಕೆ ಈ ವರ್ಷ ಮಳೆ-ಬೆಳೆ ಬಂಗಾರದಂತೆ ಬರಲಿ ಎಂದು ಹೊನ್ನು(ಬಂಗಾರ) ಮುಟ್ಟಿಸುತ್ತಾರೆ. ಇದಾದ ನಂತರ ಎತ್ತಿಗೆ ಹುಗ್ಗಿಯ ಪ್ರಸಾದ ತಿನ್ನಿಸಿ ಹೊನ್ನುಗ್ಗಿ ಆಚರಿಸಲಾಗುತ್ತದೆ.
ದೊಡ್ಡಬಂಡಿ: ಎರಡನೇ ದಿನವಾದ ಜೂ. 18ರಂದು ಬಂಡಿ ಓಟಕ್ಕಾಗಿ ರೈತರು ಬೆಳಗ್ಗೆಯಿಂದಲೇ ಎತ್ತು ಹಾಗೂ ಬಂಡಿಗಳಿಗೆ ಶೃಂಗರಿಸಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಬಂಡಿ ಓಟ ರಾತ್ರಿ 8 ಗಂಟೆಯವರೆಗೂ ನಡೆಯುತ್ತದೆ. ವಿಶಿಷ್ಟ ವೇಷಗಳ ಮೂಲಕ ಗಮನಸೆಳೆದ ವೀರಗಾರರು, ಬಂಡಿಗಳನ್ನೇರಿ ಬಂಡಿ ಓಟಕ್ಕೆ ರಂಗು ಮೂಡಿಸುತ್ತಾರೆ.
ಬಂಡಿ ಓಟದ ಮುನ್ನ ಗ್ರಾಮದ ಆರಾಧ್ಯ ಬ್ರಹ್ಮಲಿಂಗೇಶ್ವರ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಸಿಂಗರಿಸಿದ ಎತ್ತುಗಳಿಗೆ ಹೂಡಿದ ಬಂಡಿಗಳನ್ನು ಗ್ರಾಮ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ನಡೆಯುವ ಬಂಡಿಯ ಓಟ ನೆರದ ಜನರನ್ನು ರೋಮಾಂಚಗೊಳಿಸುತ್ತದೆ.
ಗ್ರಾಮದ ವೀರಶೈವ ಸಮುದಾಯಕ್ಕೆ ಸೇರಿದ ಹೊಸಮನಿ ಹಾಗೂ ಕಾಮಣ್ಣನವರ ಕುಟುಂಬದಲ್ಲಿನ ತಲಾ ಏಳು ಜನ ಪುರುಷರು ಬಂಡಿ ಏರುತ್ತಾರೆ. ಹೀಗೆ ಬಂಡಿ ಏರುವ ಪುರುಷರು ವಿವಾಹಿತರಾಗಿರಬೇಕು. ಅಂಗವಿಕಲರಿರಬಾರದು, ವಿಧುರರಿರಬಾರದು ಎಂಬ ನಿಯಮ ಇದೆ. ಹೀಗೆ ಈ ಎರಡು ಕುಟುಂಬದ 14 ಸದಸ್ಯರು ಉಪವಾಸ ವ್ರತಾಚರಣೆ ಮಾಡಿದ ವೀರಗಾರರು ಸಂಪ್ರದಾಯದ ಉಡುಗೆ ತೊಟ್ಟು, ಮೈಗೆ ಗಂಧ ಲೇಪಿಸಿಕೊಂಡು, ಕೇದಿಗೆ ಬಾಸಿಂಗ್ ಕಟ್ಟಿಕೊಂಡು ಗ್ರಾಮದ ಬ್ರಹ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂಡಿ ಓಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ವೀರಗಾರರ ಕರ್ತವ್ಯ ಮಾತ್ರ ವಂಶ ಪರಂಪರಗತವಾಗಿದೆ.
ಕರಕ್ಕಿ ಬಂಡಿ: ಇದಾದ ನಂತರ ಮೂರನೇ ದಿನ ಜೂ. 20ರಂದು ಕರಕ್ಕಿ ಬಂಡಿ ಹಬ್ಬ ನಡೆಯುತ್ತದೆ. ಈ ಬಂಡಿಗೆ ಬುಧವಾರ ಹುಟ್ಟಿದ ಕರುವನ್ನು ಹೂಡುವುದು ಇಲ್ಲಿನ ವಿಶೇಷ. ಈ ಕಾರ್ಯಕ್ರಮ ಅಂದು ಬೆಳಗ್ಗೆ 10ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆ ವರೆಗೂ ನಡೆಯುತ್ತದೆ. ಒಟ್ಟಾರೆ ಕರ್ಜಗಿ ಗ್ರಾಮದಲ್ಲಿ ನಡೆಯುವ ಕಾರ ಹುಣ್ಣಿಮೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತದೆ.
ಒಟ್ಟಾರೆ ಮೂರು ದಿನಗಳ ಕಾಲ ಕರ್ಜಗಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಮಹೋತ್ಸವನ್ನು ಅದ್ಧೂರಿಯಾಗಿ, ಸಂಪ್ರದಾಯಗಳೊಂದಿಗೆ ಆಚರಿಸುತ್ತಾರೆ. ಜಿಲ್ಲೆಯ ವಿವಿಧೆಡೆಗಳಿಂದ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
•ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಸ್ಟಾರ್ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ
ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ
Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ