ಸೀಲ್ಡೌನ್ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಭೇಟಿ
Team Udayavani, Jul 28, 2020, 9:33 AM IST
ಬಂಕಾಪುರ: ಪಟ್ಟಣದಲ್ಲಿನ ಸೀಲ್ಡೌನ್ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಅನ್ನಪೂರ್ಣಾ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪಟ್ಟಣದ ಸಿಂಪಿ ಗಲ್ಲಿ, ಶಹಬಜಾರ, ಮುಖ್ಯ ಮಾರುಕಟ್ಟೆ ರಸ್ತೆ, ರೇಣುಕಾ ಟಾಕೀಜ್ ರಸ್ತೆ, ಕೊಟ್ಟಿಗೇರಿ, ಖತೀಬ ಗಲ್ಲಿ ಸೇರಿದಂತೆ ವಿವಿಧ ಸೀಲ್ಡೌನ್ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಮೌಖೀಕ ಅಹವಾಲು ಸ್ವೀಕರಿಸಿದರು. ಸೀಲ್ಡೌನ್ ಪ್ರದೇಶದಲ್ಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆಹಾರ ಧಾನ್ಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಪೂರೈಸಬೇಕು. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಬೇಕು. ಅನಗತ್ಯವಾಗಿ ಯಾರು ಓಡಾದಂತೆ ನಿಗಾ ವಹಿಸಬೇಕು. ಮಾಸ್ಕ್ ಧರಿಸಿ, ಸ್ಯಾನಿಟೈಸ್ ಬಳಸುವ ಜತೆಗೆ ಮನೆ ಬಿಟ್ಟು ಯಾರು ಹೊರಗೆ ಬಾರದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ನಿರ್ಲಕ್ಷ್ಯ ತೋರಿದವರ ಮೇಲೆ ದಂಡ, ಶಿಕ್ಷೆ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಎಸಿ ಸೂಚಿಸಿದರು.
ಲಾಕ್ಡೌನ್ದಿಂದಾಗಿ ಸಂಪೂರ್ಣ ವ್ಯಾಪಾರ, ವಹಿವಾಟು ನಿಂತು ಹೋಗಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಗ್ರಾಹಕರಿಗೂ ತೊಂದರೆಯಾಗಿದೆ. ಹೀಗಾಗಿ ವ್ಯಾಪಾರ-ವಹಿವಾಟು ನಡೆಸಲು ಸ್ವಲ್ಪ ಅನುಕೂಲ ಮಾಡಿಕೊಡಬೇಕು ಎಂದು ಸೀಲ್ ಡೌನ್ ಪ್ರದೇಶದ ವ್ಯಾಪಾರಸ್ಥರು, ಸಾರ್ವಜನಿಕರು ಉಪವಿಭಾಗಾಧಿಕಾರಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತಿಳಿಸಲಾಗುತ್ತದೆ. ಅಲ್ಲಿಯವರೆಗೆ ಸೀಲ್ಡೌನ್ ನಿಯಮಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಎಂಜನಿಯರ್ ಬಸವರಾಜ ಮಿರ್ಜಿ, ಪುರಸಭೆ ಆರೋಗ್ಯ ಅಧಿಕಾರಿ ರೂಪಾ ನಾಯಕರ, ಪಿಎಸ್ಐ ಸಂತೋಷ ಪಾಟೀಲ, ಮುಖಂಡರಾದ ಬಸವರಾಜ ನಾರಾಯಣಪುರ, ಹೊನ್ನಪ್ಪ ಹೂಗಾರ, ಮಂಜುನಾಥ ಕೂಲಿ, ವ್ಯಾಪಾರಸ್ಥರಾದ ಸುರೇಶಗೌಡ ಪಾಟೀಲ, ಮಂಜುನಾಥ ಮೇಲಗೆರಿ, ಪುಕಾಳೆ, ಫೀಸೆ, ವೀರಣ್ಣ ಶೆಟ್ಟರ ಇನ್ನಿತರರಿದ್ದರು.