ನಕಲಿ ಬೀಜ ಮಾರಾಟ: ವಿಜ್ಞಾನಿಗಳ ಪರಿಶೀಲನೆ
Team Udayavani, Nov 26, 2019, 3:24 PM IST
ಗಂಗಾವತಿ: ಬೇಸಿಗೆ ಹಂಗಾಮಿನಲ್ಲಿ ಭತ್ತ ನಾಟಿ ಮಾಡಲು ರೈತರು ಹಾಕಿದ ಭತ್ತದ ಸಸಿ ಮಡಿ ಮೊಳಕೆ ಒಡೆಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಾಣಾಪೂರ, ರಂಗಾಪೂರ, ತಿರುಮಲಾಪೂರ ಹನುಮನಹಳ್ಳಿ ರೈತರ ಸಸಿ ಮಡಿಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು.
ಬೇಸಿಗೆ ಹಂಗಮಿನಲ್ಲಿ ಭತ್ತ ನಾಟಿ ಮಾಡಲು ರೈತರು ಮುಂಚಿತವಾಗಿ ಸಸಿ ಮಡಿ ಹಾಕಿದ್ದರು. ಹಾಕಿದ ಸಸಿ ಮಡಿ ಮೊಳಕೆಒಡೆಯದ ಕಾರಣ ರೈತರು ಕೃಷಿ ಇಲಾಖೆಗೆ ದೂರು ನೀಡಿ ಕಳಪೆ ಬೀಜ ನೀಡಿದ್ದರಿಂದ ಸಸಿ ಮಡಿ ಮೊಳಕೆ ಒಡೆದಿಲ್ಲ. ಇದರಿಂದ ಸಸಿ ಮಡಿ ಹಾಕಲು ಮಾಡಿದ ಖರ್ಚು ವ್ಯರ್ಥವಾಗಿದೆ. ನಕಲಿ ಬೀಜ ಮಾರಾಟ ಮಾಡಿದ ಹೊಸ್ಕೇರಾ ಕ್ಯಾಂಪಿನ ಸಾಯಿ ಕೃಷ್ಣ ಸೀಡ್ಸ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರಿಂದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶಬಾನಾ ಶೇಕ್ ಅವರು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಸಂಶೋಧನಾ ಕೇಂದ್ರ ಕೃಷಿ ವಿಜ್ಞಾನ ಕೇಂದ್ರಕ್ಕೆ ಪತ್ರ ಬರೆದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರಿಂದ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿ ವಿಜ್ಞಾನಿ ಡಾ|ಮಸ್ತಾನರಡ್ಡಿ, ಭತ್ತದ ಸಂಶೋಧನಾ ತಳಿ ವಿಜ್ಞಾನಿ ಡಾ| ಮಹಾಂತ ಶಿವಯೋಗಯ್ಯಸ್ವಾಮಿ, ವಿಜ್ಞಾನಿಗಳಾದ ಡಾ|ಪರಮೇಶ್ವರ ಡಾ| ರಾಧಾ ಕೃಷಿ ಇಲಾಖೆಯ ಅಧಿಕಾರಿ ಭಗವಾನ ಸ್ಥಳ ಪರಿಶೀಲಿಸಿ, ಪ್ರತಿ ಸಸಿ ಮಡಿಯ ಅಳತೆ ಮಾಡಿ ವರದಿ ಸಂಗ್ರಹ ಮಾಡಿದರು. ಸ್ಥಳಕ್ಕ ಭೇಟಿ ನೀಡಿದ ಕೃಷಿ ವಿಜ್ಞಾನಿಗಳ ತಂಡಕ್ಕೆ ಸಾಣಾಪೂರ, ತಿರುಮಲಾಪೂರ ರೈತರು ನಕಲಿ ಬೀಜದಿಂದಾಗಿ ನಷ್ಟವುಂಟಾಗಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.