ಅಂಧ ಯುವತಿ ಸಾಧನೆಗೆ ಸಂತಸ
ಬೆಂಗಳೂರು ಪಿಯು ಕಾಲೇಜಿನಲ್ಲಿ ಅಧ್ಯಯನ
Team Udayavani, Apr 22, 2019, 11:48 AM IST
ಶಹಾಪುರ: ಅಂಧ ವಿದ್ಯಾರ್ಥಿನಿಯೊಬ್ಬಳು ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮಸ್ಥರು, ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ತಾಲೂಕಿನ ಹೊಸಕೇರಾ ಗ್ರಾಮದ ತಿಪ್ಪಣ್ಣ ಹಾಗೂ ಪೀರಮ್ಮ ದಂಪತಿ ಪುತ್ರಿ ಅಂಧ ವಿದ್ಯಾರ್ಥಿನಿ ವೈಶಾಲಿ ಪಿಯುಸಿ (ಕಲಾ) ದ್ವಿತೀಯ ವರ್ಷದ ಪರೀಕ್ಷೆಯಲ್ಲಿ 600ಕ್ಕೆ 556 (ಶೇ. 92.66) ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ಪ್ರಸ್ತುತ ಸಮರ್ಪಕ ಆರೋಗ್ಯ, ಕಣ್ಣು, ಕಾಲು ಚೆನ್ನಾಗಿದ್ದರೂ ಯಾವುದೇ ಕೆಲಸ ಮಾಡದೆ ಪುಂಡಾಟಿಕೆ ಮಾಡುತ್ತ್ತ ತಿರುಗುವವರನ್ನು ಕಂಡಿದ್ದೇವೆ. ಆದರೆ ವೈಶಾಲಿ ಸಾಧನೆ ಮಾತ್ರ ಎಲ್ಲರಿಗೂ ಮಾದರಿಯಾಗಿದೆ. ಬಡತನದ ಬೇಗೆಯಲ್ಲೂ ಪಾಲಕರ ಸಹಾಯದಿಂದ ಶೈಕ್ಷಣಿಕವಾಗಿ ಬೆಳೆಯುತ್ತಿರುವ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಸದ್ಯ ಬೆಂಗಳೂರಿನಲ್ಲಿಯೇ ಕುಟುಂಬ ವಾಸಿಸುತ್ತಿದೆ. ವಿದ್ಯಾರ್ಥಿನಿ ತಂದೆ ತಿಪ್ಪಣ್ಣ ಅವರು ಕೆಎಸ್ಆರ್ಟಿಸಿಯಲ್ಲಿ ಬಸ್ ಚಾಲಕರಾಗಿ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಮಾರಿ ವೈಶಾಲಿ ಅವರು ಬೆಂಗಳೂರಿನ ಎಚ್ಆರ್ಎಸ್ ಕಾಲೋನಿಯ ಆಗ್ರಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಅಧ್ಯಯನ ಮಾಡಿದ್ದಾಳೆ. ವಿದ್ಯಾರ್ಥಿನಿ ವೈಶಾಲಿ ಅವರ ಸಾಧನೆಗೆ ಹೊಸಕೇರಾ ಗ್ರಾಮಸ್ಥರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಆಕೆ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಮಗಳ ಸಾಧನೆ ಸಂತೋಷ ತಂದಿದೆ. ಸಾಲ ಮಾಡಿಯಾದರೂ ಮಗಳಿಗೆ ಉನ್ನತ ಶಿಕ್ಷಣ ಕೊಡಿಸುತ್ತೇವೆ. ಅಂಧಳಾಗಿದ್ದರೂ ಆಕೆಯೇ ಮುಂದೆ ಎಲ್ಲರಿಗೂ ಸ್ಫೂರ್ತಿಯಾಗಿ ಬದುಕುಬೇಕು. ಅದಕ್ಕೆ ಬೇಕಾದ ವ್ಯವಸ್ಥೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಆಕೆ ಓದಿಗೆ ಯಾವುದೇ ತೊಂದರೆ ಬಾರದ ಹಾಗೇ ನೋಡಿಕೊಳ್ಳುತ್ತೇವೆ.
•ತಿಪ್ಪಣ್ಣ, ಪೀರಮ್ಮ ಹೊಸಕೇರಾ, ಪಾಲಕರು
ನನ್ನ ಓದಿಗೆ ತಾಯಿ ತಂದೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ನನ್ನ ತಾಯಿ ಹೆಜ್ಜೆ ಹೆಜ್ಜೆಗೂ ನನ್ನನ್ನು ಕೈ ಹಿಡಿದು ನಡೆಸುತ್ತಿದ್ದಾರೆ. ತಾಯಿ ತಂದೆ ಪ್ರೀತಿಯೇ ನನಗೆ ಪ್ರೇರಣೆ. ಅವರ ಆಸಕ್ತಿ ಬಯಕೆ ಈಡೇರಿಸಬೇಕಿದೆ. ನನಗೆ ಕಣ್ಣೀಲ್ಲ ಎಂದು ಕೈಕಟ್ಟಿ ಕುಳಿತರೆ ಆಗದು. ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯವಿದೆ. ನಾವು ಮನಸ್ಸು ಮಾಡಬೇಕಷ್ಟೆ.
•ವೈಶಾಲಿ, ಅಂಧ ವಿದ್ಯಾರ್ಥಿನಿ
ಮಲ್ಲಿಕಾರ್ಜುನ ಮುದ್ನೂರ