ರೈತರಲ್ಲಿ ಮಂದಹಾಸ ಮೂಡಿಸಿದ ವರುಣ
ಬತ್ತಿ ಹೋಗಿದ್ದ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹಮೂರ್ನಾಲ್ಕು ದಿನಗಳಿಂದ ಸುರಿದ ಮಳೆ ಭೂಮಿ ತಂಪು
Team Udayavani, Sep 30, 2019, 6:57 PM IST
ಹಿರಿಯೂರು: ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ತೇವಾಂಶಗೊಂಡಿದ್ದು, ರೈತನ ಮೊಗದಲ್ಲಿ ಸಂತಸದ ಕಳೆ ಮೂಡಿದೆ. ಹಿಂಗಾರು ಬಿತ್ತನೆಗೆ ಅಣಿಯಾಗುತ್ತಿದ್ದಾನೆ. ಹಿರಿಯೂರು ನಗರ ಸೇರಿದಂತೆ ಹೊಸಹಳ್ಳಿ, ಮಾವಿನ ಮಡು, ಗೌಡನಹಳ್ಳಿ, ಮಾಳಗೊಂಡನಹಳ್ಳಿ, ಪಿಲಾಲಿ, ಉಡುವಳ್ಳಿ, ಮೇಟಿ ಕುರ್ಕೆ, ಕೂಡ್ಲಹಳ್ಳಿ, ಕಸುವನಹಳ್ಳಿ ಕೆರೆಗಳು ಮಳೆಯಿಂದ ವಿವಿಧ ಕೆರೆ ಕಟ್ಟೆಗಳಲ್ಲಿ ನೀರು ತುಂಬಿಕೊಂಡಿವೆ. ಮಳೆ ಕೊರತೆ ಅನುಭವಿಸಿದ್ದ ರೈತರಲ್ಲಿ ಮಂದಹಾಸದ ನಗೆ ಬೀರಿದೆ.
ಸತತವಾಗಿ ಮೂರು ದಿನಗಳಿಂದ ಸಂಜೆ ಮತ್ತು ರಾತ್ರಿ ಮಳೆಯಾಗುತ್ತಿದೆ. ಮದ್ದರಹಳ್ಳದಲ್ಲಿ 10-15 ಅಡಿ ಎತ್ತರದಷ್ಟು ನೀರು ಹರಿದು ಹೋಗುತ್ತಿದೆ. ಕತ್ತೆ ಹೊಳೆ ತುಂಬಿ ಉಡುವಳ್ಳಿ ಕೆರೆಗೆ ನೀರು ಹರಿದು ಬರುತ್ತಿದೆ. ಮೇಟಿ ಕುರ್ಕೆ, ಕೂಡ್ಲಹಳ್ಳಿ, ಕಸುವನಹಳ್ಳಿ ಕೆರೆಗಳು ನೀರು ತುಂಬಿ ಕೊಂಡಿವೆ. ಬಹುತೇಕ ತಾಲೂಕಿನ ಹಳ್ಳ-ಕೊಳ್ಳ, ಕೆರೆಗಳಲ್ಲಿ ಮಳೆಯಿಂದ
ನೀರು ತುಂಬಿ ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ 6 ತಿಂಗಳಿಂದ ಬಿಸಿಲಿನ ತಾಪಕ್ಕೆ ಅಂತರ್ಜಲ ಕುಸಿದು ನೀರು ಬತ್ತಿ ಹೋಗಿದ್ದು, ಇದೀಗ ಸಾರ್ವಜನಿಕರ ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿ
ಕೊಂಡು ಜನರಿಗೆ ನೆಮ್ಮದಿ ತಂದಿದೆ.
ತಾಲೂಕಿನಲ್ಲಿ ಶನಿವಾರ ರಾತ್ರಿ ಹಿರಿಯೂರಿನಲ್ಲಿ 39.2 ಮಿ.ಮೀ,
ಬಬ್ಬೂರು 52.6 ಮಿ.ಮೀ, ಇಕ್ಕನೂರು 18.8 ಮಿ.ಮೀ, ಈಶ್ವರಗೆರೆ 27 ಮಿ.ಮೀ ಮಳೆ ಸುರಿದಿದೆ.