ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ
Team Udayavani, Dec 8, 2019, 11:27 AM IST
ಬೇಲಿಮಲ್ಲೂರು ಜಿಪಂ ವ್ಯಾಪ್ತಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ12.29 ಕೋಟಿ ಅನುದಾನ ಬಿಡುಗಡೆ
ಹೊನ್ನಾಳಿ: ಬೇಲಿಮಲ್ಲೂರು ಜಿಪಂ ವ್ಯಾಪ್ತಿಯ ಬೇಲಿಮಲ್ಲೂರು, ಕೋಟೆಮಲ್ಲೂರು, ಅರಕೆರೆ, ಹಿರೇಗೋಣಿಗೆರೆ, ನರಸಗೊಂಡಹಳ್ಳಿ, ಮಾಸಡಿ, ಹೊಸಗೊಲ್ಲರಹಳ್ಳಿ, ಹೊಸದೇವರ ಹೊನ್ನಾಳಿ, ಹಳೆ ದೇವರ ಹೊನ್ನಾಳಿ ಮತ್ತು ಯಕ್ಕನಹಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಡಾಂಬರೀಕರಣ, ಚರಂಡಿ ಕಾಮಗಾರಿಗಳ ಉದ್ಘಾಟನೆ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆಗೆ ಒಟ್ಟು 12.29 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೇಲಿಮಲ್ಲೂರು ಜಿಪಂ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಶನಿವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೋಟೆಮಲ್ಲೂರು ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಹೊಳೆ ಮೆಟ್ಟಿಲು ಮತ್ತು ರಸ್ತೆ ಡಾಂಬರೀಕರಣ ನಿರ್ಮಾಣಕ್ಕೆ 1.65 ಕೋಟಿ ರೂ., ಬೇಲಿಮಲ್ಲೂರು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 8.5 ಲಕ್ಷ ರೂ. ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಹಿರೇಗೋಣಿಗೆರೆ ಗ್ರಾಮದಲ್ಲಿ ಸಿಸಿ ರಸ್ತೆ, ಚರಡಿ ಕಾಮಗಾರಿಗೆ 94 ಲಕ್ಷ ರೂ., ಕೋಣನತಲೆ ಗ್ರಾಮದಲ್ಲಿ ಈಗಾಗಲೇ ಉದ್ಘಾಟನೆಗೊಂಡಿರುವ ಸಿಸಿ ರಸ್ತೆ ಹಾಗೂ ಶಂಕುಸ್ಥಾಪನೆಗಾಗಿ 1.18 ಕೋಟಿ ರೂ. ಅನುದಾನ ಮಂಜೂರು ಮಾಡಿಸಲಾಗಿದೆ. ಹರಗನಹಳ್ಳಿ, ಅರಕೆರೆ, ನರಸಗೊಂಡನಹಳ್ಳಿ, ಮಾಸಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಭರದಿಂದ ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ಒಟ್ಟು 12.29 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಬೆನಕನಹಳ್ಳಿ ಗ್ರಾಪಂ ಸದಸ್ಯ ಮಹೇಂದ್ರಗೌಡ, ಗ್ರಾಮದ ಮುಖಂಡ ಅರಕೆರೆ ನಾಗರಾಜ್ ಇದ್ದರು.