ಶೌಚಾಲಯ ಕಾಮಗಾರಿ ಮುಗಿಸಿ
ಗುರಿ ತಲುಪದಿದ್ದರೆ ಶಿಸ್ತು ಕ್ರಮ•ನಿವೇಶನ ರಹಿತರ ಪಟ್ಟಿ ಮಾಡಿ
Team Udayavani, Jul 8, 2019, 3:10 PM IST
ಹೊನ್ನಾಳಿ: ತಾಪಂ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಎಲ್.ಭೀಮಾನಾಯ್ಕ ಮಾತನಾಡಿದರು.
ಹೊನ್ನಾಳಿ: ತಮಗೆ ನೀಡಿರುವ ಗುರಿ ಪ್ರಕಾರ ಈ ತಿಂಗಳ ಅಂತ್ಯದೊಳಗೆ ಅವಳಿ ತಾಲೂಕಿನಲ್ಲಿ ಶೌಚಾಲಯಗಳನ್ನು ನಿರ್ಮಾಣ ಕಾಮಗಾರಿ ಮುಗಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿ.ಪಂ ಉಪಕಾಯದರ್ಶಿ ಎಲ್.ಭೀಮಾನಾಯ್ಕ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.
ತಾಪಂನ ಸಾಮರ್ಥ್ಯಸೌಧದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅವಳಿ ತಾಲೂಕಿನಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಬಾಕಿ ಇರುವ ಶೌಚಾಲಯ ನಿರ್ಮಾಣಕ್ಕೆ ತಕ್ಷಣ ಕ್ರಿಯಾಯೋಜನೆ ತಯಾರಿಸಿ ಜಿಪಂಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.
ನಿವೇಶನ ರಹಿತರಿಗೆ ಸೂರು ನೀಡಬೇಕೆಂಬುದು ಸರ್ಕಾರದ ನಿರ್ಧಾರ ವಾಗಿರುವುದರಿಂದ ಅವಳಿ ತಾಲೂಕಿನಲ್ಲಿ ಎಲ್ಲೆಲ್ಲಿ ನಿವೇಶನ ರಹಿತರು ಇರುತ್ತಾರೋ ಅಂತಹ ಅರ್ಹ ಫಲಾನುಭವಿಗಳ ಪಟ್ಟಿ ಮಾಡಿ ಅಂತಹವರಿಗೆ ನಿವೇಶನ ನೀಡಲು ಜಮೀನನ್ನು ಕಾಯ್ದಿರಿಸಬೇಕು ಎಂದು ತಿಳಿಸಿದರು.
ನರೇಗ ಯೋಜನೆಡಿಯಲ್ಲಿ ಕೂಲಿ ಆಧಾರಿತ, ಚೆಕ್ ಡ್ಯಾಂ ನಿರ್ಮಾಣ, ಸಸಿ ನೆಡುವ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ಕಾಮಗಾರಿಗಳನ್ನು ಈ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಪಿಡಿಒಗಳಿಗೆ ತಾಕಿತು ಮಾಡಿದ ಅವರು, ಎಲ್ಲಿಯೂ ಕಳಪೆ ಕಾಮಗಾರಿಗೆ ಆಸ್ಪದ ನೀಡಬಾರದು ಎಂದರು.
ಗ್ರಾಪಂಗೆ ಆದಾಯ ಬರುವ ಕಂದಾಯಗಳನ್ನು ಇದರ ಜತೆ ಜತೆಯಲ್ಲಿಯೇ ವಸೂಲಿ ಮಾಡುವ ಕಾರ್ಯವನ್ನು ಕೂಡ ಮಾಡಬೇಕು ಎಂದ ಅವರು, ಗ್ರಾಪಂಗೆ ಆದಾಯ ಕೂಡ ಅಷ್ಟೇ ಮುಖ್ಯ ಎಂದರು.
ಜನ ಸಾಮಾನ್ಯರಿಗೆ ಸೇವೆ ನೀಡಲಿಕ್ಕೆ ಎಲ್ಲ ಗ್ರಾಪಂನಲ್ಲಿ ಸೇವಾ ಕೇಂದ್ರ ತೆರೆದಿರುವುದು. ಸಾರ್ವಜನಿಕರು ಸರ್ಕಾರದ ಯಾವ ಸೇವೆಯನ್ನು ಕೇಳುತ್ತಾರೋ ಅಂತಹ ಸೇವೆಗಳನ್ನು ನೀಡಬೇಕಾದದ್ದು ನಮ್ಮ ಕರ್ತವ್ಯ. ಆದ್ದರಿಂದ ಸರ್ಕಾರ ನಿಗದಿಪಡಿಸಿರುವ 106 ಸೇವೆಗಳನ್ನು ಒದಗಿಸಬೇಕು ಎಂದರು.
ಇಲಾಖೆ ನೀಡಿರುವ ಶೌಚಾಲಯ ನಿರ್ಮಾಣದ ಗುರಿ ಮುಟ್ಟದ ಪಿಡಿಒಗಳನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡರು. ಜಿಪಂ ಯೋಜನಾಧಿಕಾರಿ ಲೋಕೇಶ್, ಸಹಾಯಕ ಯೋಜನಾಧಿಕಾರಿ ಶಶಿಧರ್, ತಾಪಂ ಇಒ ರಾಘವೇಂದ್ರ, ಪ್ರಭಾರಿ ಲೆಕ್ಕಾಧಿಕಾರಿ ಜಗನ್ನಾಥರಾವ್ ಇತರರು ಇದ್ದರು.