ಜುಲೈ ಮುಗೀತಾ ಬಂದ್ರೂ ಕೆರೆಗಳು ಖಾಲಿ!
ಹೊನ್ನಾಳಿ ತಾಲೂಕಿನ 122 ಕೆರೆಗಳಲ್ಲಿ ಒಂದೂ ತುಂಬಿಲ್ಲ•ಪಾತಾಳ ಕಂಡ ಅಂತರ್ಜಲ ಮಟ್ಟ
Team Udayavani, Jul 22, 2019, 10:05 AM IST
ಹೊನ್ನಾಳಿ: ತಾಲೂಕಿನ ಬತ್ತಿರುವ ಕೆರೆ
ಹೊನ್ನಾಳಿ: ತಾಲೂಕಿನಲ್ಲಿ ಇದುವರೆಗೂ ಉತ್ತಮ ಮಳೆಯಾಗದ ಕಾರಣ ಯಾವುದೇ ಕೆರೆಗಳು ತುಂಬಿಕೊಂಡಿಲ್ಲ. ಬರಿದಾದ ಕೆರೆಗಳು ಇನ್ನೂ ಬೇಸಿಗೆ ಕಾಲದ ಭಾವನೆ ಮೂಡಿಸುತ್ತವೆ.
ಮುಂಗಾರು ಜೂನ್ ತಿಂಗಳಿನಿಂದ ಆರಂಭವಾಗಿದ್ದರೂ ಉತ್ತಮ ಮಳೆಯಾಗದೆ ಇರುವ ಪ್ರಯುಕ್ತ ಜುಲೈ ತಿಂಗಳು ಮುಗಿಯುತ್ತ ಬಂದರೂ ಯಾವುದೇ ಕೆರೆಗೆ ನೀರು ಹರಿದು ಬಂದಿಲ್ಲ.
ಇನ್ನೂ ಆಗಸ್ಟ್ ಮತ್ತು ಸೆಪ್ಟಂಬರ್ ಎರಡು ತಿಂಗಳು ಮಾತ್ರ ಮಳೆಗಾಲವಿದ್ದು, ಈ ಎರಡು ತಿಂಗಳಲ್ಲಿ ಉತ್ತಮ ಮಳೆಯಾಗಿ ಕೆರೆಗಳು ತುಂಬುತ್ತವೆ ಎನ್ನುವ ಭರವಸೆ ರೈತರಿಗೆ ಇಲ್ಲದಾಗಿದೆ.
ತಾಲೂಕಿನಲ್ಲಿ ಒಟ್ಟು 122 ಕೆರೆಗಳು ಇದ್ದು, ಪೂರ್ವ ದಿಕ್ಕಿನಲ್ಲಿರುವ ಕೆಲವು ಕೆರೆಗಳು ಭದ್ರಾ ನಾಲೆಯ ಸಹಾಯದಿಂದ ವರ್ಷದುದ್ದಕ್ಕೂ ತುಂಬಿಕೊಂಡಿದ್ದರೆ, ಪಶ್ಚಿಮ ದಿಕ್ಕಿನ ಕೆರೆಗಳು ಮಳೆಗಾಲದಲ್ಲಿ ತುಂಬಿ ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.
ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕೂಡ ಕುಸಿದಿದ್ದು, 300 ಅಡಿಗಿಂತ ಹೆಚ್ಚು ಕೊರೆಯಿಸಿದರೂ ನೀರು ಹತ್ತುತ್ತಿಲ್ಲ.
ಸೌಳಂಗ ಕೆರೆ, ಕತ್ತಿಗೆ ಹೊಸಕೆರೆ, ಕೂಲಂಬಿ ಕೆರೆ, ಹಿರೇಮಠ ಕೆರೆ, ಮಾದನಬಾವಿ ಕೆರೆ, ಮಾಸಡಿ ಕೆರೆ, ಚೀಲೂರುಕೆರೆ, ಅರಕೆರೆ ಕೆರೆ, ಚಟ್ನಹಳ್ಳಿ, ಸೋಗಿಲು ಕೆರೆ, ಸೌಳಂಗ ಚಿಕ್ಕಕೆರೆ ತಾಲೂಕಿನ ಪ್ರಮುಖ ಕೆರೆಗಳು. ಅದರಲ್ಲಿ ಸೌಳಂಗಕೆರೆ, ಕುಂದೂರು-ಕೂಲಂಬಿ, ಕತ್ತಿಗೆ ಕೆರೆ ಸೇರಿದಂತೆ ಬೆರಳೆಕೆಯಷ್ಟು ಕೆರೆಗಳಿಗೆ ನಾಲೆ ನೀರು ಗದ್ದೆಗಳಲ್ಲಿ ತುಂಬಿ ಹರಿದು ಬರುತ್ತದೆ. ಹೀಗಾಗಿ ಈ ಕೆರೆಗಳು 12 ತಿಂಗಳೂ ತುಂಬಿಕೊಂಡಿರುತ್ತವೆ. ಆದರೆ ಈ ವರ್ಷ ಎಲ್ಲಾ ಕೆರೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ.
ತಾಲೂಕಿನಲ್ಲಿ ಜಲ ಸಂಪನ್ಮೂಲ ಸಾಕಷ್ಟಿದ್ದರೂ ಅದರ ಸದ್ಬಳಕೆಗೆ ಆಡಳಿತ ವಿಫಲವಾಗಿದೆ ಎನ್ನುವುದು ಜನರ ಅಸಮಾಧಾನ. ತಾಲೂಕು ಕೇಂದ್ರ ಮತ್ತು ತಾಲೂಕಿನ ಅನೇಕ ಗ್ರಾಮಗಳ ಸಮೀಪ ತುಂಗಭದ್ರಾ ನದಿ ಹರಿಯುತ್ತಿದ್ದು ನದಿಯಿಂದ ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ತುಂಬಿಸುವ ಯೋಜನೆ ಕಾರ್ಯಗತವಾಗಿಲ್ಲ.
ಕೆರೆಗಳಲ್ಲಿ ಹೂಳು ತುಂಬಿರುವುದೂ ಕೆರೆಗಳಲ್ಲಿ ಕಡಿಮೆ ನೀರು ಸಂಗ್ರಹವಾಗಲು ಮುಖ್ಯ ಕಾರಣ. ಇದರಿಂದ ವರ್ಷಪೂರ್ತಿ ಜನರಿಗೆ ನೀರು ಸಿಗದೇ ಕೆರೆಗಳು ಬೇಗನೇ ಬತ್ತುತ್ತಿವೆ. ಇದರಿಂದ ತಾಲೂಕಿನ ತರಗನಹಳ್ಳಿ, ಮಾಸಡಿ, ಅರಕೆರೆ, ಹನುಮನಹಳ್ಳಿ ಗ್ರಾಮಗಳಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಕಂಡು ಬರುತ್ತದೆ.
ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ಗ್ರಾಮಗಳಾದ ಮರಿಗೊಂಡನಹಳ್ಳಿ, ಚೀಲೂರು, ಹರಳಹಳ್ಳಿ, ದಿಡಗೂರು, ಸಾಸ್ವೆಹಳ್ಳಿ, ಉಜ್ಜಿನಿಪುರ, ಹೊನ್ನಾಳಿ, ಬಳ್ಳೇಶ್ವರ, ಬೇಲಿಮಲ್ಲೂರು, ಕೋಟೆಮಲ್ಲೂರು ಗ್ರಾಮಗಳ ಜನರು ನದಿ ನೀರನ್ನು ಬಳಸುತ್ತಿದ್ದಾರೆ. ಆದ್ದರಿಂದ ಇಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿಲ್ಲ.