ಮದ್ಯ-ಧೂಮಪಾನದಿಂದ ದೂರವಿರಿ
2035ರ ವೇಳೆಗೆ ದೇಶದಲ್ಲಿ 92 ಮಿಲಿಯನ್ ಜನರಿಗೆ ಮಧುಮೇಹ: ಜಾಲಿ
Team Udayavani, Jun 16, 2019, 3:04 PM IST
ಹೊಸಪೇಟೆ: ನಗರದಲ್ಲಿ ನಡೆದ ಹೃದಯ ರೋಗ ತಪಾಸಣಾ ಶಿಬಿರದಲ್ಲಿ ರೋಟರಿ ಅಧ್ಯಕ್ಷ ಡಾ.ಪಿ.ವಾಸುದೇವ ರೆಡ್ಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಹೊಸಪೇಟೆ: ಆಧುನಿಕ ಜೀವನ ಶೈಲಿಯ ಪರಿಣಾಮದಿಂದ ಸಂಪ್ರದಾಯಿಕ ಆಹಾರ ಪದ್ಧತಿಯಿಂದ ವಿಮುಖವಾದ ಹಲವು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕೆಎಲ್ಇಎಸ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ವಿ.ಜಾಲಿ ಕಳವಳ ವ್ಯಕ್ತಪಡಿಸಿದರು.
ನಗರದ ರೋಟರಿ ಕ್ಲಬ್ನಲ್ಲಿ ಶನಿವಾರ ಕೆಎಲ್ಇ ಸಂಸ್ಥೆ ಹಾಗೂ ರೋಟರಿ ಕ್ಲಬ್ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, 2035ರ ವೇಳೆಗೆ ದೇಶದಲ್ಲಿ 92 ಮಿಲಿಯನ್ ಜನರು ಮಧುಮೇಹ ರೋಗದಿಂದ ಬಳಲುವಂತಾಗುತ್ತದೆ ಎಂದು ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್)ವರದಿಯಲ್ಲಿ ತಿಳಿಸಿದೆ ಎಂದ ಅವರು, 25 ವರ್ಷ ವಯೋಮಿತಿ ಪ್ರತಿಯೊಬ್ಬರು ಕಾಲ, ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡುವುದು ಸೂಕ್ತ ಎಂದು ಸಲಹೆ ನೀಡಿದರು.
ವೈದ್ಯರಾದ ಡಾ.ಎಸ್.ರಿಚರ್ಡ್ಸ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಧೂಮಪಾನ, ಮದ್ಯಪಾನ, ಅನುವಂಶಿಕತೆಯಿಂದ ಹೃದಯ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ, ಮಧುಮೇಹ ಹಾಗೂ ಸಕ್ಕರೆ ಕಾಯಿಲೆ ಹೃದಯಕ್ಕೆ ತೊಂದರೆ ಮಾಡುತ್ತವೆ. ಸದೃಢ ಹೃದಯ ಹೊಂದಬೇಕಾದರೆ ಪ್ರತಿದಿನ ವ್ಯಾಯಾಮ ಮಾಡಬೇಕು. ಧ್ಯಾನ ಹಾಗೂ ವಾಕಿಂಗ್ ಮಾಡುವುದು. ಈ ಎಲ್ಲ ಚಟುವಟಿಕೆಗಳು ಮನುಷ್ಯನಲ್ಲಿನ ಸಮಸ್ಯೆ ತಡೆಯುತ್ತವೆ ಎಂದು ಹೇಳಿದರು.
ಚಿಪ್ಸ್ಗಳಲ್ಲಿ ಹೆಚ್ಚಿನ ಉಪ್ಪುನ್ನು ಬಳಕೆ ಮಾಡಲಾಗುತ್ತದೆ. ಇದು ಅತ್ಯಂತ ಅಪಾಯಕಾರಿ. ಇದು ಹೃದಯ ರೋಗ ಬರುವಂತೆ ಮಾಡುತ್ತದೆ. ಈಗ ಹುಟ್ಟಿದ ಮಕ್ಕಳಲ್ಲೂ ಸಹ ಹೃದಯ ಸಮಸ್ಯೆ ಕಾಣುತ್ತಿದ್ದೇವೆ. ಇದೊಂದು ಆತಂಕಕಾರಿ ಸಂಗತಿ. ಶಿಬಿರಕ್ಕೆ ಮೂರು ವರ್ಷದ ಒಳಗಿನ ಮಕ್ಕಳು ಬರುತ್ತಿದ್ದಾರೆ. ಅಂಕಿ ಸಂಖ್ಯೆಗಳ ಪ್ರಕಾರ 1000 ಮಕ್ಕಳ ಪೈಕಿ 10 ಮಕ್ಕಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಬರುತ್ತಿವೆ. ಪಾಲಕರಲ್ಲಿ ಅಪೌಷ್ಟಿಕತೆಯಿಂದ, ರಕ್ತ ಸಂಬಂಧಿತ, ಮಗು ಒಂಬತ್ತು ತಿಂಗಳು ಮುಂಚಿತವಾಗಿಯೇ ಹುಟ್ಟುವುದು ಎಂದು ತಿಳಿಸಿದರು.
ಶಿಬಿರದಲ್ಲಿ 200ಕ್ಕೂ ಹೆಚ್ಚು ತಪಾಸಣೆ ಒಳಗಾದರು. 19 ಜನರಿಗೆ ಹಾಗೂ 4 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗಾಗಿ ಸೂಚಿಸಲಾಯಿತು. ಏಳು ಜನರ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿತ್ತು. ವೈದ್ಯರಾದ ಮಧುಸೂದನ್, ಎಂ.ವಿ.ಜಾಲಿ, ನಿಶಿತ್ ಉಡುಪಿ, ಪ್ರಸಾದ, ರೋಟರಿ ಕ್ಲಬ್ನ ಅಧ್ಯಕ್ಷ ಡಾ.ಪಿ.ವಾಸುದೇವ ರೆಡ್ಡಿ, ಕಾರ್ಯದರ್ಶಿ ಕೆ.ಎಸ್.ಕೃಷ್ಣಮೂರ್ತಿ, ಶಿಬಿರದ ಅಧ್ಯಕ್ಷ ಕೆ.ದೀಪಕ ಕುಮಾರ, ಈಶ್ವರ ಇನ್ನಿತರರಿದ್ದರು.