ಆರ್ಥಿಕ ಹೊರೆ ತಪ್ಪಿಸಲು ಜಿಎಸ್ಟಿ ಕಡಿತಕ್ಕೆ ಕ್ರಮ
•ಸಂಸದ ವೈ. ದೇವಂದ್ರಪ್ಪ ಭರವಸೆ • ಮಹಾ ಅಧಿವೇಶನ-ವಿಜಯನಗರ ವೈಭವಕ್ಕೆ ಚಾಲನೆ
Team Udayavani, Jul 14, 2019, 2:59 PM IST
ಹೊಸಪೇಟೆ: ದಿ ನಾರ್ಥ್ ಕರ್ನಾಟಕ ಟೆಂಟ್ ಮತ್ತು ಡೆಕೋರೇಟರ್ ವೆಲ್ಫೇರ್ ಅಸೋಸಿಯೇಷನ್ 16ನೇ ಮಹಾ ಅಧಿವೇಶನ-ವಿಜಯನಗರ ವೈಭವಕ್ಕೆ ಸಂಸದ ವೈ. ದೇವೇಂದ್ರಪ್ಪ ಚಾಲನೆ ನೀಡಿದರು.
ಹೊಸಪೇಟೆ: ಟೆಂಟ್ ಮತ್ತು ಡೆಕೋರೇಟರ್ಗೆ ಆರ್ಥಿಕ ಹೊರೆ ತಪ್ಪಿಸಲು ಜಿಎಸ್ಟಿಯಲ್ಲಿ ಶೇಕಡವಾರು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ವೈ. ದೇವೇಂದ್ರಪ್ಪ ಭರವಸೆ ನೀಡಿದರು.
ನಗರದ ನಾಗಪ್ಪ ಕಟ್ಟೆ ಬಳಿ ಶನಿವಾರದಿಂದ ಎರಡು ದಿನ ಕಾಲ ನಡೆಯುವ ದಿ ನಾರ್ಥ್ ಕರ್ನಾಟಕ ಟೆಂಟ್ ಮತ್ತು ಡೆಕೋರೇಟರ್ ವೆಲ್ಫೇರ್ ಅಸೋಸಿಯೇಶನ್ 16ನೇ ಮಹಾ ಅಧಿವೇಶನ-ವಿಜಯನಗರ ವೈಭವಕ್ಕೆ ಚಾಲನೆ ನೀಡಿ ಮಾತನಾಡಿದರು.
ಡೆಕೋರೇಟರ್ ಅವರಿಗೆ ಜೆಎಸ್ಟಿಯಿಂದ ತೊಂದರೆ ಆಗುತ್ತಿದ್ದು, ಶೇಕಡವಾರು ಪ್ರಮಾಣದಲ್ಲಿ ಕಡಿಮೆ ಮಾಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಜೆಎಸ್ಟಿಯಲ್ಲಿನ ಗೊಂದಲ ನಿವಾರಣೆಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರೊಂದಿಗೆ ಚರ್ಚಿಸಲಾಗುವುದು. ಸ್ವತಃ ಡೆಕೋರೇಟರ್ ನಿಯೋಗವವನ್ನು ಹಣಕಾಸು ಸಚಿವರನ್ನು ಭೇಟಿ ಮಾಡಿಸಿ. ಜೆಎಸ್ಟಿ ಕುರಿತು ಚರ್ಚಿಸಲಾಗುವುದು. ಇದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ವೃತ್ತಿಗಳಲ್ಲಿ ಯಾವುದೇ ಮೇಲು, ಕೀಳು ಇಲ್ಲ. ಎಲ್ಲ ವೃತ್ತಿಗಳು ಒಂದೇ. ಚಮ್ಮಾರ, ಕಮ್ಮಾರ, ಅಕ್ಕಸಾಲಿಗ, ಮಡಿವಾಳ ಇತರರಿಂದ ಸಮಾಜ ಮುಂದುವರಿಯಲು ಸಾಧ್ಯವಿಲ್ಲ. ಶಾಮಿಯಾನ ಇಲ್ಲದೇ ಕಾರ್ಯಕ್ರಮ ಪೂರ್ಣಗೊಳ್ಳುವುದಿಲ್ಲ. ಅವರ ಕಾರ್ಯ ಶಾಘ್ಲನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್ಫೇರ್ ಆರ್ಗನೈಜೇಶನ್ ಪ್ರಧಾನ ಕಾರ್ಯದರ್ಶಿ ಕರ್ತಾರಸಿಂಗ್ ಕೋಚಾರ್ ಮಾತನಾಡಿ, ಶಾಮಿಯಾನಗಳಿಗೆ ಶೇ. 18ರಷ್ಟು ಜೆಎಸ್ಟಿ ಹಾಕಲಾಗುತ್ತಿದೆ. ಇದು ಅವರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಮುಂಚೆ ಕಾಂಗ್ರೆಸ್ ಸರಕಾರವಿದ್ದಾಗ ಶೇ. 6ರಷ್ಟು ಮಾತ್ರ ತೆರಿಗೆಯನ್ನು ಹಾಕಲಾಗುತಿತ್ತು ಎಂದು ಹೇಳಿದರು.
ಶಾಮಿಯಾನ ವ್ಯಾಪ್ತಿಯಲ್ಲಿ 10 ಲಕ್ಷ ಮಾಲಿಕರು ಬರುತ್ತಾರೆ. ಅವರಿಗೆ ಜೆಎಸ್ಟಿಯಿಂದ ತೊಂದರೆ ಆಗುತ್ತಿದೆ. ಈ ಮುಂಚೆ ದೇಶದ 25 ಸಾವಿರ ಹಳ್ಳಿಗಳು ತೆರಿಗೆಯಿಂದ ಹೊರಗಡೆ ಇದ್ದವು. ಈಗ ಅವುಗಳನ್ನು ಸಹ ಜೆಎಸ್ಟಿ ವ್ಯಾಪ್ತಿಗೆ ತರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್ಫೇರ್ ಆರ್ಗನೈಜೇಶನ್ ಅಧ್ಯಕ್ಷ ಜಿ. ಪೂರ್ಣಚಂದ್ರರಾವ್ ಮಾತನಾಡಿ, ಮೂರು ತಿಂಗಳ ನಂತರ ಶಾಮಿಯಾನ ಮಾಲಿಕರಿಗೆ ಗ್ರಾಹಕರಿಂದ ಹಣ ಬರುತ್ತದೆ. ಆದರೆ, ಗ್ರಾಹಕರಿಂದ ಹಣ ಬರುವ ಮುಂಚೆ ಜೆಎಸ್ಟಿಯನ್ನು ಭರಿಸಬೇಕು. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಈಗ ಜೆಎಸ್ಟಿಯನ್ನು ಪರಿಷ್ಕರಿಸಲಾಗಿದ್ದು, 50 ಲಕ್ಷ ರೂ. ವ್ಯವಹರಿಸುವ ಶಾಮಿಯಾನ ಮಾಲಿಕರಿಗೆ ಶೇ. 6 ಜೆಎಸ್ಟಿಯನ್ನು ಹಾಕಲಾಗಿದೆ. ಇನ್ನು 50 ಲಕ್ಷದಿಂದ ಮೇಲ್ಪಟ್ಟ ವ್ಯವಹಾರಗಳಿಗೆ ಶೇ.18 ರಷ್ಟು ಜೆಎಸ್ಟಿ ಪಾವತಿಸಬೇಕಾಗುತ್ತದೆ. ಹಾಗಾಗಿ ಜೆಎಸ್ಟಿ ಪ್ರಮಾಣವನ್ನು ಮತ್ತಷ್ಟು ತಗ್ಗಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ವಡಕರಾಯ ದೇವಸ್ಥಾನದಿಂದ ಕಾರ್ಯಕ್ರದವರಗೆ ಮೆರವಣಿಗೆಯನ್ನು ಮಾಡಲಾಯಿತು. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಡಾ.ಸಂಗನಬಸವ ಸ್ವಾಮೀಜಿ, ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಚಾರ್ಯ ಸ್ವಾಮೀಜಿ, ಮುಸ್ಲಿಂ ಧರ್ಮದ ಗುರುಗಳಾದ ಖಾಜೀ ಸೈಯದ್ ಮುಸ್ತಾಪ್ ಅಹ್ಮದ್, ಪಾಸ್ಟರ್ ಜೆ.ಪೀಟರ್ ಜೇಮ್ಸ್ ಸಾನ್ನಿಧ್ಯ ವಹಿಸಿದ್ದರು. ಎನ್.ಕೆ.ಟಿ.ಡಿ.ಡಬ್ಲ್ಯೂ.ಎ ಸಂಸ್ಥಾಪಕ ಉಪಾಧ್ಯಕ್ಷ ಮಹಮ್ಮದ್ ಅನೀಫ್ ತಾಜೀಮ್ ತಾರಕ್, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್ಫೇರ್ ಆರ್ಗನೈಜೇಶನ್ ಅಧ್ಯಕ್ಷ ಕೆ.ನರಸಿಂಹಮೂರ್ತಿ ಅಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಸೋಮಶೇಖರ ಇನ್ನಿತರರಿದ್ದರು.