ಆನಂದ ಗೆಲುವಿನ ಓಟಕ್ಕೆ ರಾಮುಲು ಬಂಟನ ಬ್ರೇಕ್!
ಪಟ್ಟು ಬಿಡದ ಕವಿರಾಜ್ತಲೆಕೆಳಗಾದ ಬಿಜೆಪಿ ಲೆಕ್ಕಾಚಾರ ಕಣದಿಂದ ಹಿಂದೆ ಸರಿಸಲು ಮನಸ್ಸು ಮಾಡದ ರಾಮುಲು?
Team Udayavani, Nov 22, 2019, 3:38 PM IST
ಪಿ.ಸತ್ಯನಾರಾಯಣ
ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಕೊನೆಗೂ ಬಂಡಾಯದ ಬಿಸಿ ತಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರ ಮಾತಿಗೂ ಜಗ್ಗದ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ನಾಮಪತ್ರ ಹಿಂಪಡೆಯದೇ ಚುನಾವಣೆ ಕಣದಲ್ಲಿ ಉಳಿದಿದ್ದು ಪಕ್ಷಕ್ಕೆ ಹೊಡೆತ ನೀಡಿದ್ದಾರೆ.
ಬಿಜೆಪಿ ನಾಯಕರ ಮಾತಿಗೆ ಮಣಿದು ಕೊನೆಗಳಿಯಲ್ಲಿ ನಾಮಪತ್ರ ಹಿಂಪಡೆಯಬಹುದು ಎಂಬ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ. ಸಿಎಂ ಯಡಿಯೂರಪ್ಪ ಸೇರಿ ಇಡೀ ಮಂತ್ರಿ ಮಂಡಲ ಬಂದರೂ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ ಎಂಬ ಮಾತಿಗೆ ಕವಿರಾಜ ಕಟಿಬದ್ಧರಾಗಿ ಕಣದಲ್ಲಿ ಉಳಿದು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇದು ಬಿಜೆಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕವಿ ರಾಜ್, ಚುನಾವಣೆಯಲ್ಲಿ ಸೋತರೆ ರಾಜಕೀಯ ನಿವೃತ್ತಿ ಎಂದು ಘೋಷಿಸಿದ್ದಾರೆ. ಅಲ್ಲದೆ ಒಂದೊಮ್ಮೆ ಕ್ಷೇತ್ರದ ಮತ ದಾ ರರು ನನಗೆ ಆಶೀರ್ವಾದ ಮಾಡಿದ್ದೆ ಆದಲ್ಲಿ ಸ್ಥಗಿತಗೊಂಡ ಸ್ಥಳೀಯ ಸಕ್ಕರೆ ಕಾರ್ಖಾನೆ ಆರಂಭಿಸುವ ಭರವಸೆ ನೀಡುತ್ತ ಪ್ರಚಾರಕ್ಕೆ ಅಣಿಯಾಗಿದ್ದಾರೆ.
ರಾಮುಲು ಸಂಧಾನ ವಿಫಲ: ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕವಿರಾಜ್ ಮನವೊಲಿಸಲು ಪಕ್ಷದ ಹಲವರು ಯತ್ನಿಸಿದ್ದರು. ಆದರೆ ಪ್ರಯೋಜನವಾಗದಿದ್ದಾಗ ಕೊನೆ ಪ್ರಯತ್ನ ಎಂಬಂತೆ ಸಚಿವ ಶ್ರೀರಾಮುಲು ಅವರು ಸಂಧಾನಕ್ಕೆ ಮುಂದಾಗಿದ್ದರು. ಶ್ರೀರಾ ಮುಲು ಹೇಳಿದರೆ ಕವಿ ರಾಜ ಹಿಂದೆ-ಮುಂದೆ ನೋಡದೇ ಕಣದಿಂದ ಹಿಂದೆ ಸರಿ ಯಲಿದ್ದಾರೆ ಎಂದೇ ಭಾವಿಸಲಾಗಿತ್ತು.
ಆದರೆ ರಾಮುಲು ಸಂಧಾನವೂ ವಿಫಲವಾಗಿದ್ದು ಕವಿರಾಜ್ ಬಿಜೆಪಿಯ ಆನಂದ ಸಿಂಗ್ಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ. ಅಲ್ಲದೆ “ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ನೀಡಿದ್ದರೆ ಖಂಡಿತವಾಗಿ ಚುನಾವಣೆ ಕಣದಿಂದ ಹಿಂದೆ ಸರಿಯುತ್ತಿದ್ದೆ’ ಎಂದು ಹೇಳುವ ಮೂಲಕ ಶ್ರೀರಾ ಮುಲು ಮೇಲಿನ ಭಕ್ತಿ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ. ಶ್ರೀರಾಮುಲು ಅವರ ಬಂಟ ಎಂದೇ ಗುರುತಿಸಿಕೊಂಡ ಕವಿರಾಜ್ ಕೊನೆಗೂ ಶ್ರೀರಾಮುಲು ಮಾತಿಗೂ ಮಣಿಯದೆ ಉಪ ಚುನಾವಣೆ ಅಖಾಡದಲ್ಲಿ ಉಳಿದಿರುವುದರ ಹಿಂದೆಯೂ ರಾಜಕೀಯ ಅಡಗಿದೆಯೇ ಎಂಬ ಅನುಮಾನ ಮೂಡಿದೆ.
ಕವಿರಾಜ ಅವರು ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸುವುದು ಶ್ರೀರಾಮುಲು ಅವರಿಗೆ ಸುಲಭದ ಕೆಲಸವಾಗಿತ್ತು. ಆದರೂ ಬಂಡಾಯ ಶಮನಕ್ಕೆ ರಾಮುಲು ಮನಸ್ಸು ಮಾಡಿಲ್ಲವೇ ಅಥವಾ ಇದರ ಹಿಂದೆ ಆನಂದ ಸಿಂಗ್ ಅವರಿಗೆ ಒಳಹೊಡೆತ ನೀಡುವ ಉದ್ದೇಶ ಅಡಗಿದೆಯೇ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಕ್ಷೇತ್ರ ದ ಕಾರ್ಯಕರ್ತರ
ಭಿನ್ನ ಮತ ಶಮನಗೊಳಿಸಿ ಪಕ್ಷದ ಅಭ್ಯರ್ಥಿ ಆನಂದಸಿಂಗ್ ಅವರನ್ನು ಗೆಲ್ಲಿಸುವ ಸೂಚನೆ ಇದ್ದರೂ ಕವಿ ರಾಜ ಮನವೊಲಿಸುವ ವಿಷಯದಲ್ಲಿ ಶ್ರೀರಾಮುಲು ಹಿಂದೆ ಬಿದ್ದಿದ್ದೇಕೆ ಎಂಬ ವಾದ ಶುರುವಾಗಿದೆ.
ಪಕ್ಷ ಸಂಘಟನೆ: 2018ರ ವಿಧಾನಸಭಾ ಚುನಾವಣೆಯಲ್ಲಿ ಆನಂದ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಬಿಜೆಪಿ ಪಾಳಯದಲ್ಲಿ ಸಂಚಲನ ಉಂಟು ಮಾಡಿತ್ತು. ಆಗ ಯಡಿಯೂರಪ್ಪ ಶ್ರೀರಾಮುಲುಗೆ ಪಕ್ಷ ಸಂಘಟನೆ ಹೊಣೆಗಾರಿಕೆ ನೀಡಿದರು. ಸ್ಥಳೀಯ ಮುಖಂಡರಾದ ಕವಿರಾಜ ಅರಸ್, ರಾಣಿ ಸಂಯುಕ್ತ, ಕಿಶೋರ್ ಪತ್ತಿಕೊಂಡ ಸೇರಿದಂತೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಿ ಕಾಂಗ್ರೆಸ್ನಿಂದ ಮಾಜಿ ಶಾಸಕ ಎಚ್.ಆರ್. ಗವಿಯಪ್ಪನವರನ್ನು ಬಿಜೆಪಿಗೆ ಕರೆ ತರುವಲ್ಲಿ ಶ್ರೀರಾಮುಲು ಯಶ್ವಸಿಯಾಗಿ ಚುನಾವಣೆ ಎದುರಿಸಿದರು. ಆನಂದ ಸಿಂಗ್ ವಿರುದ್ಧ ಗವಿಯಪ್ಪ ಅತ್ಯಂತ ಕಡಿಮೆ ಅಂತರದಲ್ಲಿ ಸೋತರು.
ಆದರೆ ಪಕ್ಷ ತೊರೆದು ಕಾಂಗ್ರೆ ಸ್ ನಲ್ಲಿದ್ದ ಆನಂದಸಿಂಗ್ ಅವರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಸಂಕಲ್ಪ ಮಾಡಿದ್ದ ಕೆಲ ಬಿಜೆಪಿ ಮುಖಂಡರು ಹಾಗೂ ಕಾರ್ಯ ಕ ರ್ತರಿಗೆ ಆನಂದಸಿಂಗ್ ಮರಳಿ ಬಿಜೆಪಿಗೆ ಬಂದಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಆನಂದ ಸಿಂಗ್ ಪಕ್ಷ ಸೇರುವ ಮುನ್ನ ಸೋಲಿಸುವ ಲೆಕ್ಕಾಚಾ ರ ದಲ್ಲಿದ್ದ ಮುಖಂಡರು-ಕಾರ್ಯಕರ್ತರಿಗೆ ಇದೀಗ ಪಕ್ಷ ಆನಂದ ಸಿಂಗ್ರನ್ನು ಗೆಲ್ಲಿಸುವ ಹೊಣೆಗಾರಿಕೆ ನೀಡಿದೆ. ಆನಂದ ಸಿಂಗ್ ಮೇಲಿನ ಎಲ್ಲ ವೈಮಸ್ಸು-ಭಿನ್ನ ಮತ ಮರೆತು ಬಿಜೆಪಿ ಮುಖಂಡರು-ಕಾರ್ಯಕರ್ತರು ಅವರನ್ನು ಗೆಲ್ಲಿಸಲು ಮುಂದಾಗುತ್ತಾರಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.