ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ: ಹಾಲಭಾವಿ
Team Udayavani, Sep 30, 2019, 6:02 PM IST
ಹುಣಸಗಿ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಹೇಳಿದರು.
ಸಮೀಪದ ಮಾಳನೂರ ಗ್ರಾಮದಲ್ಲಿ ಗ್ರಾಮ ಘಟಕ ಪದಾಧಿಕಾರಗಳನ್ನು ಆಯ್ಕೆಗೊಳಿಸಿ ಮಾತನಾಡಿದ ಅವರು, ಐದು ವರ್ಷಗಳಿಗೊಮ್ಮೆ ಆರಿಸಿ ಕಳಿಸಿದ ಜನಪ್ರತಿನಿಧಿ ಗಳು ರೈತರ ಸಂಕಷ್ಟಗಳಿಗೆ ಪರಿಹಾರ ಕೇಳಲು ಹೋದರೆ ಸ್ಪಂದನೆ ಸಿಗುತ್ತಿಲ್ಲ. ಯಾಕೆಂದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ ಎಂದರು.
ರೈತರು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದಲ್ಲಿ ಮಾತ್ರ ಬೇಡಿಕೆ ಈಡೇರಲು ಸಾಧ್ಯ. ಇನ್ನು ಎಷ್ಟೋ ಹಳ್ಳಿಗಳ ರೈತರ ಭೂಮಿಗಳು ನೀರಾವರಿಯಿಂದ ವಂಚಿತಗೊಂಡಿವೆ. ಅಂತಹ ರೈತರ ಭೂಮಿಗಳಿಗೆ ನೀರು ಒದಗಿಸಲು ಸರಕಾರ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ರಾಜ್ಯ ವಿಭಾಗೀಯ ಮಹಿಳಾ ಘಟಕದ ಕಾರ್ಯದರ್ಶಿ ಮಹಾದೇವಿ ಬೆವಿನಾಳಮಠ ಮಾತನಾಡಿ, ಏ. 10ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ನಾರಾಯಣಪುರ ಮುಖ್ಯ ಇಂಜಿನಿಯರ್ ಕಚೇರಿ ಎದರು ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಭಾಗವಹಿಸಿ ರೈತ ಶಕ್ತಿ ಎಂತಹದು ಎಂದು ತೋರಿಸೋಣ ಎಂದು ಹೇಳಿದರು.
ರೈತರು ಒಗ್ಗಟ್ಟಾದಲ್ಲಿ ಮಾತ್ರ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯ. ಆದ್ದರಿಂದ ಎಲ್ಲ ರೈತರು ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮೊದಲು ರೈತರು ಜಾಗೃತರಾಗಬೇಕು. ಕೃಷಿ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬೇಕು ಎಂದರು.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ. ಪರಿಹಾರ ನೀಡಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಸರಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ನೆರೆ ಸಂತ್ರಸ್ತರಿಗೆ ಮತ್ತು ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿಸಿ ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರು ಹೋರಾಟ ಮಾಡುವದು ಅನಿವಾರ್ಯತೆ ಇದೆ ಎಂದರು.
ಹಸಿರು ಸೇನೆ ತಾಲೂಕಾಧ್ಯಕ್ಷ ರುದ್ರಣ್ಣ ಮೇಟಿ, ಪ್ರದಾನ ಕಾರ್ಯದರ್ಶಿ ಮುದ್ದಣ್ಣ ಅಮ್ಮಾಪುರ, ಪರಮಣ್ಣಗೌಡ ಶಾಂತಪುರ, ಮಾನಪ್ಪ ಪೂಜಾರಿ, ಗೋವಿಂದ ಪತ್ತಾರ, ತಿಪ್ಪಣ್ಣ ಜಂಪಾ, ತಿಮ್ಮಯ್ಯ ಗುತ್ತೇದಾರ, ದವಲಸಾಬ ಚೌದ್ರಿ, ಬಸನಗೌಡ ಮೇಟಿ ವೀರಪ್ಪ ಪೂಜಾರಿ, ನಿಂಗಣ್ಣ ಗುತ್ತೇದಾರ, ದಂಡಪ್ಪ ಗುಳಬಾಳ, ಮೈಬೂಬ ಇದ್ದರು.