ಗಡ್ಡಿ ಸೇತುವೆ ಶೀಘ್ರ ಪೂರ್ಣ
•ಗ್ರಂಥಾಲಯ ಕಾಮಗಾರಿ, ಕಕ್ಕೇರಾ ಪುರಸಭೆ ಮಳಿಗೆಗಳ ವೀಕ್ಷಣೆ
Team Udayavani, Jul 13, 2019, 11:18 AM IST
ಕಕ್ಕೇರಾ: ಸಮೀಪದ ನೀಲಕಂಠರಾಯನ ಗಡ್ಡಿ ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ವೀಕ್ಷಿಸಿದರು.
ಕಕ್ಕೇರಾ: ಕೃಷ್ಣಾ ನದಿ ತೀರದ ಪ್ರವಾಹ ಆವರಿಸುವ ನೀಲಕಂಠರಾಯನ ಗಡ್ಡಿ ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಪರಿಶೀಲಿಸಿದರು.
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಯಾವುದೇ ಸಂದರ್ಭ ನೀರು ಹರಿಬಿಡಬಹುದು. ಇದ್ದರಿಂದ ಸಂಪರ್ಕ ಕಡಿತಗೊಳ್ಳುವ ಮುಂಚಿತವಾಗಿಯೇ ಪ್ರವಾಹಕೀಡಾಗುವ ನೀಲಕಂಠರಾಯನ ಗಡ್ಡಿ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಇಂಜನಿಯರ್ ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇಲ್ಲಿನ ಜನರಿಗೆ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು. ವಿವಿಧ ಸಮಸ್ಯೆಗಳಿಂದಾಗಿ ಸೇತುವೆ ನಿರ್ಮಾಣದ ಕಾಮಗಾರಿ ವಿಳಂಬವಾಗಿದೆ. ಜು. 20ರ ಒಳಗಾಗಿ ನೀಲಕಂಠರಾಯನ ಗಡ್ಡಿ ಸೇತುವೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದರು. ನಂತರ ಕಕ್ಕೇರಾ ಪಟ್ಟಣದ ಗ್ರಂಥಾಲಯ ಕಾಮಗಾರಿ, ಶೌಚಾಲಯ, ಪುರಸಭೆ ಮಳಿಗೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಸುರೇಶ ಅಂಕಲಗಿ, ಉಪ-ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್, ಕಂದಾಯ ನಿರೀಕ್ಷಕ ವಿಠ್ಠಲ್ ಬಂದಾಳ, ಗ್ರಾಮ ಲೆಕ್ಕಾಧಿಕಾರಿ ಸಂತೋಷರೆಡ್ಡಿ, ಗ್ರಾಮ ಸಹಾಯಕ ಅಲ್ಲಾಭಕ್ಷ ಇದ್ದರು.