ಸಂಚಾರಿ ನಿಯಮ ಉಲ್ಲಂಘಿಸಿದರೆ ಶಾಕ್!
•ದಂಡ ವಸೂಲಿಗೆ ಕಠಿಣ ಕ್ರಮ •ಮನೆಗೆ ಬರುತ್ತೆ ನೋಟಿಸ್•ಸಂಚಾರಿ ಪೊಲೀಸರಿಗೆ ಮೊಬೈಲ್ ವಿತರಣೆ
Team Udayavani, May 27, 2019, 9:48 AM IST
ಕಲಬುರಗಿ: ವಾಹನಗಳ ಫೋಟೋವನ್ನು ಸೆರೆ ಹಿಡಿಯುತ್ತಿರುವ ಪೊಲೀಸ್ ಸಿಬ್ಬಂದಿ.
•ಹಣಮಂತರಾವ ಭೈರಾಮಡಗಿ
ಕಲಬುರಗಿ: ಬೈಕ್ ಸವಾರುದಾರರು ಹಾಗೂ ಇತರ ವಾಹನದಾರರು ಇನ್ನೂ ಸಮಯ ಇರುವಾಗಲೇ ಟ್ರಾಫಿಕ್ ಸಿಗ್ನಲ್ ದಾಟಿದರೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ, ಮೊಬೈಲ್ನಲ್ಲಿ ಮಾತನಾಡುತ್ತಾ ಹೋದರೆ, ತ್ರಿಬಲ್ ರೈಡ್ ಮಾಡಿದರೆ ಯಾವುದೇ ಮುಲಾಜಿಲ್ಲದೇ ಮನೆಗೆ ಬರುತ್ತೇ ನೋಟಿಸ್.
ಇದಕ್ಕೂ ಮುನ್ನ ಸಂಚಾರಿ ನಿಯಮ ಉಲ್ಲಂಘಿಸಿದರೆ ಪೊಲೀಸರೇ ದಂಡ ವಿಧಿಸುತ್ತಿದ್ದರು. ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಪೊಲೀಸರು ಯಾವುದೇ ವಾಹನ ಸವಾರುದಾರರನ್ನು ಹಿಡಿಯುವುದಿಲ್ಲ. ಬದಲಾಗಿ ಫೋಟೋ ಕ್ಲಿಕ್ಕಿಸಿ ಅದನ್ನು ಸಂಚಾರಿ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿಗೆ ರವಾನಿಸುತ್ತಾರೆ. ಮುಂದೆ ವಾಹನದ ವಿಳಾಸ ತೆಗೆದು ನೋಟಿಸ್ ಜಾರಿ ಮಾಡುವ ಹಾಗೂ ದಂಡದ ವಸೂಲಾತಿಗೆ ಕಠಿಣ ಕ್ರಮಕ್ಕೆ ಇಲಾಖೆ ದೃಢ ಹೆಜ್ಜೆ ಇಟ್ಟಿದೆ.
ಹೊಸ ಮಾದರಿ ಮೊಬೈಲ್ನ್ನು ಪೊಲೀಸ್ ಇಲಾಖೆಯು ಸಂಚಾರಿ ಉಪ ಪೊಲೀಸ್ ಆಯುಕ್ತಾಲಯ ಮೂಲಕ ಸಂಚಾರಿ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ. ಈ ಮೂಲಕ ಸಂಚಾರಿ ನಿಯಮಗಳ ದೃಶ್ಯ ಸೆರೆ ಹಿಡಿದು ಅಪ್ಲೋಡ್ ಮಾಡಲಾಗುತ್ತದೆ. ಮುಂದಿನ ಹೆಜ್ಜೆಯಾಗಿ ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರುದಾರರಿಗೆ, ಆಟೋ ಚಾಲಕರು ಜತೆಗೆ ಕಾರು ಸೇರಿದಂತೆ ಇತರ ವಾಹನಗಳ ಮಾಲೀಕರಿಗೂ ನೋಟಿಸ್ ಜಾರಿ ಮಾಡಲಾಗುತ್ತದೆ.
ಸಂಚಾರಿ ಪೊಲೀಸ್ ಸಿಬ್ಬಂದಿಗೆ ಹೊಸ ಮೊಬೈಲ್ ವಿತರಿಸಲಾಗಿದ್ದು, ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಆರಂಭವಾದ ಮೊದಲ ದಿನವೇ ಆರು ವಾಹನ ಸವಾರುದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಸಂಚಾರ ಮತ್ತು ಅಪರಾಧ ವಿಭಾಗ) ವಿರೇಶ ಕರಡಿಗುಡ್ಡ ವಿವರಣೆ ನೀಡಿದ್ದಾರೆ.
100 ಮೊಬೈಲ್: ಸಂಚಾರಿ ನಿಯಮದ ಉಲ್ಲಂಘನೆ ಭಾವಚಿತ್ರ ತೆಗೆಯಲೆಂದು ಇಲಾಖೆ 100 ಸಂಚಾರಿ ನಿಯಮ ಸುಧಾರಿತ ಆ್ಯಪ್ವುಳ್ಳ ಮೊಬೈಲ್ಗಳನ್ನು ವಿತರಿಸಿದೆ. ನಗರದಲ್ಲಿ 50 ಸಂಚಾರಿ ಸಿಬ್ಬಂದಿಗೆ 50 ಮೊಬೈಲ್ಗಳನ್ನು ವಿತರಿಸಲಾಗಿದೆ. ಈ ಮೊಬೈಲ್ಗಳ ಕಾರ್ಯಾಚಾರಣೆಗೆ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಸಿಸಿ ಕ್ಯಾಮರಾದಲ್ಲಿ ಸೆರೆ: ಮೊಬೈಲ್ ಕ್ಯಾಮರಾವಲ್ಲದೇ ಮಹಾನಗರದಲ್ಲಿ ಕಾರ್ಯನಿರ್ವಹಿಸುವ 13 ಸಿಸಿ ಕ್ಯಾಮರಾಗಳಲ್ಲೂ ಸಂಚಾರಿ ನಿಯಮ ಉಲ್ಲಂಘನೆ ದಾಖಲಾದರೂ ಮನೆಗೆ ನೋಟಿಸ್ ಜಾರಿಯಾಗುತ್ತದೆ. ಮಹಾನಗರದ ರಾಮಮಂದಿರ, ರಾಷ್ಟ್ರಪತಿ ವೃತ್ತ, ಬಸ್ ನಿಲ್ದಾಣ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ಸರ್ಕಲ್, ಲಾಲಗೇರಿ ಕ್ರಾಸ್, ಸೂಪರ್ ಮಾರ್ಕೆಟ್, ಆಳಂದ ಚೆಕ್ಪೋಸ್ಟ್ ವೃತ್ತ, ಹುಮನಾಬಾದ ವರ್ತುಲ್ ರಸ್ತೆ ಚೌಕ್, ಹಾಗರಗಾ ಕ್ರಾಸ್, ಸೇಡಂ ರಸ್ತೆ ವರ್ತುಲ್ ಚೌಕ್, ಮುಸ್ಲಿಂ ಚೌಕ್ದಲ್ಲಿ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿವೆ. ಈ ಸ್ಥಳಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದರೆ ಅದನ್ನು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಲು ಮುಂದಾಗಲಾಗಿದೆ.
ಮಹನಾಗರದಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ರಸ್ತೆ ಸಂಚಾರ ಸುಧಾರಣೆಗೆ ಪೊಲೀಸ್ ಇಲಾಖೆ ಹೊಸ ಯೋಜನೆ ರೂಪಿಸಿದ್ದು, ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಸಿಸಿ ಕ್ಯಾಮರಾಗಳ ಸಂಖ್ಯೆ ಹೆಚ್ಚಳ, ಕಾರ್ಯನಿರ್ವಹಣೆ ದಕ್ಷತೆ ಹೆಚ್ಚಳ ಸೇರಿದಂತೆ ಇತರ ಸುಧಾರಣಾ ಕಾರ್ಯದ ಸಲುವಾಗಿ ಯೋಜನೆ ರೂಪಿಸಲಾಗಿದೆ. ಇದೆಲ್ಲ ಕಾರ್ಯಗತವಾದರೆ ಪೊಲೀಸ್ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿದೆ. ಒಟ್ಟಾರೆ ಇದನ್ನೆಲ್ಲ ನೋಡಿದರೆ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುವ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಹಾಗೂ ಮೊಬೈಲ್ನಲ್ಲಿ ಮಾತನಾಡುತ್ತಾ ಸಂಚರಿಸುವ ವಾಹನ ಸವಾರುದಾರರಿಗೆ ಶಾಕ್ ಕಾದಿದ್ದಂತು ನಿಜ. ಸಂಚಾರ ಸುಧಾರಣೆ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತಂದಿರುವ ಮೊಬೈಲ್ ಆ್ಯಪ್ ಹಾಗೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ಸಂಚಾರಿ ನಿಯಮ ಉಲ್ಲಂಘನೆ ದೃಶ್ಯಗಳನ್ನಾಧರಿಸಿ ಕೈಗೊಳ್ಳುವ ನೋಟಿಸ್ ಪರಿಣಾಮಕಾರಿಯಾದಲ್ಲಿ ಕಲಬುರಗಿ ಮಹಾನಗರದ ಸಂಚಾರ ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ.
ಕಲಬುರಗಿ ಮಹಾನಗರ ಸಂಚಾರ ಸುಧಾರಣೆ ನಿಟ್ಟಿನಲ್ಲಿ ಹೊಸ ಕ್ರಮಕ್ಕೆ ಮುಂದಾಗಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸುವ ವಾಹನದಾರರ ಮನೆಗೆ ನೋಟಿಸ್ ತಲುಪಿಸುವ ಹೊಸ ಕಾರ್ಯಕ್ಕೆ ಇಳಿಯಲಾಗಿದೆ. ಈಗಾಗಲೇ ಪೊಲೀಸ್ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ವ್ಯಾಪಕವಾಗಿ ಎಲ್ಲೆಡೆ ವಿಸ್ತರಿಸಲಾಗುವುದು. ಸಾರ್ವಜನಿಕರೆಲ್ಲರೂ ಸಹಕರಿಸಬೇಕು.
•ವಿರೇಶ ಕರಡಿಗುಡ್ಡ,
ಪ್ರಭಾರ ಉಪ ಪೊಲೀಸ್ ಆಯುಕ್ತ (ಸಂಚಾರ ಮತ್ತು ಅಪರಾಧ), ಕಲಬುರಗಿ
ಪೊಲೀಸ್ ಇಲಾಖೆ ರಸ್ತೆ ಸಂಚಾರ ಸುಧಾರಣೆಗೆ ವಿನೂತನ ಹಾಗೂ ತಾಂತ್ರಿಕ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಇಷ್ಟೋತ್ತಿಗೆ ಇದು ಕಾರ್ಯಾನುಷ್ಠಾನ ಆಗಬೇಕಿತ್ತು. ಇನ್ಮುಂದೆಯಾದರೂ ಹೊಸ ಸಂಚಾರಿ ನಿಯಮ ಪರಿಣಾಮಕಾರಿಯಾಗಿ ಜಾರಿಯಾಗಬೇಕು.
•ದತ್ತು ಎಸ್. ಪಾಳಿಂಬ, ಸ್ಥಳೀಯ ನಿವಾಸಿ
ಸಂಚಾರಿ ನಿಯಮ ಉಲ್ಲಂಘನೆ ಕುರಿತಾಗಿ ಮನೆಗೆ ನೋಟಿಸ್ ಬಂದರೇನಾಯಿತು? ಎಂದು ನಿರ್ಲಕ್ಷಿಸುವಂತಿಲ್ಲ. ನೋಟಿಸ್ ತಲುಪಿದ ನಂತರ ಟ್ರಾಫಿಕ್ ಸಂಚಾರ ಉಪ ಆಯುಕ್ತಾಲಯಕ್ಕೆ ಹೋಗಿ ದಂಡ ತುಂಬದಿದ್ದರೆ ವಾಹನ ಜಪ್ತಿ ಮಾಡಲು ಪೊಲೀಸರೇ ಮನೆಗೆ ಬರ್ತಾರೆ. ತದನಂತರ ಎರಡ್ಮೂರು ಪಟ್ಟು ದಂಡ ವಸೂಲಿ ಮಾಡ್ತಾರೆ. ಸಾಧ್ಯವಾದರೆ ವಾಹನ ಚಾಲನೆ ರದ್ದತಿಯಂತಹ ದಿಟ್ಟ ಕ್ರಮಕ್ಕೂ ಮುಂದಾಗಲು ಉದ್ದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು