ಕಲಬುರಗಿ ಜಿಲ್ಲೆಗೆ ‘ಕೊರೊನಾ ಹೊಡೆತ’: ಇನ್ನೂ ಒಂದು ತಿಂಗಳು ಅಘೋಷಿತ ಬಂದ್ ಮುಂದುವರಿಕೆ?
Team Udayavani, Mar 16, 2020, 3:57 PM IST
ಕಲಬುರಗಿ: ಕೊರೊನಾ ಸೋಂಕು ನಿಯಂತ್ರಣ ಕಾರಣಕ್ಕಾಗಿ ಕಲಬುರಗಿ ಜಿಲ್ಲೆಯಲ್ಲಿ ಒಂದು ತಿಂಗಳು ಕಾಲ ಅಘೋಷಿತ ಬಂದ್ ವಾತಾವರಣ ಮುಂದುವರೆಯುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಹೊರಗಡೆ ಬರುವಂತೆ ಮಾಡಿರುವ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಸಹ ಸಾರ್ವಜನಿಕರು ಸ್ಪಂದಿಸಬೇಕು. ಅಗತ್ಯ ವಸ್ತುಗಳಿಗಾಗಿ ಮಾತ್ರ ಜನತೆ ಮನೆಯಿಂದ ಹೊರಬೇಕು. ಅನಗತ್ಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಬೇಕೆಂದು ಮತ್ತೊಮ್ಮೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ಮನೆಯಲ್ಲಿ ಪಾರ್ಟಿ ಬೇಡ: ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸಭೆ, ಸಮಾವೇಶ ಹಾಗೂ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಮನೆಗಳಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಸೇರಿಸಿಕೊಂಡು ಒಟ್ಟಾಗಿ ಮನೆಯಲ್ಲೂ ಪಾರ್ಟಿ ಮಾಡುವುದು ಬೇಡವೆಂದೂ ಅವರು ಎಚ್ಚರಿಸಿದರು.
ಕೊರೊನಾ ಸೋಂಕು ಕಲಬುರಗಿ ನಗರಕ್ಕೆ ಮಾತ್ರ ಸೀಮಿತವಲ್ಲ. ವಿದೇಶದಿಂದ ಬಂದವರು ನೇರವಾಗಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಈಗ ಸೋಂಕು ಕಾಣಿಸಿಕೊಂಡ ಇಬ್ಬರಲ್ಲಿ ಒಬ್ಬರು ಚಿತ್ತಾಪುರ ಹಾಗೂ ಮತ್ತೊಬ್ಬರು ಚಿಂಚೋಳಿಗೆ ಸೇರಿದವರು ಆಗಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲೂ ಎಚ್ಚರ ವಹಿಸಬೇಕಾಗುತ್ತದೆ ಎಂದರು.
ಜಿಲ್ಲಾ ಮಟ್ಟದಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ 12 ಐಸೋಲೇಟೆಡ್ ಹಾಗೂ ಇಎಸ್ಐ ಆಸ್ಪತ್ರೆಯಲ್ಲಿ 50 ಐಸೋಲೇಟೆಡ್ ವಾರ್ಡ್ ಮತ್ತು 200 ಕ್ವಾರಂಟೈನ್ ವಾರ್ಡ್ ಸಿದ್ಧ ಪಡಿಸಲಾಗಿದೆ. ಪ್ರತಿ ತಾಲೂಕಾ ಕೇಂದ್ರದಲ್ಲಿ ಎರಡರಿಂದ ಐದಕ್ಕೆ ಐಸೋಲೇಟೆಡ್ ವಾರ್ಡ್ ಗಳನ್ನು ಏರಿಸಲಾಗಿದೆ. ವಿದೇಶದಿಂದ ಬಂದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಇದಕ್ಕಾಗಿ 24 ಗಂಟೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ 08472 – 278604/ 278677 ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಾರ್ವಜನಿಕರು ಸಾಮಾಜಿಕ ಜಾಲತಾಣದ ಸುದ್ದಿ ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಮನವಿ ಮಾಡಿದರು.
ಇನ್ನು, ಈಗಾಗಲೇ ಜಿಲ್ಲೆಯಲ್ಲಿ ಹೆಚ್ಚು ಜನರು ಸೇರದಂತೆ ನೀಡಿಕೊಳ್ಳಲು ಕೆಲ ಸರ್ಕಾರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಉಪನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಕಂದಾಯ ಇಲಾಖೆಯಲ್ಲಿ ಪಹಣಿ, ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್ ನೀಡುವ ಸೇವೆಗಳನ್ನು ರದ್ದು ಮಾಡಲಾಗಿದೆ. ಕಲಬುರಗಿಗೆ ಬೇರೆ ಜಿಲ್ಲೆಯ ಜನರು ಬರುವುದನ್ನು ತಪ್ಪಿಸಲು ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರವನ್ನು ಕಡಿತಗೊಳಿಸಲಾಗಿದೆ.
ರವಿವಾರದಿಂದ ಜಿಲ್ಲಾದ್ಯಂತ ಎಲ್ಲ ರೀತಿಯ ಸಂತೆ, ಜಾತ್ರೆ ಮತ್ತು ಉರುಸುಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲದೇ, ಎಲ್ಲ ತರಹದ ಮದ್ಯ ಮಾರಾಟ ಹಾಗೂ ಬಾರ್, ಮತ್ತು ರೆಸ್ಟೋರೆಂಟ್ ಗಳಿಗೂ ನಿಷೇಧ ಹೇರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ