ಸಾಂಸ್ಕೃತಿಕ ಏಕೀಕರಣದಿಂದ ಸರ್ವರಿಗೂ ನ್ಯಾಯ
Team Udayavani, Jan 21, 2019, 8:49 AM IST
ಕಲಬುರಗಿ: ಕರ್ನಾಟಕ ಏಕೀಕರಣದಿಂದ ಲಿಂಗಾಯತ, ಗೌಡ ಎನ್ನುವ ರಾಜಕೀಯ ಏಕೀಕರಣವಾಗಿದೆಯೇ ಹೊರತು ಸಾಂಸ್ಕೃತಿಕ ಏಕೀಕರಣವಾಗಿಲ್ಲ. ಸಾಂಸ್ಕೃತಿಕ ಏಕೀಕರಣ ಮತ್ತು ವಿಕೇಂದ್ರೀಕರಣ ಆದಾಗ ಮಾತ್ರ ಉತ್ತರ ಕರ್ನಾಟಕ, ಹೈದ್ರಾಬಾದ ಕರ್ನಾಟಕಕ್ಕೆ ನ್ಯಾಯ ಸಿಗಲು ಸಾಧ್ಯ ಎಂದು ಕರ್ನಾಟಕ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ 3ನೇ ಕಲಬುರಗಿ ಸಾಹಿತ್ಯ ಸಂಭ್ರಮ-2019 (ಸಾಹಿತ್ಯ-ಸಂಸ್ಕೃತಿಗೆ ಪ್ರೇರಣಾ ಕಾರ್ಯ) ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಪ್ರತಿಬಿಂಬಿಸುವಂತಹ 22 ಸಾಂಸ್ಕೃತಿಕ ಅಕಾಡೆಮಿಗಳೆಲ್ಲವೂ ಬೆಂಗಳೂರಿನಲ್ಲೇ ಗೂಟ ಬಡಿದುಕೊಂಡಿವೆ. ಸಾಂಸ್ಕೃತಿಕವಾದ ಸುಂದರ ಕರ್ನಾಟಕ ನೋಡಲು ಅಕಾಡೆಮಿಗಳ ವಿಕೇಂದ್ರೀಕರಣಗೊಳ್ಳಬೇಕಿದೆ ಎಂದರು.
ಕೊಂಕಣಿ, ಅರೆ ಭಾಷಾ, ತುಳು ಅಕಾಡೆಮಿಗಳು ಮಡಿಕೇರಿ ಮತ್ತು ಮಂಗಳೂರಿನಲ್ಲಿ ಇವೆ. ಅದೇ ರೀತಿ ಉರ್ದು ಮಾತನಾಡುವ ಕಲಬುರಗಿ ಪ್ರಾಂತದಲ್ಲಿ ಉರ್ದು ಅಕಾಡೆಮಿ ಇರಬೇಕಿತ್ತು. ಆದರೆ, ಅದು ಆಗಿಲ್ಲ. ಇದನ್ನು ನಾವು ಕೇಳಲು ಹೋಗುತ್ತಿಲ್ಲ. ಒಂದು ವೇಳೆ ಕೇಳಿದರೂ ನಿಮಗೆ ಕೊಟ್ಟಿದ್ದೇವಲ್ರಿ ಎನ್ನುವ ಜ್ಞಾನದ ಅಹಂಕಾರ ಬೆಂಗಳೂರಿನಲ್ಲಿ ತುಂಬಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನುಷ್ಯ ಮತ್ತು ಸಭ್ಯ ಸಂಸ್ಕೃತಿ ಕಣ್ಮರೆ ಆಗುತ್ತಿದೆ. ದೇಶದ ತುಂಬಾ ಸಂಕಷ್ಟ ಹಾಗೂ ಅಸಹಿಷ್ಣುತೆ ವಾತಾವರಣವಿದೆ. ಸಾಹಿತಿಗಳು ತಮ್ಮ ಜವಾಬ್ದಾರಿ ಮೆರೆಯುತ್ತಿದ್ದಾರೆ. ಗಂಭೀರವಾದ ಸಾಹಿತ್ಯಿಕ ಚಿಂತನೆಗಳ ಜೊತೆಗೆ ಸಾಂಸ್ಕೃತಿಕ ಸಂಕಥನ ಬರೆಯುವವರು ಸಾಮಾಜಿಕ ಸಂಕಷ್ಟವನ್ನು ಸಾಹಿತ್ಯಿಕ ರೂಪದಲ್ಲಿ ತರಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ನಾಗೇಂದ್ರ ಮಸೂತಿ ಮಾತನಾಡಿ, ಒಬ್ಬ ಲೇಖಕ, ಸಾಹಿತಿಯಾದವನು ಜನತೆಗೆ ಏನು ಕೊಡಬೇಕು, ಯಾವುದನ್ನು ಬರೆಯಬೇಕೆಂಬ ತೊಡಕುಗಳು ಇವೆ. ಬರೆದ ಪುಸ್ತಕಗಳೆಷ್ಟು ಎನ್ನುವುದು ಮುಖ್ಯವಲ್ಲ. ಅದರ ಮೌಲ್ಯ ಎಷ್ಟಿದೆ, ಎಷ್ಟು ಜನರಿಗೆ ತಲುಪಿದೆ ಎನ್ನುವುದು ಮಹತ್ವದ್ದು ಎಂದರು.
ವಿಶ್ವಜ್ಯೋತಿ ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶಕುಂತಲಾ ಪಾಟೀಲ ಜಾವಳಿ, ಕಾರ್ಯಾಧ್ಯಕ್ಷ ಜಗದೀಶ ಮರಪಳ್ಳಿ ಆಶಯ ನುಡಿಗಳನ್ನಾಡಿದರು.
ಹಿರಿಯ ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ, ಸಂಗಮನಾಥ ರಬಶೆಟ್ಟಿ, ಅರುಣಕುಮಾರ ಎಸ್. ಪಾಟೀಲ, ಡಾ| ಬಾಬುರಾವ್ ಶೇರಿಕಾರ, ಬಿ.ಎಸ್. ಮಾಲಿಪಾಟೀಲ, ಬಿ.ಎಸ್. ದೇಸಾಯಿ ಹಾಗೂ ಮತ್ತಿತರರು ಇದ್ದರು.
· ಮಲ್ಲಿಕಾರ್ಜುನ ಕಡಕೋಳ, ಕರ್ನಾಟಕ ರಂಗ ಸಮಾಜದ ಸದಸ್ಯ
ಬಂಡಾಯ ಅಂತರ್ಗತ
ಬಂಡಾಯ ಸಾಹಿತ್ಯ ನಿಂತಿದೆ ಎಂದು ಕೆಲವರು ಆರಾಧಿಸಿದ್ದು ಇದೆ. ಮನುಷ್ಯ ಸಂಸ್ಕೃತಿ ಇರೋವರೆಗೂ ಪ್ರತಿಭಟನೆ ಕಾವು ಇದ್ದೇ ಇರುತ್ತದೆ. ಪ್ರತಿಭಟನೆ ಸ್ವರೂಪ, ಮನೋಧರ್ಮ ಬೇರೆ ಇರಬಹುದು. ಆದರೆ, ಇಂದಿಗೂ ಬಂಡಾಯ ಸಾಹಿತ್ಯ ಅಂತರ್ಗತವಾಗಿ ಹರಿಯುತ್ತಿದೆ. ದೇಶದಲ್ಲಿಂದು ಎಡ-ಬಲ ಪಂಥದ ಹೆಸರಲ್ಲಿ ಬರೀ ವಾದ-ವಿವಾದಗಳು ನಡೆಯುತ್ತಿವೆ. ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಡ-ಬಲ ಪಂಥಾವರಣ ಸೃಷ್ಟಿಯಾಗಿದೆ. ಯಾವುದನ್ನು ಹೇಗೆ ಗ್ರಹಿಸಿಕೊಳ್ಳಬೇಕು ಎಂದು ತಿಳಿಯದೆ ಯುವಕರಲ್ಲಿ ಏಕಮುಖೀ ಸಂಸ್ಕೃತಿ ಭಾವೋದ್ರೇಕವಾಗಿ ಆವರಿಸಿಕೊಳ್ಳುತ್ತಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದ್ದು, ವಾದ-ವಿವಾದ ಬದಲಿಗೆ ಸಂವಾದ ನಡೆಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್