ಖರ್ಗೆ ಜೂನ್ನಲ್ಲಿ ರಾಜ್ಯಸಭೆ ಸದಸ್ಯ ಖಚಿತ: ಸಾರಂಗಧರ ಶ್ರೀ
Team Udayavani, Mar 2, 2020, 8:59 PM IST
ಕಲಬುರಗಿ: ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹತ್ತು ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಈಗ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಗಳಿದ ವಿಡಿಯೋ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಖರ್ಗೆ ಪರವಾಗಿ ಸ್ವಾಮೀಜಿ ಮಾತನಾಡಿದ್ದು, ಖರ್ಗೆ 50 ವರ್ಷ ಸೇವೆ ಮಾಡಿದರು, ಸರ್ಕಸ್ ಮಾಡಲಿಲ್ಲ. ಸರ್ವೀಸ್ ಮಾಡಿದವರನ್ನು ಈ ಭಾಗದ ಜನರು ಕೆಡವಿದರು. ಮಾತಿಗೆ ಮರಳಾಗಿ ಚುನಾವಣೆಯಲ್ಲಿ ಖರ್ಗೆ ಅವರನ್ನು ಸೋಲಿಸಿದರು. ಅಂಬೇಡ್ಕರ್ಗೆ ಎಷ್ಟು ನೋವಾಗಿತ್ತೋ, ಅಷ್ಟೇ ನೋವು ಮಲ್ಲಿಕಾರ್ಜುನ ಖರ್ಗೆಗೆ ಆಗಿದೆ. ಆದರೆ, ಅವರು ನೋವು ತೋರಿಸಿಕೊಳ್ಳುವುದಿಲ್ಲ. ಜೂನ್ನಲ್ಲಿ ಖರ್ಗೆ ರಾಜ್ಯಸಭಾ ಸದಸ್ಯರಾಗುತ್ತಾರೆ ಎಂದು ಸ್ವಾಮೀಜಿ ವಿಡಿಯೋದಲ್ಲಿ ಹೇಳಿದ್ದಾರೆ.
ಫೆ.18ರಂದು ನಡೆದ ಉದ್ಯೋಗ ಮೇಳದಲ್ಲಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಪರವಾಗಿ ಮಾತನಾಡಿದ ಬೆನ್ನಲ್ಲೇ ಇದೀಗ ಖರ್ಗೆ ಪರವಾಗಿ ಸ್ವಾಮೀಜಿ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ “ಸ್ವಾಮೀಜಿ ಭಾಗ-2′ ಹೆಸರಲ್ಲಿ ಹರಿದಾಡುತ್ತಿದೆ.