ಪ್ರಕೃತಿ ವಿಕೋಪ ಪರಿಹಾರ ಮುಂದಿನ ವರ್ಷದಿಂದ ಐದು ಪಟ್ಟು ಹೆಚ್ಚಳ: ಆರ್. ಅಶೋಕ್
Team Udayavani, Oct 16, 2020, 3:32 PM IST
ಕಲಬುರಗಿ: ಪ್ರಕೃತಿ ವಿಕೋಪದ ಹಾನಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೋಶದಿಂದ ನೀಡುವ ಪರಿಹಾರ ಮೊತ್ತವನ್ನು ಐದು ಪಟ್ಟು ಹೆಚ್ಚಳಕ್ಕೆ ಕೇಂದ್ರದ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಶುಕ್ರವಾರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಾದ ಸೈಯದ್ ಚಿಂಚೋಳಿ, ಫಿರೋಜಬಾದ ಗ್ರಾಮ ಮತ್ತು ಸರಡಗಿ- ಕೊನಹಿಪ್ಪರಗಾ, ಕಟ್ಟಿ ಸಂಗಾವಿ ಸೇತುವೆ ಬಳಿ ಅತಿವೃಷ್ಟಿಯಿಂದಾದ ಬೆಳೆ ಹಾನಿ ವೀಕ್ಷಿಸಿ ಮಾತನಾಡಿದರು.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನಿಯಮಾವಳಿ ಅಡಿ ಈಗ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂಬ ಕೊರಗಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಬರಲಾಗಿದೆ. ಆದರೆ ಇದು ಮುಂದಿನ ವರ್ಷದ ಹಾನಿಗೆ ಅನ್ವಯವಾಗಲಿದೆ ಎಂದು ಸಚಿವರು ಸ್ಪಷ್ಟ ಪಡಿಸಿದರು.
ಈಗಾಗಲೇ ಕಲಬುರಗಿ ಜಿಲ್ಲಾಧಿಕಾರಿ ಖಾತೆಯಲ್ಲಿ ಈಗಾಗಲೇ ರೂ 20 ಕೋಟಿ ಇದೆ. ಅದೇ ರೀತಿ ಯಾದಗಿರಿ ಜಿಲ್ಲಾಧಿಕಾರಿಯೂ ಬಳಿ 11 ಕೋಟಿ ರೂ ಇದೆ. ಒಟ್ಟಾರೆ ಪರಿಹಾರ ಕಾರ್ಯಗಳಿಗೆ ಹಣದ ಕೊರತೆಯಿಲ್ಲ ಎಂದರು.
ಇದನ್ನೂ ಓದಿ: ಮಳೆ ಹಾನಿ: ಕೇಂದ್ರ ಸರ್ಕಾರ 25 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಬೇಕು: ವಾಟಾಳ್ ಆಗ್ರಹ
ರಾಜ್ಯದಲ್ಲಿ ಪ್ರವಾಹದಿಂದ 3.31 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 23,996 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿದೆ 1268 ಸೇತುವೆಗಳು ಕುಸಿದಿವೆ. 10,978 ಮನೆಗಳು ಬಿದ್ದಿವೆ. 360 ಕೆರೆ ಒಡೆದಿವೆ. 3168 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ರಾಜ್ಯದಲ್ಲಿ ಒಟ್ಟು 173 ತಾಲ್ಲೂಕುಗಳು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಕಲಬುರ್ಗಿ, ಕಮಲಾಪುರ, ಚಿಂಚೋಳಿ , ಯಡ್ರಾಮಿ, ಕಾಳಗಿ, ಚಿತ್ತಾಪುರ ತಾಲ್ಲೂಕುಗಳನ್ನೂ ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದರು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಶಾಸಕರಾದ ರಾಜಕುಮಾರ ಪಾಟೀಲ, ಬಿ.ಜಿ.ಪಾಟೀಲ, ಎಂ.ವೈ ಪಾಟೀಲ್, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ರಾಜುಗೌಡ, ಕಲಬುರಗಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದ ಸೇರಿದಂತೆ ಮುಂತಾದವರಿದ್ದರು.