ರೇಷ್ಮೆಗಿರುವ ಕಾಳಜಿ ತೊಗರಿ ರೈತರಿಗಿಲ್ಲ
Team Udayavani, Feb 17, 2018, 11:48 AM IST
ಕಲಬುರಗಿ: ಒಂದು ಜಿಲ್ಲೆಗೆ ಹೆಚ್ಚು ಕೇಂದ್ರಿಕೃತವಾಗಿರುವ ರೇಷ್ಮೆ ಬೆಳೆಗೆ 457 ಕೋಟಿ ರೂ. ನೀಡಿ ಹೈ.ಕ. ಭಾಗದ 6 ಜಿಲ್ಲೆಗಳಲ್ಲದೇ ಉತ್ತರ ಕರ್ನಾಟಕದಾದ್ಯಂತ ಬೆಳೆಯುತ್ತಿರುವ ತೊಗರಿಗೆ ನಯಾ ಪೈಸೆ ಪ್ಯಾಕೇಜ್ ನೀಡದಿರುವ ಪ್ರಮುಖ ಅಂಶ ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಮಂಡಿಸಿದ 2018-19ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಪ್ರಮುಖವಾಗಿ ಕಾಣಬಹುದಾಗಿದೆ.
ನೆಲಗಡಲೆ, ಭತ್ತ, ಕಬ್ಬು ಸೇರಿದಂತೆ ಬಹುತೇಕ ಕೃಷಿ ಉತ್ಪನ್ನಗಳಿಗೆ ಒಂದಿಲ್ಲ ಒಂದು ನಿಟ್ಟಿನಲ್ಲಿ ಉಪಯೋಗವಾಗುವ ಹಾಗೆ ಯೋಜನೆ ರೂಪಿಸಲಾಗಿದೆ. ಆದರೆ ತೊಗರಿ ಸಂಬಂಧವಾಗಿ ಯಾವುದೇ ಯೋಜನೆ ಹಾಗೂ ನಯಾಪೈಸೆ ಅನುದಾನ ನೀಡಿಲ್ಲ.
ಸಂಕಷ್ಟದಿಂದ ಬಂದಾಗಿರುವ ತೊಗರಿ ಬೇಳೆ ಉದ್ಯಮದ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ, ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ. ನಂತರ ಉಳಿದ ಬೆಳೆ ಸಾಲ ಮನ್ನಾ ಆಗದಿರುವುದು, ತೊಗರಿ ಮಂಡಳಿಗೆ ಸೂಕ್ತ ಅನುದಾನದ ನಿರೀಕ್ಷೆ ಸುಳ್ಳಾದರೆ ನಿರೀಕ್ಷೆಯಂತೆ ಎಚ್ಕೆಆರ್ಡಿಬಿಗೆ 1500 ಕೋಟಿ ರೂ., ಕಲಬುರಗಿ ಆಸ್ಪತ್ರೆಗೆ ಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್, ಪ್ರವಾಸೋದ್ಯಮದ ಕಲಾವನ, ಬೆಣ್ಣೆತೋರಾ, ಅಮರ್ಜಾ, ಗಂಡೋರಿ ನಾಲಾ, ಲೋಹರಮುಲ್ಲಾ ಕಾಲುವೆ ಆಧುನೀಕರಣಕ್ಕೆ ಹಣ ತೆಗೆದಿಟ್ಟಿರುವುದು ಸ್ವಾಗತಿಸುವ ಅಂಶಗಳಾಗಿವೆ. ಆದರೆ ರೈತ ಬೆಳಕು ಎಂಬ ವಿಶಿಷ್ಟ ಯೋಜನೆ 5 ಎಕರೆ ಒಳಗೆ ಇರುವ ರೈತರಿಗೆ 5 ಸಾವಿರ ಹಾಗೂ ಇದಕ್ಕಿಂತ ಮೇಲ್ಪಟ್ಟು ಭೂಮಿ ಹೊಂದಿರುವ ರೈತರಿಗೆ 10 ಸಾವಿರ ರೂ. ನೇರವಾಗಿ ಖಾತೆಗೆ ಜಮಾ ಮಾಡುವ ಹಾಗೂ ಸರ್ಕಾರಿ ನೌಕರರ 6ನೇ ವೇತನ ಜಾರಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಬೆಳೆ ಸಾಲ ಮನ್ನಾ ಹಣವೇ ಇನ್ನೂ ಜಮಾ ಮಾಡಿಲ್ಲ ಎಂದಾದ ಮೇಲೆ ರೈತರ ಖಾತೆಗೆ 10 ಸಾವಿರ ಜಮಾ ಆಗುವುದೇ ಎಂಬ ಅನುಮಾನ ಕಾಡುತ್ತಿದೆ ಎಂದು ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೊಗರಿ ಬೇಳೆ ಉದ್ಯಮ ಪುನಶ್ಚೇತನ ಸಂಬಂಧವಾಗಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಹೋಗಿತ್ತು. ಜತೆಗೆ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರು ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಸುಳಿವು ನೀಡಿದ್ದರು. ಆದರೆ ಪ್ಯಾಕೇಜ್ ನಿರೀಕ್ಷೆ ಸುಳ್ಳಾಗಿದೆ. ಅದೇ ರೀತಿ ಕನ್ನಡಿಯೊಳಗಿನ ಗಂಟಾಗಿರುವ ತೊಗರಿ ಮಂಡಳಿ ಬಲವರ್ಧನೆ ಕ್ರಮ ಕೈಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದು ಸಹ ಸುಳ್ಳಾಗಿದೆ.
ಬಂದಾಗಿರುವ ತೊಗರಿ ಬೇಳೆ ಉದ್ಯಮ ಪುನಶ್ಚೇತನ ಸಂಬಂಧವಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾಗುವುದು ನಿಶ್ಚಿತ ಎಂದು ಬಲವಾಗಿ ನಂಬಲಾಗಿತ್ತು. ಆದರೆ ನಿರೀಕ್ಷೆ ಸುಳ್ಳಾಗಿರುವುದು ನೋವು ತಂದಿದೆ ಎಂದು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಸೋಮಶೇಖರ ಟೆಂಗಳಿ ಹಾಗೂ ಪದಾಧಿಕಾರಿಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ.
2016-17ನೇ ಮುಂಗಡ ಪತ್ರದಲ್ಲಿ ಘೋಷಣೆಯಾದ ತಾಯಿ ಮತ್ತು ಮಗುವಿನ ಪ್ರತ್ಯೇಕ ಆಸ್ಪತ್ರೆ ಎರಡು ವರ್ಷವಾದರೂ
ಸಾಕಾರಗೊಂಡಿಲ್ಲ. ಕಟ್ಟಡ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ವೈದ್ಯಕೀಯ ಶಿಕ್ಷಣ ಸಚಿವರು. ಕಳೆದ ವರ್ಷದ 2017-18ನೇ ಸಾಲಿನ ಮುಂಗಡ ಪತ್ರದಲ್ಲಿ ಜಿಲ್ಲೆಗೆ ಘೋಷಿಸಲಾಗಿರುವ ಕಾರ್ಯಗಳಲ್ಲಿ ಬಹುತೇಕ ಸಾಕಾರಗೊಳ್ಳದಿರುವುದನ್ನು ನೋಡಿದರೆ ಪ್ರಸ್ತುತ 2018-19ನೇ ಸಾಲಿನ ಘೋಷಣೆಗಳಂತೂ ಕಾರ್ಯರೂಪಕ್ಕೆ ಬರುವುದು ಅನುಮಾನವೇ ಸರಿ. ಭೀಮಾ ನದಿಯಿಂದ ಅಮರ್ಜಾಗೆ ನೀರು ತುಂಬಿಸುವ, ಕಲಬುರಗಿ ಮಹಾನಗರಕ್ಕೆ ಪೊಲೀಸ್ ಆಯುಕ್ತಾಲಯ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಇಂದಿನ ದಿನದವರೆಗೂ ಸಾಕಾರಗೊಂಡಿಲ್ಲ.
ಸಿದ್ದರಾಮಯ್ಯ ಮುಂಗಡ ಪತ್ರಕ್ಕೆ ಎಚ್ಕೆಸಿಸಿಐ ಮಿಶ್ರ ಪ್ರತಿಕ್ರಿಯೆ
ಕಲಬುರಗಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಮಂಡಿಸಿದ 2018-19ನೇ ಸಾಲಿನ ಮುಂಗಡ ಪತ್ರಕ್ಕೆ ನಗರದ ಹೈದ್ರಾಬಾದ್ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಹೈ.ಕ ಭಾಗದ ಕೆಲವು ಯೋಜನೆಗಳಿಗೆ ಹಣ ನೀಡಿರುವುದು ಸ್ವಾಗತಾರ್ಹವಾಗಿದೆ ಹಾಗೂ ನಷ್ಟದಲ್ಲಿರುವ ತೊಗರಿ ಉದ್ಯಮಕ್ಕೆ ಪುನಶ್ಚೇತನ ನೀಡದಿರುವುದು ಅಸಮಾಧಾನ ಉಂಟಾಗಿದೆ ಎಂದು ಎಚ್ ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ, ಗೌರವ ಕಾರ್ಯದರ್ಶಿ ಪ್ರಶಾಂತ ಮಾನಕರ ತಿಳಿಸಿದ್ದಾರೆ.
ಬೀದರನ ಕಾರಂಜಾ ಯೋಜನೆ ಅಡಿ ಕಾಲುವೆಗಳ ಆಧುನಿಕರಣಕ್ಕೆ 482 ಕೋಟಿ ರೂ., ಮುಲ್ಲಾಮಾರಿ ಕೆಳದಂಡೆ ಯೋಜನೆಗೆ 117 ಕೋಟಿ ರೂ., ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ನಾರಾಯಣಪುರ ಬಲ ದಂಡೆ ಕಾಲುವೆ ಆಧುನೀಕರಣಕ್ಕೆ 750 ಕೋಟಿ ರೂ. ಒದಗಿಸಿರುವುದು, ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಸ್ಪತ್ರೆ ನಿರ್ಮಿಸಲು ಆಯ-ವ್ಯಯದಲ್ಲಿ 30 ಕೋಟಿ ರೂ. ಒದಗಿಸಿರುವುದು, ಬೀದರ ವೈದ್ಯಕೀಯ ಮಹಾವಿದ್ಯಾಲಯಲ್ಲಿ ಹೃದ್ರೋಗ ಘಟಕ ಸ್ಥಾಪಿಸುವುದು, ಎಚ್ಕೆಆರ್ಡಿಬಿಗೆ 1500 ಕೋಟಿ ರೂ. ನೀಡಿರುವುದು, ಕೆಎಫ್ಎಸ್ಸಿ ಮೂಲಕ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳು ಪಡೆಯಲಾಗಿರುವ ಸಾಲದ ಬಡ್ಡಿ ಮೇಲೆ ಶೇ. 10ರಷ್ಟು ಸಬ್ಸಿಡಿ ನೀಡುವುದು.
ಸ್ಟಾರ್ಟ್ಅಪ್ಗೆ ಉತ್ತೇಜನ ನೀಡಲು ಕಲಬುರಗಿಯಲ್ಲಿ ಇನುಬೇಷನ್ ಸೆಂಟರ್ ಸ್ಥಾಪಿಸುವುದು, ಕಲಬುರಗಿ ಕಲಾ ವನ ಸ್ಥಾಪನೆ, ಎಪಿಎಂಸಿ ಪ್ರಾಂಗಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಿಸುವುದು, ಧಾನ್ಯಗಳ ಗುಣ ಮಟ್ಟ ವಿಶ್ಲೇಷಿಸಲು ಎಪಿಎಂಸಿ ಪ್ರಾಂಗಣದಲ್ಲಿ ಲ್ಯಾಬೋರಿಟರಿ ಸ್ಥಾಪಿಸುವುದು ಸ್ವಾಗತಾರ್ಹ ಕ್ರಮಗಳಾಗಿವೆನ ಎಂದು ತಿಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಯಿಂದ ರೈತರಿಗೆ ಲಾಭವಾಗದಿರುವುದರಿಂದ ಮುಖ್ಯಮಂತ್ರಿಗಳ ಭಾವಾಂತರ ಯೋಜನೆಯನ್ನು ಕೈಷಿ ಉತ್ಪನಗಳಿಗೆ ಜಾರಿಗೊಳಿಸುವಂತೆ, ಮಹಿಳಾ ಉದ್ಯಮಿಗಳು ಸ್ಥಾಪಿಸುವ ಕೈಗಾರಿಕೆಗಳಿಗೆ ವಿಶೇಷ ಸವಲತ್ತು ಹಾಗೂ ತೆರಿಗೆ ರಿಯಾಯಿತಿ ನೀಡುವಂತೆ, ರಾಷ್ಟ್ರೀಯ ಬಂಡವಾಳ ಹಾಗೂ ಉತ್ಪನ ವಲಯದ ಸ್ಥಾಪನೆಗೆ ಭೂಸ್ವಾಧೀನಗೊಳಿಸಲಾಗುವ ಜಮೀಗೆ ಹಣ ಪೂರೈಸುವುದು, ಆಳಂದ ರಸ್ತೆಯಲ್ಲಿ ತೊಗರಿ ತಾಂತ್ರಿಕ ಉದ್ಯಾನದ ಸ್ಥಾಪನೆಗೆ ಹಣವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಪ್ರಸ್ತಾವನೆಗಳಿಗೆ ಹಸಿರು ನಿಶಾನೆ ತೋರದಿರುವುದು ನಿರಾಸೆ ತಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ
ಬಜೆಟ್ ಪ್ರತಿಕ್ರಿಯೆ
ರೈತ ಬೆಳಕು ಮಾದರಿ ಯೋಜನೆ
ರೈತ ಬೆಳಕು ಯೋಜನೆ ಸ್ವಾಗತಾರ್ಹ ಹಾಗೂ ರಾಜ್ಯದಲ್ಲಿಯೇ ಇದು ಮೊದಲನೇ ಮಾದರಿ ಕಾರ್ಯವಾಗಿದೆ. ಸರ್ಕಾರಿ ನೌಕರರಿಗೂ ಶೇ. 30ರಷ್ಟು ವೇತನ ಹೆಚ್ಚಳ, ಕಲಬುರಗಿ ವೈದ್ಯಕೀಯ ಕಾಲೇಜ್ ಗೆ ಬರ್ನ್ ವಾರ್ಡ್, ಮುಲ್ಲಾಮಾರಿ ಯೋಜನೆಗೆ 117 ಕೋಟಿ ರೂ. ಸೇರಿದಂತೆ ಇತರ ನೀರಾವರಿ ಯೋಜನೆಗಳಿಗೆ ಹಣ ನಿಗದಿ ಮಾಡಿರುವುದು, ಪ್ರವಾಸೋದ್ಯಮ ಸೇರಿದಂತೆ ಇತರ ಇಲಾಖೆಯಡಿ ಹಲವು ಸೌಕರ್ಯಗಳು ಘೋಷಣೆಯಾಗಿವೆ.
ಡಾ| ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಖಾತೆ ಸಚಿವರು
ಸಮಬಾಳು ಸಮಪಾಲು
ನಮ್ಮ ಸರಕಾರದ ಅವಧಿಯ 13ನೇ ಬಜೆಟ್ ಬುದ್ದ, ಬಸವ ಮತ್ತು ಅಂಬೇಡ್ಕರ್ ಸಮತೆ ಹೊಂದಿದೆ. ವಿದ್ಯಾರ್ಥಿ, ಯುವಕರು, ಕೃಷಿಕರು, ಶ್ರಮಿಕರು, ಔದ್ಯೋಗಿಕ, ಉದ್ಯೋಗದಾತರು, ದುಡಿಯುವ ಕೈಗಳಿಗೆ ಕೆಲಸ ನೀಡುವ ಬಜೆಟ್ ಇದಾಗಿದೆ. ಒಂದು ಸಶಕ್ತ ಕರ್ನಾಟಕದ ಮುನ್ನೋಟದ ಬಜೆಟ್ ಆಗಿದೆ.
ಪ್ರಿಯಾಂಕ ಖರ್ಗೆ, ಪ್ರವಾಸೋದ್ಯಮ ಸಚಿವ
ಜನರಿಗೂ ಆತ್ಮಹತ್ಯೆ ಭಾಗ್ಯ
ಕಾಂಗ್ರೆಸ್ ಸರಕಾರದ ಅವಧಿಯ 13ನೇ ಬಜೆಟ್ ಜನ ಸಾಮಾನ್ಯರಿಗೆ ಸಾವಿನ ಅಥವಾ ಆತ್ಮಹತ್ಯೆ ಭಾಗ್ಯ ನೀಡುವ ಬಜೆಟ್ ಆಗಿದೆ. ರೈತರು ಸತ್ತ ಬಳಿಕ ಅವರ ಸಾಲ ಮನ್ನಾ ಮಾಡುವ ಸರಕಾರ, ಇದ್ದಾಗ ಗೋಳು ಹಾಕಿಕೊಂಡು 3600 ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿತು. ತೊಗರಿ ಖರೀದಿಯಲ್ಲಿ ಹೈರಾಣ ಮಾಡುವ ಸರಕಾರ, ರೇಷ್ಮೆ ಭಾಗ್ಯ ಕರುಣಿಸಿದೆ. ಏನೇ ಮಾಡಿದರೂ ಬಜೆಟ್ ಜಾರಿಗೆ ಬರೋದಿಲ್ಲ. ಇದೊಂದು ನಾಮಕಾವಾಸ್ತೆ ಬಜೆಟ್.
ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷರು.
ಹೆಚ್ಚುಗಾರಿಕೆ ಇಲ್ಲ
ಸಿದ್ದರಾಮಯ್ಯ ಅವರ 13ನೇ ಬಜೆಟ್ ಹೇಳಿಕೊಳ್ಳುವಂತಹ ವಿಶೇಷತೆಗಳಿಂದೇನು ಕೂಡಿಲ್ಲ. ಇದೊಂದು ಹೆಚ್ಚಗಾರಿಕೆ ಇಲ್ಲದ ಬಜೆಟ್ ಆಗಿದೆ. ಜನರಿಗೆ ಹಲವು ಕ್ಷೇತ್ರಗಳಲ್ಲಿ ಹಗಲಿನಲ್ಲಿಯೇ ಚಂದ್ರನನ್ನು ತೋರಿಸುವ ಪ್ರಯತ್ನವಾಗಿದೆ. ಶಿಕ್ಷಣ, ಆರೋಗ್ಯ, ಕೊಂಚ ಉತ್ತಮ ಎನ್ನಿಸಿದರೆ, ಕೃಷಿ, ಉದ್ಯೋಗ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ನಿರೀಕ್ಷೆ ಶೂನ್ಯ ಬಜೆಟ್ ಆಗಿದೆ.
ಬಸವರಾಜ ತಡಕಲ್, ಜೆಡಿಎಸ್ ಜಿಲ್ಲಾಧ್ಯಕ್ಷರು
ನಿರಾಶಾದಾಯಕ
ಇದೊಂದು ನಿರಾಶಾದಾಯಕ ಬಜೆಟ್. ಅಲ್ಲದೆ ಚುನಾವಣೆ ಮುಂದಿಟ್ಟು ಕೊಂಡು ಮಾಡಿರುವ ಲೆಕ್ಕಾಚಾರದ ಬಜೆಟ್ಆಗಿದೆ. ಎಚ್ಕೆಡಿಬಿಗೆ ಮೀಸಲಿಟ್ಟ 4512 ಕೋಟಿ ರೂ.ಗಳಲ್ಲಿ 1500 ಖರ್ಚು, ಉಳಿದ ಹಣದ ರೂಪುರೇಷೆಯೇ ಇಲ್ಲ. ಪ್ರತಿ ವರ್ಷದ 1500 ಕೋಟಿ ರೂ.ಗಳ ಪ್ರಸ್ತಾವೇ ಇಲ್ಲ. ಸಹಕಾರ ಸಂಘದಲ್ಲಿನ 1 ಲಕ್ಷ ಸಾಲ ಮನ್ನ ಮಾಡಿರುವುದು ರೈತರಿಗೆ ತುಸು ನೈತಿಕ ಬಲ
ನೀಡಲಿದೆ. ಆದರೂ, ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ. ಸರಕಾರಿ ಶಾಲೆಗಳಲ್ಲಿ ಸಿಸಿಕ್ಯಾಮರಾ, ರೈತ ಬೆಳಕು ಯೋಜನೆ ಇದ್ದರೂ ನಿರಾಸೆ ಹುಟ್ಟಿಸಿದೆ.
ಶಶೀಲ ಜಿ.ನಮೋಶಿ, ಬಿಜೆಪಿ ರಾಜ್ಯ ವಕ್ತಾರ.
ಎಲ್ಲ ವರ್ಗಕ್ಕೂ ಹಿತ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 13ನೇ ಬಜೆಟ್ ಎಲ್ಲ ವರ್ಗದ ಹಿತ ಕಾಯುವ ಬಜೆಟ್ ಆಗಿದೆ. ಶಿಕ್ಷಣ, ಉದ್ಯೋಗ, ನೀರಾವರಿ, ಕೃಷಿ, ಕೈಗಾರಿಕೆ, ಮೀನುಗಾರಿಕೆ ವಲಯದಲ್ಲಿ ಚೈತನ್ಯ ತುಂಬುವ ಯೋಜನೆ ರೂಪಿಸಲಾಗಿದೆ. ಎಚ್ಕೆಆರ್ಡಿಬಿಗೆ ಬಲ ತುಂಬುವ ಯೋಜನೆ ಇದೆ. ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಸನ್ನತಿ, ಕಲಬುರಗಿ ಕೋಟೆ, ಅಭಿವೃದ್ಧಿಗೆ ಹಣ ಇಡಲಾಗಿದೆ. ರೈತರಿಗೆ ಶೇ. 3ರಷ್ಟು ಬಡ್ಡಿ ದರದಲ್ಲಿ 10 ಲಕ್ಷ ರೂ. ಸಾಲ ನೀಡುವ ಯೋಜನೆ ಸೇರಿದಂತೆ ಉತ್ತಮ ಬಜೆಟ್ ಆಗಿದೆ.
ಜಗದೇವ ಗುತ್ತೇದಾರ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು.
ಮಹಿಳಾ ಸಬಲೀಕರಣ ಕೊರತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ನಲ್ಲಿ ಮಹಿಳಾ ಸಬಲೀಕರಣ ಕಾಣಿಸಿಲ್ಲ. ಗರ್ಭಾಶಯ ಕತ್ತರಿಗೊಳಗಾಗದ ಮತ್ತು ದೇವದಾಸಿ ಮಹಿಳೆಯರ ಹಿತ ಕಾಯಬೇಕಿತ್ತು. ಲೈಂಗಿಕ ಕಾರ್ಯಕರ್ತೆಯರಿಗೆ ಪುನರವಸತಿಗೆ 20 ರಿಂದ 50ಸಾವಿರ ನೀಡುತ್ತಿರುವುದೇ ಸಾಧನೆ. ನಿರುದ್ಯೋಗ ದೂರ ಮಾಡಲು ಯೋಜಿತ ದೂರದೃಷ್ಟಿ ಇಲ್ಲ. ಉದ್ಯೋಗ ಖಾತ್ರಿಗೆ ಇನ್ನಷ್ಟು ಬಲ ನೀಡಬೇಕಿತ್ತು. ಅಂಗನವಾಡಿಗಳ ಬಲವರ್ಧನೆಗೆ ದೂರದೃಷ್ಟಿ ಕೊರತೆ ಬಜೆಟ್ ಆಗಿದೆ.
ಕೆ.ನೀಲಾ ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ
ವೋಟಿನ ಕಣ್ಣೋಟ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುದ್ದು ವೋಟಿನ ಕಣ್ಣೋಟದ ಬಜೆಟ್. ರೈತರ ಕಣ್ಣೀರು ಒರೆಸಲಿಲ್ಲ. ರೈತರ ಉತ್ಪನ್ನಗಳ ಬೆಲೆ ಕುಸಿಯದಂತೆ ತಡೆಯಲು 5000 ಕೋಟಿ ರೂ. ಆವರ್ತನಿಧಿ ನಿರೀಕ್ಷೆ ಇತ್ತು. ಘೋಷಣೆ ಮಾಡಲಿಲ್ಲ. ನೀರಾವರಿ ವಿಷಯದಲ್ಲಿ ಎಡವಿದೆ. ಒಟ್ಟಾರೆ 400 ಟಿಎಂಸಿ ಅಡಿ ನೀರು ಬಳಕೆ ಮಾಡಲು ಯೋಜನೆಗಳಿಲ್ಲ. ಇ-ಮಾರುಕಟ್ಟೆ ಅಭ್ಯುದಯ ಹಣಕಾಸು ಸಚಿವರ, ಮುಖ್ಯಮಂತ್ರಿಗಳ ಭ್ರಮೆಯಾಗಿದೆ. ಮೊದಲು ರೈತರ ಆದಾಯ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ. ಹೈಕ ಮಾನವ ಸಂಪನ್ಮೂಲ ಹೆಚ್ಚಳಕ್ಕೆ ಯೋಜನೆಗಳಿಲ್ಲ. ರೈತ ಬೆಳಕು ಯೋಜನೆ ತುಟಿಗೆ ಸಕ್ಕರೆ ಸವರುವ ಪ್ರಯತ್ನ. ರೈತರ, ಕೃಷಿ, ನೀರಾವರಿ ಹೆಸರಿನಲ್ಲಿ ಗುತ್ತಿಗೆದಾರರ ಜೇಬು ತುಂಬುವ ಬಜೆಟ್.
ಮಾರುತಿ ಮಾನ್ಪಡೆ, ಅಧ್ಯಕ್ಷರು, ರಾಜ್ಯ ರೈತ ಸಂಘ
ಹಲವು ನಿರೀಕ್ಷೆ-ಹಲವು ಕೊರತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 13ನೇ ಬಜೆಟ್ ಹವಲು ನಿರೀಕ್ಷೆ ಹುಟ್ಟು ಹಾಕಿದೆ. ಜೊತೆಯಲ್ಲಿ ಹಲವು ಕೊರತೆ ಉಂಟು ಮಾಡಿದೆ. ಶಿಕ್ಷಣದಲ್ಲಿ ಹಲವು ಯೋಜನೆ ಘೋಷಣೆ ಮಾಡುವ ಮೂಲಕ ಪ್ರಾಥಮಿಕ ಹಂತದಲ್ಲಿ ಶಾಲೆಗಳಲ್ಲಿ ಭದ್ರತೆಗೆ ಆಧ್ಯತೆ, ಉದ್ಯೋಗ ಸೃಷ್ಟಿಯಲ್ಲಿ ಬಜೆಟ್ ಸೊತಿದೆ. ಯುವಕರಿಗೆ ಆದ್ಯತೆ ನೀಡಿಲ್ಲ. ಪ್ರವಾಸೋದ್ಯಮಕ್ಕೆ ಶುಕ್ರದೆಸೆ. ಕೈಗಾರಿಕೆ ವಲಯ ಹಾಗೂ ಜಿಡಿಪಿ ವೃದ್ಧಿಗೆ ತುಸು ಹೆಜ್ಜೆ ಇಡಲಾಗಿದೆ. ಅಬಕಾರಿ, ಆಹಾರ ಉತ್ಪಾದನೆಗೆ ಆದ್ಯತೆ ನೀಡಿಲ್ಲ
ಶರಣಗೌಡ ಪಾಟೀಲ, ಮಾಶ್ಯಾಳ ನಿವಾಸಿ
ಹೈಕಕ್ಕೆ ಮತ್ತೆ ಅನ್ಯಾಯ
ಕಾಂಗ್ರೆಸ್ ಸರಕಾರ ಪುನಃ ಹೈಕಕ್ಕೆ ಅನ್ಯಾಯ ಮಾಡಿದೆ. ರೇಷ್ಮೆಗೆ 457 ಕೋಟಿ ರೂ.ಗಳ ಪ್ಯಾಕೇಜ್ ನೀಡಿ ಈ ಭಾಗದ ತೊಗರಿಗೆ ಪ್ರೋತ್ಸಾಹ ನೀಡಿಲ್ಲ. ಉದ್ಯಮಕ್ಕೆ ಯಾವುದೇ ಚೈತನ್ಯ ನೀಡಿಲ್ಲ. ಕೈಗಾರಿಕೆ ವಲಯ ಶೇ. 4.9 ಬೆಳವಣಿಗೆ ನಿರೀಕ್ಷಿಸಲಾಗಿದೆ. ಆದರೆ, ಯಾವುದೇ ಸಿದ್ದ ಯೋಜನೆಗಳಿಲ್ಲ. ಉದ್ಯಮ ಚೈತನ್ಯಕ್ಕೆ ಯಾವುದೇ ಶಿಫಾರಸುಗಳಿಲ್ಲ. ಇದೊಂದು ನಿರಾಶೆ ಹುಟ್ಟಿಸಿರುವ ಬಜೆಟ್ಆಗಿದೆ.
ಉಮಾಕಾಂತ ನಿಗ್ಗುಡಗಿ, ಎಚ್ಕೆಸಿಸಿ ಮಾಜಿ ಅಧ್ಯಕ್ಷ
2018-19ನೇ ಸಾಲಿನ ಘೋಷಣೆಗಳು
ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳ ಕಾಲುವೆ
ಸುಧಾರಣೆಗೆ ಹಣ ನಿಗದಿ
ಕಲಬುರಗಿ ಆಸ್ಪತ್ರೆಗೆ ಪ್ರತ್ಯೇಕಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್
ಪ್ರವಾಸೋದ್ಯಮ ಇಲಾಖೆಯ ಕಲಾವನ
ತೊಗರಿ ಮಂಡಳಿಗಿಲ್ಲ ಬಲವರ್ಧನೆ ಭಾಗ್ಯ
ತೊಗರಿ ಬೇಳೆ ಉದ್ಯಮ ಪುನಶ್ಚೇತನ ಸಂಬಂಧವಾಗಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಹೋಗಿತ್ತು. ಜತೆಗೆ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರು ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಸುಳಿವು ನೀಡಿದ್ದರು. ಆದರೆ ಪ್ಯಾಕೇಜ್ ನಿರೀಕ್ಷೆ ಸುಳ್ಳಾಗಿದೆ. ಅದೇ ರೀತಿ ಕನ್ನಡಿಯೊಳಗಿನ ಗಂಟಾಗಿರುವ ತೊಗರಿ ಮಂಡಳಿ ಬಲವರ್ಧನೆ ಕ್ರಮ ಕೈಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದು ಸಹ ಸುಳ್ಳಾಗಿದೆ.
2017-18ನೇ ಸಾಲಿನ ಘೋಷಣೆಗಳು
ಎಚ್ಕೆಆರ್ಡಿಬಿಗೆ 1500 ಕೋಟಿ ರೂ. ಅನುದಾನ
ಕಲಬುರಗಿ ಮಹಾನಗರಕ್ಕೆ ಪೊಲೀಸ್ ಆಯುಕ್ತಾಲಯ
ಭೀಮಾ ನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ
250 ಹಾಸಿಗೆಯುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಆಳಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ
ಕಲ್ಲೂರ-ಘತ್ತರಗಾ ಬ್ಯಾರೇಜ್ಗಳಿಗೆ ಅಧುನಿಕ ಗೇಟ್ಗಳ ಅಳವಡಿಕೆ
ಗಂಡೋರಿ ನಾಲಾ-ಮುಲ್ಲಾಮಾರಿ ಯೋಜನೆ ಆಧುನಿಕರಣ
ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಸೌರ ಛಾವಣಿ ಅಳವಡಿಕೆ
10 ಕೋಟಿ ರೂ. ವೆಚ್ಚದಲ್ಲಿ ನೆಪ್ರೋ-ಯುರಾಲಾಜಿ ಘಟಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್