ಪಿಎಸ್ ಐ ಪರೀಕ್ಷಾ ಅಕ್ರಮ: ಕಿಂಗ್ ಪಿನ್ ಆರ್.ಡಿ. ಪಾಟೀಲ್ ಗೆ ತುಸು ರಿಲೀಫ್
ಕಲ್ಬುರ್ಗಿ ಹೈಕೋರ್ಟ್ ಮಧ್ಯಂತರ ತೀರ್ಪು
Team Udayavani, Aug 11, 2022, 10:06 PM IST
ಕಲಬುರಗಿ: ಪಿಎಸ್ಐ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಎಂದೇ ಜನಜನಿತವಾಗಿರುವ ಆರ್.ಡಿ.ಪಾಫಟೀಲ ಅಲಿಯಾಸ್ ರುದ್ರಗೌಡ ಪಾಟೀಲ ಅವರನ್ನು ಪದೇ ಪದೇ ವಿಚಾರಣೆಗಾಗಿ ಸಿಐಡಿ(ಪೊಲೀಸ್) ಕಸ್ಟಡಿಗೆ ತೆಗೆದುಕೊಳ್ಳದಂತೆ ಇಲ್ಲಿನ ಹೈಕೋರ್ಟ್ ಪೀಠ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ.
ಇದರಿಂದಾಗಿ ಇಡೀ ಪ್ರಕರಣದಲ್ಲಿ ಸಿಐಡಿ ಆಧಿಕಾರಿಗಳ ವಿಚಾರಣೆಯಿಂದ ಸೋತು ಸುಣ್ಣವಾಗಿದ್ದ ಪಾಟೀಲ್ ಗೆ ಹೈಕೋರ್ಟ್ ತೀರ್ಪು ತುಸು ರಿಲೀಫ್ ನೀಡಿದಂತಾಗಿದೆ. ಈ ವಿಷಯ ಅಫಜಲಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರಕರಣದಲ್ಲಿ ಆರ್.ಡಿ.ಪಾಟೀಲಗೆ ಖಂಡಿತವಾಗಿ ಜಯ ಸಿಗಲಿದೆ ಎನ್ನುವ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದೆ.
ಈಗಾಗಲೇ 2 ಪ್ರಕರಣಗಳಲ್ಲಿ ಮ್ಯಾರಥಾನ್ ವಿಚಾರಣೆಗೆ ಒಳಗಾಗಿದ್ದ ಪಾಟೀಲ್ ಹೈರಾಣಾಗಿದ್ದರು. ಇದೇ ವೇಳೆ ಬಾಕಿ ಇರುವ ಇತರೆ ನಾಲ್ಕು ಪ್ರಕರಣಗಳಲ್ಲಿ ಇನ್ನೂ ವಿಚಾರಣೆ ಮಾಡು ಆರ್.ಡಿ.ಪಾಟೀಲರನ್ನು ಪುನಃ ಕಸ್ಟಡಿಗೆ ಕೊಡುವಂತೆ ಕೋರಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದರು. ಆದರೆ, ವಿಚಾರಣೆಗೆ ನೀಡದಂತೆ ಪಾಟೀಲ ಪರ ಹಿರಿಯ ವಕೀಲರಾದ ರವಿ ನಾಯಕ, ಸಂಜಯ ಕುಲಕರ್ಣಿ, ಅಶೋಕ ಮೂಲಗೆ ಅರ್ಜಿ ಸಲ್ಲಿಸಿದ್ದರು.
ಗುರುವಾರ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳಾದ ದೇಸಾಯಿ ಅವರು ಸೆಪ್ಟೆಂಬರ್ 1ರ ವರೆಗೆ ಕಸ್ಟಡಿಗೆ ತೆಗೆದುಕೊಳ್ಳದಂತೆ ಆದೇಶ ಹೊರಡಿಸಿದ್ದಾರೆ.