ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕಾರ
Team Udayavani, May 19, 2022, 1:37 AM IST
ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾಗಿರುವ ಅಭ್ಯರ್ಥಿ ರಾಜಾಪುರ ಬಡಾವಣೆಯ ಪ್ರಭು ಹಾಗೂ ಅವರ ತಂದೆ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ಮೂರನೇ ಜೆಎಂಎಫ್ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನ ಪರೀûಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಪ್ರಭು ಹಾಗೂ ಈ ಅಕ್ರಮಕ್ಕಾಗಿ ಪ್ರಮುಖ ಆರೋಪಿಗಳಿಗೆ ಹಣ ಕೊಟ್ಟಿದ್ದ ಶರಣಪ್ಪ ಅವರನ್ನು ಸಿಐಡಿ ಅಧಿ ಕಾರಿಗಳು ಎರಡು ವಾರಗಳ ಹಿಂದೆ ಬಂಧಿಸಿದ್ದರು.
ಅಭ್ಯರ್ಥಿ ಪ್ರಭು ಹೆಸರು ಪಿಎಸ್ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟವಾಗಿತ್ತು. ವಿಚಾರಣೆ ವೇಳೆ ಸಿಐಡಿ ತನಿಖಾ ಧಿಕಾರಿ ಶಂಕರಗೌಡ ಪಾಟೀಲ ಎದುರು ಅಕ್ರಮ ನಡೆಸಿದ್ದರ ಬಗ್ಗೆ ತಂದೆ, ಮಗ ಇಬ್ಬರೂ ಒಪ್ಪಿಕೊಂಡಿದ್ದರು. ಮೂರನೇ ಜೆಎಂಎಫ್ ನ್ಯಾಯಾಲಯದ ನ್ಯಾಯಾ ಧೀಶ ಬಸವರಾಜ ನೇಸರಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಎಲ್ಲರ ಅರ್ಜಿಯೂ ತಿರಸ್ಕೃತ
ಒಟ್ಟಾರೆ ಇದರೊಂದಿಗೆ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿ ಸಿದಂತೆ ಬಂ ಧಿತರಾದ ಎಲ್ಲ ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದಂತಾಗಿದೆ. ಸಿಐಡಿ ಪರ ಸಹಾಯಕ ಸರಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಹಾಜರಾಗಿದ್ದರು. ಹಗರಣದ ಪ್ರಮುಖ ಕಿಂಗ್ಪಿನ್ಗಳಾದ ರುದ್ರಗೌಡ ಪಾಟೀಲ್, ಮಂಜುನಾಥ ಮೇಳಕುಂದಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಅಮಾನತುಗೊಂಡಿರುವ ಡಿವೈಎಸ್ಪಿ ಮಂಜುನಾಥ ಸಾಲಿ ಸೇರಿ ಎಲ್ಲರ ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.