ಬರಹದಲ್ಲಿದೆ ವಿಸ್ಮಯ ಲೋಕ
Team Udayavani, Dec 10, 2019, 11:12 AM IST
ಕಲಬುರಗಿ: ಮನುಷ್ಯ ತನಗೆ ಅರಿವಿಲ್ಲದೆಯೇ ಸೃಷ್ಟಿಸುವ ವಿಸ್ಮಯ ಲೋಕ ಎಲ್ಲರನ್ನು ಸೆಳೆಯುತ್ತದೆ, ಕಾಡುತ್ತದೆ ಹಾಗೂ ಚಿಂತನೆಗೆ ಹಚ್ಚುತ್ತದೆ. ಮಲ್ಲಿಕಾರ್ಜುನ ಕಡಕೋಳ ಬರಹದಲ್ಲಿ ಇಂತಹ ವಿಸ್ಮಯವಾದ ಲೋಕ ಅಡಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕಲಬುರಗಿ ಗೆಳೆಯರು ಮತ್ತು ಅಭಿವ್ಯಕ್ತಿ ಪ್ರಕಾಶನ ದಾವಣಗೆರೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಕಡಕೋಳ ಅವರ “ಯಡ್ರಾಮಿ ಸೀಮೆ ಕಥನಗಳು‘ (ಜಿಂದಾ ಮಿಸಾಲ್–ಕಹಾನಿ) ಕೃತಿ ಲೋರ್ಕಾಪಣೆ ಮಾಡಿ ಅವರು ಮಾತನಾಡಿದರು. ಬರಹಗಾರರ ಅಂತರಂಗದ ಲೋಕ, ಮನುಷ್ಯ, ಮನುಷ್ಯನ ನಡುವಿನ ಲೋಕ, ಮನುಷ್ಯ ಮತ್ತು ಪ್ರಕೃತಿ ಕುರಿತ ಲೋಕ ಹಾಗೂ ಮನುಷ್ಯ ತನಗೆ ಅರಿವಿಲ್ಲದೇ ಸೃಷ್ಟಿಸುವ ವಿಸ್ಮಯವಾದ ಲೋಕ–ಹೀಗೆ ಈ ಲೋಕದ ಸಾಹಿತ್ಯದಲ್ಲಿ ಒಟ್ಟು ನಾಲ್ಕು ತರಹದ ಸಾಹಿತ್ಯ ಪ್ರಬೇಧಗಳನ್ನು ಒಳಗೊಂಡಿದೆ ಎಂದರು.
“ಯಡ್ರಾಮಿ ಸೀಮೆ ಕಥನಗಳು‘ ಕೃತಿಯಲ್ಲಿ ವ್ಯಕ್ತಿಚಿತ್ರ, ಹರಟೆ ಮತ್ತು ಕಿರು ಪ್ರಬಂಧಗಳಿವೆ. ಇವು 2-3 ಪುಟಗಳಲ್ಲಿ ಮುಗಿದು ಹೋಗುವಂತಹ ಬರಹಗಳಿವೆ. ಎಲ್ಲವೂ ಓದಿಸಿಕೊಂಡು ಹೋಗುವ ಗುಣ ಹೊಂದಿವೆ. ಅವೈದಿಕ ಚಿಂತನಧಾರೆಯ, ಅನುಭಾವ ಲೋಕದ ದೈತ್ಯ ಪ್ರತಿಭೆ ಕಡಕೋಳ ಮಡಿವಾಳಪ್ಪನವರ ಚಿಂತನೆಯಲ್ಲಿರುವ ಅನನ್ಯತೆ ಈ “ಯಡ್ರಾಮಿ ಸೀಮೆ ಕಥನಗಳು‘ ಕೃತಿಯಲ್ಲಿ ಅಡಗಿದೆ. ಓದಿಸಿಕೊಂಡು ಹೋಗುವ, ಸಂವೇದನಾಶೀಲ ಮತ್ತು ಹರಿತವಾದ ಚಿಂತನೆಗಳಿಂದ ಕೂಡಿದ ಕೃತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಪ್ರೊ| ಆರ್.ಕೆ. ಹುಡಗಿ ಮಾತನಾಡಿ, ಮಲ್ಲಿಕಾರ್ಜುನ ಕಡಕೋಳ ಅವರ “ಯಡ್ರಾಮಿ ಸೀಮೆ ಕಥನಗಳು‘ ಕೃತಿ ಕಲ್ಯಾಣ ಕರ್ನಾಟಕದ ಯಡ್ರಾಮಿ ಸೀಮೆಯನ್ನು ನಾಡಿನಾದ್ಯಂತ ವಿಸ್ತರಿಸುವ ಕೆಲಸ ಮಾಡಲಿದೆ. ಲೇಖಕರು ತಮ್ಮ ಕಲ್ಪನೆಯ ಮೂಸೆಯಲ್ಲಿ ಕಾಯಿಸಿ ಕೃತಿಯನ್ನು ಎರಕ ಹೊಯ್ದಿದ್ದಾರೆ ಎಂದು ಹೇಳಿದರು.
ಪುಸ್ತಕ ಕುರಿತು ಮಾತನಾಡಿದ ಲೇಖಕಿ ಸಂಧ್ಯಾ ಹೊನಗುಂಟಿಕರ್, “ಯಡ್ರಾಮಿ ಸೀಮೆ ಕಥನಗಳು‘ ಕೃತಿಯು ಕಥೆಯ ಹೊದಿಕೆ, ಕಾವ್ಯದ ನಡುಗೆ ಹೊಂದಿದ್ದು, ಅಜ್ಞಾತನೊಬ್ಬನ ಕನಸಿನಂತೆ ನಿರೂಪಣೆಗೊಂಡಿದೆ. ಲೇಖಕನಿಗೆ ಬದುಕು–ಬರಹ ಎರಡೂ ಮುಖ್ಯ, ಆದರೆ ಬರಹಕ್ಕಿಂತಲೂ ಬದುಕು ಬಹು ಮುಖ್ಯವಾದದ್ದು, ಸಗರನಾಡಿನ ಭಾಷೆ ಈ ಭಾಗದ ಎಲ್ಲರ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತದೆ ಎಂದರು.
ಹಿರಿಯ ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ, ಬರಹಗಾರ ಮಹಾಂತೇಶ ನವಲಕಲ್, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.