ಕಂಪ್ಲಿ ಅಭಿವೃದ್ಧಿಗೆ ಯತ್ನ: ಗಣೇಶ
ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿ•ಸರ್ಕಾರದಿಂದ ಅನುದಾನ ತರುವೆ
Team Udayavani, Jun 15, 2019, 4:34 PM IST
ಕಂಪ್ಲಿ: ಪಟ್ಟಣದ ವಿದ್ಯಾಸಾಗರ ಶಾಲೆ ಬಳಿ ರಸ್ತೆ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದರು.
ಕಂಪ್ಲಿ: ಪಟ್ಟಣದ 6ನೇ ವಾರ್ಡಿನ ವಿದ್ಯಾಸಾಗರ ಶಾಲೆಗೆ ತೆರಳುವ ರಸ್ತೆ ಬಳಿಯಲ್ಲಿ ಪುರಸಭೆಯ 2015-16 ಮತ್ತು 2017-18ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಅನುದಾನದ 15.73 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಬಿ.ಟಿ ರಸ್ತೆ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಅನುದಾನಗಳು ಮಂಜೂರಾಗಿದ್ದು, ಇದರಲ್ಲಿ 2.50 ಕೋಟಿ ವೆಚ್ಚದಲ್ಲಿ ಎಪಿಎಂಸಿಯಿಂದ ಕೊಟ್ಟಾಲ್ನ ಕಾಲುವೆವರೆಗಿನ ರಸ್ತೆ, ವಾಲ್ಮೀಕಿ ವೃತ್ತದಿಂದ ಎಲ್ಎಲ್ಸಿ ಕಾಲುವೆವರೆಗೆ 1.50 ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರ ಭೂಮಿಪೂಜೆ ಸಲ್ಲಿಸಲಾಗುವುದು. ರಾಮಸಾಗರದಿಂದ-ಕಂಪ್ಲಿ (ಬೈಪಾಸ್ ರಸ್ತೆ)ವರೆಗಿನ ರಸ್ತೆ ಅಭಿವೃದ್ಧಿಗೆ ಶೀಘ್ರ ಟೆಂಡರ್ ಕರೆದು, ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಂಪ್ಲಿ ಕ್ಷೇತ್ರದಲ್ಲಿರುವ ಎಲ್ಲ ರಸ್ತೆಗಳ ಅಭಿವೃದ್ಧಿ ಜತೆಗೆ ಜನತೆಗೆ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಪಟ್ಟಣ ಮಾದರಿ ಪಟ್ಟಣವನ್ನಾಗಿ ರೂಪಿಸುತ್ತೇನೆ. ಮುಂದಿನ ನಾಲ್ಕು ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಕ್ಷೇತ್ರದ ಜನರ ಋಣ ತೀರಿಸಲಾಗುವುದು. ಜೂ.28ರಂದು ಕಂಪ್ಲಿಯಲ್ಲಿಯೇ ಮನೆ ಮಾಡುವ ಮೂಲಕ ಇಲ್ಲಿಯೇ ವಾಸವಿದ್ದು, ಪಟ್ಟಣದ 23 ವಾರ್ಡ್ಗಳಲ್ಲಿ ಪ್ರತಿದಿನ ಎರಡು ವಾರ್ಡ್ಗಳಲ್ಲಿ ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿಗಳೊಂದಿಗೆ ಸಂಚಾರ ಮಾಡುವ ಮೂಲಕ ಸಾರ್ವಜನಿಕರ ಕುಂದುಕೊರತೆ ಆಲಿಸಿ ಸೂಕ್ತ ಪರಿಹಾರ ನೀಡಲಾಗುವುದು. ನಿಯಮಿತವಾಗಿ ಕ್ಷೇತ್ರದಲ್ಲಿ ಅಧಿಕಾರಿಗಳ ಸಭೆ ಆಯೋಜಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ಪುರಸಭೆ ಅಧ್ಯಕ್ಷ ಎಂ.ಸುಧೀರ್, ಸದಸ್ಯರಾದ ಭಟ್ಟ ಪ್ರಸಾದ್, ಎಂ.ರಾಜೇಶ್, ಮಾರೆಣ್ಣ, ಎಸ್.ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಗುತ್ತಿಗೆದಾರ ಭಾಸ್ಕರ್ರೆಡ್ಡಿ, ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಬಿ.ನಾರಾಯಣಪ್ಪ, ಎಲ್.ರಾಮನಾಯ್ಡು, ಬಿ.ಲಕ್ಷ್ಮಣ, ಮಾದನೂರ ಮಹೇಶ್, ಸೈಯದ್ ಉಸ್ಮಾನ್, ಕರಿಬಸವನಗೌಡ, ಹಬೀಬ್ ರೆಹಮಾನ್, ಅಕ್ಕಿ ಜಿಲಾನ್, ಎಸ್.ಆರ್.ವಲಿ ಬಾಷಾ, ಕರೇಕಲ್ ಮನೋಹರ, ಜಾಫರ್, ಕರೀಂಸಾಬ್ ಇತರರು ಇದ್ದರು.