ಗಮನ ಸೆಳೆಯುತ್ತಿವೆ ಸಸ್ಯ ಸಂಪತ್ತು; ಕ್ಯಾಕ್ಟಸ್, ಹಣ್ಣುಗಳ ಲೋಕ!
ಸಾಧಕ ಕೃಷಿಕ ತಿರುಮಲೇಶ್ವರ ಭಟ್ ಮನೆಯಲ್ಲೇ ಆಕರ್ಷಕ ಉದ್ಯಾವನವನ
Team Udayavani, May 18, 2019, 12:37 PM IST
ಕಾಣಿಯೂರು: ಮನೆಯ ಸುತ್ತಲೂ ಮನಮೋಹಕ ಹಸಿರ ರಾಶಿಯನ್ನು ಹೊದಿಸಿ ಮನೆಯಂಗಳವನ್ನೇ ನಂದನವನವನ್ನಾಗಿಸಿದ ಕೃಷಿಕರೋರ್ವರು ಮನೆಯ ಪರಿಸರವನ್ನು ಸೊಬಗಿನ ತಾಣವನ್ನಾಗಿಸಿದ್ದಾರೆ. ಇವರ ಮನೆಯಲ್ಲಿ ಗಮನ ಸೆಳೆಯುತ್ತಿವೆ ಕ್ಯಾಕ್ಟಸ್ ಲೋಕ, ಸಸ್ಯ ಸಂಪತ್ತು.
ರಾಜ್ಯ ಸರಕಾರದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕೃಷಿಕ, ಕೊಡಿಯಾಲ ಗ್ರಾಮದ ಕುರಿಯಾಜೆ ತಿರುಮಲೇಶ್ವರ ಭಟ್ ಅವರು ತಮ್ಮ ಮನೆಯಲ್ಲಿಯೇ ವೃಂದಾವನವನ್ನು ಸೃಷ್ಟಿಸಿದ್ದಾರೆ. ಕಾಣಿಯೂರಿನಿಂದ ಕೊಡಿಯಾಲ ಮೂಲಕ ಬೆಳ್ಳಾರೆ ಕಲ್ಲಪಣೆಗೆ ಸಾಗುವ ದಾರಿಯಲ್ಲಿ ರಸ್ತೆ ಬದಿಯಲ್ಲೇ ಹಸಿರ ಹೊದಿಕೆಯ ಮನೆ, ಸಸ್ಯ ಸಂಪತ್ತು ಮೈದಳೆವ ಹಸಿರು ತಮ್ಮನ್ನು ಸೆಳೆಯದೇ ಇರುವುದಿಲ್ಲ.
ಅವರ ಮನೆಯಂಗಳಕ್ಕೆ ಪ್ರವೇಶಿಸಿದರೆ ಯಾವುದೋ ಸುಂದರ ಪಾರ್ಕ್ನ ಒಳಗೆ ಹೊಕ್ಕಂತೆ ಅನುಭವವಾಗುತ್ತದೆ. ಭಿನ್ನ ರೀತಿಯಲ್ಲಿ ಕೃಷಿ ಮಾಡಿ ಕೃಷಿ ಪಂಡಿತ ಪ್ರಶಸ್ತಿ ಪಡೆದ ಅವರು ಮನೆಯ ಸುತ್ತಲೂ ತಮ್ಮ ಹಸುರು ಪ್ರೇಮವನ್ನು ಪ್ರದರ್ಶಿಸಿ ತನ್ನ ಮನೆಯನ್ನು ಆಕರ್ಷಣೆಯ ತಾಣವನ್ನಾಗಿಸಿದ್ದಾರೆ.
ಏನೇನಿದೆ ಇಲ್ಲಿ?
ವಿವಿಧ ರೀತಿಯ ಅಲಂಕಾರಿಕ ಗಿಡಗಳು, ತಾವರೆಕೊಳ, ಕಾವೇರಿ ದೇವಿಯ ಮೂರ್ತಿ, ವಿವಿಧ ರೀತಿಯ ಮೂರ್ತಿಗಳು, ಆಕರ್ಷಕ ವಿನ್ಯಾಸದಲ್ಲಿ ರೂಪಿಸಿದ ವಿವಿಧ ತಳಿಯ ಅಲಂಕಾರಿಕ ಗಿಡಗಳು, ಕ್ಯಾಕ್ಟಸ್(ಕಳ್ಳಿ ಗಿಡಗಳು) ಇವರ ಹೂದೋಟವನ್ನು ಸುಂದರವಾಗಿಸಿದೆ. ಎಲ್ಲಿ ಹೋದರೂ ಒಂದು ಗಿಡದೊಂದಿಗೆ ಹಿಂತಿರುಗುವ ತಿರುಮಲೇಶ್ವರ ಭಟ್ಟರು ಕಳೆದ ಎರಡು ದಶಕಕ್ಕೂ ಹೆಚ್ಚಿನ ಪ್ರಯತ್ನದ ಮೂಲಕ ಮನೆಯಲ್ಲಿ ನಂದನವನವನ್ನು ರೂಪಿಸಿದ್ದಾರೆ.
ಆಕರ್ಷಕ ತಾವರೆ ಕೊಳ, ಅದರಲ್ಲಿ ಅರಳಿ ನಿಂತಿರುವ ತಾವರೆಗಳು, ಆಶೀರ್ವಾದ ನೀಡುವ ತಾಯಿ ಕಾವೇರಿ, ಸುತ್ತಲೂ ನವಿಲು, ಗಿಳಿ, ಕೊಕ್ಕರೆ, ಬಾತುಕೊಳಿ, ಆಮೆ, ಮೊಲ, ಜಿಂಕೆ, ಮೀನುಗಳು, ಮೀನು ಹಿಡಿಯುವವರು ಹೀಗೆ ಜೀವಂತಿಕೆ ಮತ್ತು ಲವಲವಿಕೆ ನಲಿದಾಡುವಂತೆ ಭಾಸವಾಗುವ ಹಲವು ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಹಸಿರು ಹುಲ್ಲಿನ ನುಣ್ಣನೆಯ ಹೊದಿಕೆಯ ಮಧ್ಯೆ ಕಲ್ಲುಗಳನ್ನು ಹಾಸಿ ಸುಂದರಗೊಳಿಸಿದ್ದಾರೆ. ಸ್ಟೆಪ್ಪರ್ ಗಿಡಗಳು, ಬೋನ್ಸಾಯಿ ಗಿಡಗಳು, ಗೋಲ್ಡನ್ ಸೈಪ್ರಸ್, ತೂಜಾ, ಲಂಡನ್ ಪೈನ್ ಹೀಗೆ ವಿವಿಧ ತಳಿಯ ಅಲಂಕಾರಿಕ ಗಿಡಗಳು ತಿರುಮಲೇಶ್ವರ ಭಟ್ಟರ ಹೂದೋಟವನ್ನು ಅಲಂಕರಿಸಿದೆ. ಜತೆಗೆ ವಿವಿಧ ಜಾತಿಯ ಹೂವಿನ ಗಿಡಗಳೂ ಇವೆ. ಕೇರಳ ಮತ್ತು ರಾಜ್ಯದ ವಿವಿಧ ಕಡೆಗಳಿಂದ ತಿರುಮಲೇಶ್ವರ ಭಟ್ ಅಲಂಕಾರಿಕ ಗಿಡಗಳನ್ನು ತಂದು ತನ್ನ ಹೋದೋಟವನ್ನು ಆಕರ್ಷಕವಾಗಿರಿಸಿದ್ದಾರೆ.
ನೂರಾರು ಹಣ್ಣುಗಳ ಗಿಡಗಳಿವೆ!
ಇವರ ಮನೆ ಮುಂದೆ ಉದ್ಯಾನವನವಿದ್ದರೆ ಇವರ ತೋಟದಲ್ಲಿ ವಿವಿಧ ಬಗೆಯ ಸಸ್ಯ ಸಂಪತ್ತು ಇದೆ. ಇಲ್ಲಿ ಪಿತ್ತಲ್, ರೆಡ್ ಆ್ಯಪಲ್ ಬರ್, ಬರಾಬ, ಗೋಲ್ಡನ್ ಫ್ರೂಟ್, ಕೆಪ್ಪಲ್ ಪ್ರೂಟ್, ಫಿಂಗರ್ ಲೆಮೆನ್ (ಕೆಂಪು ಮತ್ತು ಹಳದಿ), ಮಿರಾಕಲ್ ಫ್ರುಟ್, ಹಳದಿ ಪುನರ್ಪುಳಿ, ಮಟ್ ಆ್ಯಪಲ್, ರಂಬುಆಟನ್ ಇ35, ರಂಬೂಟಾನ್ ಸ್ಕೂಲ್ ಬಾಯ್, ಮಕೋತಾ ದೇವ, ಥಾಯ್ಲೆಂಡ್ ಹಲಸು, ಥಾಯ್ಲೆಂಡ್ ಸೀಡ್ ಲೆಸ್ ಹಲಸು, ಗೋಲ್ಡನ್ ಚಕೋತಾ, ಮ್ಯಾಕ್ಸಿಕನ್ ಸಫೋಟ, ಲಿಪೊಟೆ, ರೆಡ್ ದುರಿಯನ್, ಕಾಲಾ ಭಾಷ್, ಸ್ವೀಟ್ ಮೊಟ್ಟಿ, ಹೈಬ್ರಿಡ್ ಬ್ಲೂಬೆರಿ, ಆರೆಂಜ್ ಬಿಗ್, ಜಂಬೋ ರೆಡ್ ಮ್ಯಾಂಗೋ, ದಸರಿ ಮ್ಯಾಂಗೋ, ಒರ ಟೆಗಿಡುಗ ಮ್ಯಾಂಗೋ, ಥಾಯ್ಲೆಂಡ್ ಸೀಡ್ಲೆಸ್ ಮ್ಯಾಂಗೋ, ಸ್ಪ್ರಿಂಗ್ ಗೂವ, ಕಾಫಲ್, ಕುವಾಸಿ, ಅರಸು ಬಾಯ್, ಜಂಬೋ ವಾಟರ್ ಆ್ಯಪಲ್, ಜಾಕ್ ಜೆ33, ಮ್ಯಾಂಗೋಸ್ಟಿನ್, ರಾಜಾ ನೆಲ್ಲಿ, ವಿಯೆಟ್ನಾಂ ಸೂಪರ್ ಅರ್ಲಿ ಜಾಕ್, ಪುಲ್ಸಾನ್, ಖರ್ಜೂರಾ, ಮರಂಗಾ ಹಲಸು, ಮಾಪರಂಗ ಮ್ಯಾಂಗೋ, ಚಂಪಡಕಾ ಜಾಕ್ಫ್ರುಟ್, ಕ್ಯಾಮಡಳ ಫ್ರುಟ್, ಲಾಂಗನ್, ಆ್ಯಪಲ್ ರೆಡ್ ಗೂವ, ಕೆಜಿ ಗೂವ, ರಂಬೂಟಾನ್ ಮಲ್ವಾನ, ಅಕುಮಾ ಆಫ್ರಿಕನ್ ಫ್ರೂಟ್, ಚೆರಿ,ಕ್ಯುಯಿನಿ ಮಾವು, ಇಂಗ ಲೌಂಮಿಂಗ್ ಐಸ್ಕ್ರೀಂ ಬೀನ, ಇಂಕ್ ಫೀನಟ್, ಆಸ್ಟ್ರೇಲಿಯನ್ ಸಡಕ್ಬೇ ಚೆರಿ, ಕಾವೆರಿ ವಾಜಾ, ಸ್ವೀಟ್ ಲೂಬಿಕಾ, ಮನಿಲಾ ಟೆನ್ನಿಸ್ ಬಾಲ ಚೆರಿ ಮ ಮೊದಲಾದ ಹಲವಾರು ಸಸ್ಯ ಸಂಪತ್ತು ಇಲ್ಲಿದೆ.
ಕ್ಯಾಕ್ಟಸ್ ಮೋಹ, ಕಲ್ಲುಗಳ ಆಗರ
ತಿರುಮಲೇಶ್ವರ ಭಟ್ಟರ ಕ್ಯಾಕ್ಟಸ್ ಪ್ರೇಮವೂ ವಿಶೇಷವಾದುದು. ಸುಮಾರು 350ಕ್ಕೂ ಹೆಚ್ಚು ಕ್ಯಾಕ್ಟಸ್ (ಕಳ್ಳಿ) ಗಿಡಗಳನ್ನು ಬೆಳೆದು ಗಮನ ಸೆಳೆದಿದ್ದಾರೆ. ಕಳ್ಳಿ ಗಿಡಗಳೆಂದರೆ ಇವರಿಗೆ ಅಚ್ಚುಮೆಚ್ಚು. ಇದರ ಸಂಗ್ರಹಕ್ಕಾಗಿ ಅವರು ಸಾಹಸವನ್ನೇ ಮೆರೆದಿದ್ದಾರೆ. ಸುಂದರವಾದ ಹೂದಾನಿಗಳಲ್ಲಿ, ಕುಂಡಗಳಲ್ಲಿ ಅವುಗಳನ್ನು ಬೆಳೆಸಿದ್ದಾರೆ. ಕ್ಯಾಕ್ಟಸ್ ಬೆಳೆಸಲು ವಿಶೇಷ ಶ್ರಮವನ್ನೇ ವಹಿಸಬೇಕಾಗಿದೆ. ಮಳೆಯ ನೀರು ತಾಗದಂತೆ ತಾರಸಿಯನ್ನೂ ಮಾಡಬೇಕಾಗುತ್ತದೆ. ಕ್ಯಾಕ್ಟಸ್ಗಳು ಅನೇಕ ವರ್ಷಗಳ ಕಾಲ ಉಳಿದು ಸುಂದರವಾಗಿ ಕಾಣುತ್ತದೆ. ಮನೆಯ ಸುತ್ತಲೂ, ವರಾಂಡ, ತಾರಸಿಯ ಮೇಲೆ, ದಾರಿಯ ಇಕ್ಕೆಲಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕ್ಯಾಕ್ಟಸ್ ಸೌಂದರ್ಯವೇ ರಾರಾಜಿಸುತ್ತದೆ. ಕೇರಳ, ಬೆಂಗಳೂರುಗಳಿಂದ ವಿವಿಧ ಜಾತಿಯ ಕ್ಯಾಕ್ಟಸ್ಗಳನ್ನು ತಂದಿದ್ದಾರೆ. ಮನಮೋಹಕ ಕಲ್ಲುಗಳ ಸಂಗ್ರಹ ಇವರ ಮತ್ತೂಂದು ವೈಶಿಷ್ಟ್ಯ. ಅದರಲ್ಲೂ ನೀರಿನಲ್ಲಿ ತೇಲುವ ಕಲ್ಲುಗಳು, ಬಿಳಿ ಕಲ್ಲುಗಳು ಗಮನ ಸೆಳೆಯುತ್ತದೆ. ನೇಪಾಳ, ಡಿಂಡಿಗಲ್, ಅಜಂತಾ, ಕೇರಳಗಳಿಂದ ಕಲ್ಲುಗಳನ್ನು ತಂದಿದ್ದಾರೆ. ಸ್ಥಳೀಯವಾಗಿ ಹೊಳೆಗಳಿಂದಲೂ ಸುಂದರವಾದ ಕಲ್ಲುಗಳನ್ನು ಹೆಕ್ಕಿ ತಂದು ಸಂಗ್ರಹಿಸಿಟ್ಟಿದ್ದಾರೆ.
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ