ಕಾಫಿ ಎಸ್ಟೇಟ್ ಆಸೆಗಾಗಿ ಅತ್ತಿಗೆಯನ್ನೇ ಕೊಲ್ಲಲು ಸುಪಾರಿ ಕೊಟ್ಟು ತಾನೆ ಸಿಕ್ಕಿಹಾಕಿಕೊಂಡ
Team Udayavani, Dec 31, 2019, 12:33 PM IST
Representative Image
ಮಡಿಕೇರಿ: ಅತ್ತಿಗೆಯ ಆಸ್ತಿಯ ಮೇಲೆ ಕಣ್ಣು ಹಾಕಿದ್ದ ಮೈದುನ ಆಕೆಯನ್ನು ಕೊಲ್ಲಲು ಸುಪಾರಿ ಕೊಟ್ಟು ತಾನೆ ಸಿಕ್ಕಿಹಾಕಿಕೊಂಡ ಘಟನೆ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ.
ಮಡಿಕೇರಿಯ ಚೇಲಾವರದ ಸುಬ್ಬಯ್ಯ ಎಂಬಾತೇ ಅತ್ತಿಗೆಯ ಕೊಲೆಗೆ ಸುಪಾರಿ ಕೊಟ್ಟು ಪೊಲೀಸರ ಅತಿಥಿಯಾಗಿರುವಾತ.
ಆರೋಪಿ ಸುಬ್ಬಯ್ಯ ತನ್ನ ಅಣ್ಣನ ಕಾಫಿ ಎಸ್ಟೇಟ್ ಅನ್ನು ಕಬಳಿಸಲು ಅನೇಕ ಬಾರಿ ಪ್ರಯತ್ನಪಟ್ಟಿದ್ದ. ಆದರೆ ಅದರಲ್ಲಿ ವಿಫಲನಾಗಿದ್ದ. ಕಾಫಿ ಎಸ್ಟೇಟ್ ಅತ್ತಿಗೆಯ ಹೆಸರಲ್ಲಿ ಇರುವುದು ತಿಳಿದು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.
ಅತ್ತಿಗೆಯನ್ನು ಕೊಲೆಗೈಯಲು ಅದೇ ತೋಟದಲ್ಲಿ ಕೆಲಸ ಮಾಡುವ ಅಸ್ಸಾಂ ಮೂಲದ ವ್ಯಕ್ತಿಯೋರ್ವನಿಗೆ ಸುಪಾರಿ ನೀಡಿದ್ದ. ಕೊಲೆಯ ನಂತರ 5 ಲಕ್ಷ ಹಣ ನೀಡುವುದಾಗಿ ಹೇಳಿದ್ದ. ಆದರೆ ಆ ಕಾರ್ಮಿಕ ಈ ವಿಷಯವನ್ನು ಸುಬ್ಬಯ್ಯನ ಅತ್ತಿಗೆಯ ಬಳಿ ಹೇಳಿದ್ದು, ಇದರಿಂದ ಪ್ರಕರಣ ಬಯಲಾಗಿದೆ.
ಕೊಲ್ಲಲು ಸುಪಾರಿ ನೀಡಿದ್ದ ಮೈದುನನ ವಿರುದ್ಧ ಅತ್ತಿಗೆ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸುಬ್ಬಯ್ಯನನ್ನು ಬಂಧಿಸಿದ್ದಾರೆ.