ಬಂಟರ ಕ್ರೀಡಾಕೂಟ: ವಿರಾಟ್ ರೈ ತಂಡ ಚಾಂಪಿಯನ್
Team Udayavani, May 15, 2019, 6:10 AM IST
ಮಡಿಕೇರಿ : ಕೊಡಗು ಜಿಲ್ಲಾ ಬಂಟರ ಯುವ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿದ ಬಂಟ ಸಮುದಾಯ ಬಾಂಧವರ 6ನೇ ವರ್ಷದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ವಿರಾಟ್ ರೈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಮಲಾ°ಡ್ ಬಂಟ್ಸ್ ವಿರಾಜಪೇಟೆ ತಂಡವನ್ನು 50 ರನ್ ಅಂತರದಿಂದ ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ರೈ ತಂಡ 6 ಓವರ್ನಲ್ಲಿ 121 ರನ್ ಬಾರಿಸಿತು. ತಂಡದ ಪರ ರೇಣುಕಾ ಪ್ರಸಾದ್ ವೈಯಕ್ತಿಕ 66 ರನ್, ನಿಖೀಲ್ 43 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಗುರಿ ಬೆನ್ನತ್ತಿದ ಮಲಾ°ಡ್ ಬಂಟ್ಸ್ ತಂಡ ನಿಗದಿತ ಓವರ್ನಲ್ಲಿ 72 ರನ್ ಗಳಿಸಲು ಮಾತ್ರ ಶಕ್ತವಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಯಂಗ್ ಬಂಟ್ ಪ್ಯಾಂಥರ್ಸ್ ಕೈಕೇರಿ ತಂಡವನ್ನು ಮಣಿಸಿ ಮಲಾ°ಡ್ ಬಂಟ್ಸ್ ತಂಡ ಫೈನಲ್ಗೆ ಅರ್ಹತೆ ಪಡೆದರೆ, ರೈ ಬ್ರದರ್ಸ್ ನೀಲ್ಮಾಡು ತಂಡವನ್ನು ಸೋಲಿಸಿ ವಿರಾಟ್ ರೈ ತಂಡ ಫೈನಲ್ ಪ್ರವೇಶಿಸಿತು.
ಸಮ್ಮಾನ, ಬಹುಮಾನ ವಿತರಣೆ
ರವಿವಾರ ಸಂಜೆ ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾರೋಪ ಸಮಾರಂಭವನ್ನು ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ ಉದ್ಘಾಟಿಸಿದರು. ವಿವಿಧ ಕ್ಷೇತ್ರದ ಸಾಧಕರಾದ ಸಮಾಜ ಸೇವಕ ಉಮೇಶ್ ಶೆಟ್ಟಿ ಎಂ.ಬಿ. ಮಂದಾರ್ತಿ, ಮುಖ್ಯಮಂತ್ರಿ ಪದಕ ವಿಜೇತ ಎಎಸ್ಐ ಬಿ.ಕೆ. ಸುರೇಶ್ ರೈ, ಉದ್ಯಮಿ ಐತಪ್ಪ ರೈ, “ಪ್ರಕೃತಿ ಮುನಿದ ಹಾದಿಯಲ್ಲಿ…’ ಕೃತಿ ಬರೆದ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, ಮಂಗಳೂರು ವಿವಿ (ಬಯೋಕೆಮಿಸ್ಟ್ರಿ) ಚಿನ್ನದ ಪದಕ ವಿಜೇತೆ ನವ್ಯಾ ವಿಕಾಸ್ ರೈ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಮುದಾಯದ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.