ನಗರಸಭಾಧ್ಯಕ್ಷರಿಗೆ ಅವಮಾನ ಆರೋಪ ಮಹಿಳಾ ಕಾಂಗ್ರೆಸ್ನಿಂದ ಪ್ರತಿಭಟನೆ
Team Udayavani, Dec 5, 2018, 2:10 AM IST
ಮಡಿಕೇರಿ: ನಗರದ ಪ್ರಥಮ ಪ್ರಜೆ ನಗರಸಭಾಧ್ಯಕ್ಷರಿಗೆ ನಗರಸಭೆಯ ಬಿಜೆಪಿ ಸದಸ್ಯರೊಬ್ಬರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ನಗರ ಮಹಿಳಾ ಕಾಂಗ್ರೆಸ್ ಸಮಿತಿ ನಗರಸಭೆ ಎದುರು ಪ್ರತಿಭಟನೆ ನಡೆಸಿತು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ಸಾರ್ವಜನಿಕವಾಗಿ ನಿಂಧಿಸಿರುವ ಬಿಜೆಪಿ ಸದಸ್ಯ ಉಣ್ಣಿಕೃಷ್ಣನ್ ಅವರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಗೀತಾ ಲಿಂಗಪ್ಪ ಮಾತನಾಡಿ, ಬಿಜೆಪಿಯ ಕೆಲವು ಸದಸ್ಯರು ನಗರದ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುತ್ತಿರುವುದು ಖಂಡನೀಯವೆಂದರು. ಬಿಜೆಪಿಗೆ ಮಹಿಳೆಯರ ಮೇಲೆ ನೈಜ ಗೌರವವಿದ್ದರೆ ಉಣ್ಣಿಕೃಷ್ಣನ್ ಅವರನ್ನು ವಜಾಗೊಳಿಸಬೇಕು ಎಂದರು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಾತನಾಡಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ಗಳ ಸುಗಮ ಸಂಚಾರಕ್ಕೆ ರಾಜಾಸೀಟು ರಸ್ತೆ ವಿಸ್ತರಣೆಗೆ ಮುಂದಾದಾಗ ಸ್ಥಾಯಿ ಸಮಿತಿ ಅಧRಕ್ಷ ಉಣ್ಣಿಕೃಷ್ಣ ಹಾಗೂ ಬಿಜೆಪಿಯ ಕೆಲವು ಸದಸ್ಯರು ತಡೆಯೊಡ್ಡಿರುವುದಲ್ಲದೆ ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು. ಈ ವಿಚಾರವಾಗಿ ಈಗಾಗಲೇ ಸಾಕ್ಷಿ ಸಹಿತ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸ್ವರ್ಣಲತಾ ಚಂಗಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಉಪಾಧ್ಯಕ್ಷರಾದ ಶಶಿ, ನಗರಸಭೆ ಸದಸ್ಯರಾದ ಜುಲೇಕಾಬಿ, ಮಾಜಿ ಸದಸ್ಯರಾದ ಫಿಲೋಮಿನ ಮತ್ತಿತರರು ಪಾಲ್ಗೊಂಡಿದ್ದರು.