ಸಂವಿಧಾನದ ಗೌರವಕ್ಕೆ ಧಕ್ಕೆ : ದಲಿತ ಸಂಘಟನೆಗಳ ಆರೋಪ
Team Udayavani, Nov 21, 2019, 4:59 AM IST
ಮಡಿಕೇರಿ: ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವನ್ನು ರಕ್ಷಣೆ ಮಾಡುವನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಹಾಗೂ ಭಾರತೀಯ ರಿಪಬ್ಲಿಕನ್ ಪಾರ್ಟಿ (ಆರ್ಪಿಐ)ಯ ವತಿಯಿಂದ ನ.25ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಕೊಡಗು ಜಿಲ್ಲಾಧ್ಯಕ್ಷ ಕೆ.ಬಿ.ರಾಜು ಹಾಗೂ ಆರ್ಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಹೆಬ್ಟಾಲೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಅಂಬೇಡ್ಕರ್ ನಿರ್ಮಿಸಿದ ಸಂವಿಧಾನ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ನೀಡಿದ್ದು, ಇದರಪರಿಣಾಮವಾಗಿ ಇಂದು ಭಾರತದ ಶೇ.85ರಷ್ಟಿರುವ ಬಹುಜನರಾದ ಶೂದ್ರಾತಿಶೂದ್ರ ಜಾತಿಗಳಾದ ಒಬಿಸಿ, ಪರಿಶಿಷ್ಟ ಜಾತಿ-ಪಂಗಡ, ಧಾರ್ಮಿಕ ಅಲ್ಪಸಂಖ್ಯಾಕರಾದಿಯಾಗಿ ಎಲ್ಲಾ ಭಾರತೀಯ ಪ್ರಜೆಗಳೂ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಈ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಎತ್ತಿ ಹಿಡಿದಿದೆ. ಇಂತಹ ಪ್ರಜಾಪ್ರಭುತ್ವತೆ ಹೊಂದಿರುವ ಸಂವಿಧಾನವನ್ನು ಬದಲಾವಣೆ ಮಾಡಲೇಬೇಕೆಂದು ಕೆಲವು ಕಿಡಿಗೇಡಿ ಮನುವಾದಿಗಳು ವಾದಿಸುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.
ಹಿಂದೆ ಇದ್ದ ಕೆಲವು ಮನುವಾದಿಗಳಿಂದ ಇಂದು ದೇಶದ ಸಂವಿಧಾನವೇ ಅಪಾಯಕ್ಕೆ ಸಿಲುಕಿದ್ದು, ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು, ಹಿಂದುಳಿದ ವರ್ಗಗಳು, ಪ್ರಗತಿಪರ ಸಂಘಟನೆಗಳು ಜಾಗೃತರಾಗಿ ನ.25ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದರು.
. ಅಂದು ಪೂರ್ವಾಹ್ನ 10.30 ಗಂಟೆಗೆ ನಗರದ ಸುದರ್ಶನ ವೃತ್ತದಲ್ಲಿರುವ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ರಿಪಬ್ಲಿಕನ್ ಪಾರ್ಟಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಡಿ.ಲತಾ ಮಾಲಂಬಿ, ಉಪಾಧ್ಯಕ್ಷೆ ಕೆ.ಜೆ.ಸಾವಿತ್ರಮ್ಮ,ಡಿಎಸ್ಎಸ್ ಭೀಮವಾದದ ಅಮ್ಮತ್ತಿ ಘಟಕದ ಅಧ್ಯಕ್ಷೆ ಹೆಚ್.ವಿ.ಜಯಮ್ಮ, ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ವೀಣಾ ಉಪಸ್ಥಿತರಿದ್ದರು
ಸಮಾನತೆ ಸಾರಿದ್ದರು
ಅಂಬೇಡ್ಕರ್ ಅವರು ಪೂರ್ವಿಕರ ಹೋರಾಟ ಗಳನ್ನು ಮನಗಂಡು ಎಲ್ಲಾ ಜಾತಿ, ಧರ್ಮಕ್ಕೂ ಸಮಾ ನತೆ ಸಾರುವ ಸಂವಿಧಾನವನ್ನು ನೀಡಿದ್ದರು. ಆದರೆ ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚಿಸಿಲ್ಲ. ಅನೇಕರು ಸೇರಿ ನಡೆಸಿದ ಸಾಮೂಹಿಕ ಪ್ರಯತ್ನದ ಫಲವಾಗಿ ಇದು ರಚನೆಯಾಗಿದೆ ಎಂದು ವಾದಿಸಿ ಪಠ್ಯಪುಸ್ತಕದಲ್ಲೂ ಮುದ್ರಿಸಿರುವುದು ಅಂಬೇಡ್ಕರ್ ಗೆ ಮಾಡುವ ಅಪಮಾನ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್